PLACE YOUR AD HERE AT LOWEST PRICE
ಕೋಲಾರ:ಕೋಲಾರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ರಸ್ತೆಯಲ್ಲಿನ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವೃತ್ತದವರೆಗಿನ ಜೋಡಿ ರಸ್ತೆಗೆ ವಿದ್ಯುತ್ದೀಪಗಳನ್ನು ಅಳವಡಿಸಿ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಬವಣೆ ದೂರ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮತ್ತು ಕುರುಬರಪೇಟೆ ಬೆಮಲ್ ಶ್ರೀನಿವಾಸ್ ಶಾಸಕ ಡಾ.ಕೊತ್ತೂರು ಜಿ. ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು.
ಕೋಲಾರದಲ್ಲಿ ಮೂರು ವರ್ಷಗಳ ಹಿಂದೆ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ರಸ್ತೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಜೋಡಿ ದ್ವಿಪಥ ರಸ್ತೆಯನ್ನು ನರ್ಮಾಣಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ರಸ್ತೆಯ ಮದ್ಯದ ರಸ್ತೆ ವಿಭಜಕದಲ್ಲಿ ರಸ್ತೆ ದೀಪದ ಕಂಬಗಳನ್ನು ಅಳವಡಿಸಿ, ದೀಪಗಳನ್ನು ಹಾಕುವ ಯೋಜನೆ ಇದ್ದರೂ ಸಹ ಇದನ್ನು ಕಾರ್ಯಗತ ಮಾಡಿರುವುದಿಲ್ಲ. ಇದರ ಪರಿಣಾಮವಾಗಿ ಈ ಭಾಗದ ರಸ್ತೆಯುದ್ದಕ್ಕೂ ಯಾವೊಂದು ರಸ್ತೆ ದೀಪಗಳ ಸೌಲಭ್ಯವಿಲ್ಲದ ಕಾರಣ ಈ ಪ್ರದೇಶವು ರಾತ್ರಿ ಸಂದರ್ಭದಲ್ಲಿ ಕಾರ್ಗತ್ತಲಿನಲ್ಲಿ ತುಂಬಿರುತ್ತದೆ.
ಈ ಮಾರ್ಗದ ಉದ್ದಕ್ಕೂ ಚರ್ಚ್, ಅನೇಕ ದೇವಸ್ಥಾನಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಸರ್ಕಾರಿ ಆಸ್ಟಲ್ಗಳು, ಸರ್ಕಾರಿ ನರ್ಸಿಂಗ್ ಕಾಲೇಜು ಹಾಸ್ಟೆಲ್, ಅನೇಕ ಸರ್ಕಾರಿ ಖಾಸಗಿ ಆಸ್ಪತ್ರೆಗಳು ವಿದ್ಯಾರ್ಥಿಗಳು ರಾತ್ರಿ ವೇಳೆಯ ಟೂಷನ್ ತರಗತಿಗಳು, ಕೋಲಾರ ನಗರದ ನಾಡದೇವತೆ ಕೋಲಾರಮ್ಮ ದೇವಸ್ಥಾನ ಹಾಗೂ ಸೋಮೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳು ಇದೇ ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುತ್ತಾರೆ. ರಸ್ತೆ ದೀಪಗಳಿಲ್ಲದೆ ಕತ್ತಲಾಗಿರುವುದರಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು, ಕಳ್ಳತನಗಳು ನಡೆಯುವ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈವರೆಗೆ ಅಂತಹ ಅನಾಹುತಗಳು ನಡೆಯದೇ ಇರುವುದೇ ಅದೃಷ್ಟವಾಗಿದೆ. ಮುಂದೆ ಇಂತಹ ಘಟನೆಗಳು ಸಂಭವಿಸುವ ಸಾದ್ಯತೆ ಹೆಚ್ಚಾಗಿ ಇರುತ್ತದೆ. ರಾತ್ರಿ ವೇಳೆಯಲ್ಲಿ ರಸ್ತೆ ದೀಪಗಳಿಲ್ಲದ ಕಾರಣ ಸಂಚರಿಸುವ ಜನರ ಪ್ರಾಣಕ್ಕೆ ರಕ್ಷಣೆ ಇಲ್ಲದಂತಾಗಿದೆ. ಮುಂದಾಗಬಹುದಾದಂತಹ ಕೆಟ್ಟ ಘಟನಾವಳಿಗಳನ್ನು ತಪ್ಪಿಸುವ ಹಾಗೂ ರಸ್ತೆಯಲ್ಲಿ ಸಂಚರಿಸುವವರಿಗೆ ಸೂಕ್ತ ರಕ್ಷಣೆಯನ್ನು, ಸುರಕ್ಷತೆಯನ್ನು ನೀಡುವ ಸಲುವಗಿ ಸದರಿ ಜೋಡಿ ರಸ್ತೆಯ ಉದ್ದಗಲಕ್ಕೂ ನಗರಸಭೆಯ ವತಿಯಿಂದಾಗಲೀ ಅಥವಾ ನರಸಾಪುರ ಅಥವಾ ವೇಮಗಲ್ ಪ್ರದೇಶದಲ್ಲಿನ ಕೈಗಾರಿಕೆಗಳ ಸಾರ್ವಜನಿಕ ಅಭಿವೃದ್ದಿ ನಿಧಿಯ ಹಣದಿಂದಾಗಲೀ, ರಸ್ತೆ ದೀಪ ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸಲು ಕೋರಿದರು.