PLACE YOUR AD HERE AT LOWEST PRICE
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಮಾದಿಗ ಸಮುದಾಯದ ವಿದ್ಯಾರ್ಥಿ ರಾಕೇಶನು ಹೊಲೆಯರ ಹುಡುಗಿಯನ್ನು ಮಾತಾಡಿಸಿದನೆಂಬ ಕಾರಣದಿಂದ ಅದೇ ಗ್ರಾಮದ ಹೊಲೆಯರು ಕೊಂದಿದ್ದಾರೆ ಎಂದು ಆರೋಪಿಸಿ ಘಟನೆಯ ಬಗ್ಗೆ ಕವಿ ವಡ್ಡಗೆರೆ ನಾಗರಾಜಯ್ಯ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಕೋಲಾರ ದಲಿತ ಚಳವಳಿಯ ತಾಯಿನೆಲ. ದಲಿತ ಸಂಘರ್ಷ ಸಮಿತಿಯು ಹುಟ್ಟು ಪಡೆದ ಹೊತ್ತಿನಲ್ಲಿ ಅಸ್ಪೃಶ್ಯೇತರ ದುಃಖಿತರನ್ನು ಕೂಡಾ ದಲಿತರೆಂದೇ ತಬ್ಬಿಕೊಳ್ಳುವ ಮಾನವೀಕರಣದ ಬಂಧುತ್ವದ ನೈತಿಕ ಪಾಠಗಳನ್ನು ಆಗಿನ ದಸಂಸ ನಮಗೆ ಕಲಿಸಿಕೊಟ್ಟಿತ್ತು.
ಇದೇ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹುಣಸೆಕೋಟೆ ಗ್ರಾಮದ ಕುಂಬಾರ ಸಮುದಾಯದ ಅನುಸೂಯಳ ಮೇಲೆ ಅತ್ಯಾಚಾರ ನಡೆದಾಗ, “ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮಾ ನನ್ನ ತಂಗಿ ಅನುಸೂಯ” ಎಂದು ದಲಿತರೆಲ್ಲರೂ ಕರುಳಗೂಡ ದನಿಗೂಡಿ ಹಾಡುವ ಮೂಲಕ ತಂಗಿ ಎಂದು ಸೋದರ ಬಂಧುತ್ವದಿಂದ ಕಣ್ಣೀರು ಒರೆಸಿದ್ದೆವು. ಇದು ದಲಿತ ಚಳವಳಿಯ ಬಹುದೊಡ್ಡ ನೈತಿಕ ಶಕ್ತಿ.
ಸಾಮಾಜಿಕ ನ್ಯಾಯದ ಚಳವಳಿಗಳ ತಾಯಿಯಾದ ದಸಂಸ ವಿಘಟನೆಗೊಂಡ ಬಳಿಕ ಅಸ್ಪೃಶ್ಯೇತರ ಸಾಮಾಜಿಕ ವಲಯಗಳ ಶೋಷಿತರನ್ನು ದಲಿತರೆಂದೇ ತಬ್ಬಿಕೊಳ್ಳುವ ಮಾನವೀಕರಣದ ನೈತಿಕ ಪಾಠಗಳು ಕಣ್ಮರೆಯಾಗತೊಡಗಿದವು.
ಇದರ ಕಹಿಫಲವೇ ಈಗ ಹೊಲೆಯರ ಕೈಗಳಲ್ಲಿ ರಾಕೇಶ್ ಎಂಬ ವಿದ್ಯಾರ್ಥಿ ಕೊಲೆಯಾಗಿ ಬಿದ್ದು ಶವವಾಗಿರುವುದು. ಕವಿ ಕೋಟಿಗಾನಹಳ್ಳಿ ರಾಮಯ್ಯವರು ಬರೆದಿರುವ ‘ನನ್ನ ತಂಗಿ ಅನುಸೂಯ’ ಹೋರಾಟದ ಹಾಡಿನ ಮಾನವೀಕರಣದ ಮಹಾ ಆಶಯದ ಕೊಲೆಯೂ ಇದು.
ಸಾಮಾಜಿಕ ಚಳವಳಿಗಳಲ್ಲಿ ನೀಲಿ ಬಾವುಟ ಹಿಡಿದು ‘ಜೈ ಭೀಮ್’ ಘೋಷಣೆ ಕೂಗುತ್ತಾ ಹೆಜ್ಜೆಯೂರಿ ನಡೆಯುತ್ತಿದ್ದ ಮಾದಿಗರ ರಾಕೇಶನನ್ನು ಅವನ ಹೊಲೆಯ ಸೋದರರೇ ಕೊಂದು ತಿನ್ನುವುದೆಂದರೆ, ಅದು ಅಂಬೇಡ್ಕರ್ ಅವರ ‘ಜೈ ಭೀಮ್’ ಮಂತ್ರದ ಕೊಲೆಯಲ್ಲದೆ ಮತ್ತೇನೂ ಅಲ್ಲ.
ಡಾ.ವಡ್ಡಗೆರೆ ನಾಗರಾಜಯ್ಯ
8722724174