PLACE YOUR AD HERE AT LOWEST PRICE
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಉತ್ತಮ ಪರಿಣಾಮ ಬೀರುತ್ತದೆಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಭಿಪ್ರಾಯಪಟ್ಟರು.
ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ರಥಸಪ್ತಮಿ ಅಂಗವಾಗಿ ಭಾನುವಾರ ಬೆಳಿಗ್ಗೆ ಏರ್ಪಡಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಶಿಕ್ಷಣವನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಕೋಲಾರದಲ್ಲಿ ದಾನಿಗಳ ನೆರವಿನಿಂದ ಪತಂಜಲಿ ಯೋಗ ಮಂದಿರವನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಎಲ್ಲೆಡೆ ಶಾಖೆಗಳನ್ನು ತೆರೆದು ಯೋಗ ಶಿಕ್ಷಣ ನೀಡುತ್ತಿದ್ದು, ಈಗ ಹೆಮ್ಮರವಾಗಿ ಸಂಘಟನೆ ಬೆಳೆದಿರುವ ಹೆಮ್ಮೆಯ ಸಂಗತಿ ಎಂದರು.
ವಿಶೇಷ ಆಹ್ವಾನಿತರಾಗಿದ್ದ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ರವರು ಮಾತನಾಡಿ, ಇಡೀ ಜಗತ್ತಿಗೆ ಯೋಗಾಸನದ ಮಹತ್ವವನ್ನು ಸಾರಿದ ನಮ್ಮ ದೇಶದಲ್ಲಿ ಯೋಗ ಶಿಕ್ಷಣ ಎಲ್ಲರಿಗೂ ತಲುಪಿಲ್ಲ. ಕೋಲಾರ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸಿಗಬೇಕೆಂಬ ಧ್ಯೇಯದಿಂದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರಮಿಸುತ್ತಿದೆಯೆಂದು ಶ್ಲಾಘಿಸಿದರು.
ಹಿರಿಯ ವಕೀಲರು ಹಾಗೂ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷರಾದ ಬಿಸಪ್ಪಗೌಡರು ಮಾತನಾಡಿ, ವಯಸ್ಸಾದವರು ಸುಸ್ತಾಗುತ್ತಿದೆ, ತಲೆ ಬೆಳ್ಳಗಾಗಿದೆ, ರಕ್ತ ಕಡಿಮೆಯಾಗಿದೆ, ಆಯಸ್ಸು ಕ್ಷೀಣಿಸುತ್ತಿದೆ ಎಂದು ಕೊರಗದೆ ಯೋಗಾಭ್ಯಾಸವನ್ನು ಮಾಡುವುದರಿಂದ ಚೈತನ್ಯಶೀಲ ಯುವಕ-ಯುವತಿಯರಂತೆ ಬಹುಕಾಲ ಸಂತೋಷವಾಗಿ ಬದುಕಬಹುದೆಂದು ಅಭಿಪ್ರಾಯಪಟ್ಟರು.
ಸಮಿತಿಯ ಪ್ರಮುಖರಾದ ಡಾ.ಜನಾರ್ಧನ್ರವರು ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿಸಿ, ಎಲ್ಲರನ್ನು ಸ್ವಾಗತಿಸಿದರು. ಯೋಗ ಶಿಕ್ಷಕರಾದ ಮಾರ್ಕೋಂಡಪ್ಪ, ಚಂದ್ರಶೇಖರ್ ಹಾಗೂ ಸಮಿತಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ರವರು ಕಾರ್ಯಕ್ರಮ ಸಂಯೋಜಿಸಿದ್ದರು.
ಸುದ್ದಿ ಓದಿ ಹಂಚಿ