PLACE YOUR AD HERE AT LOWEST PRICE
ಹುಲಿ ಉಗುರು ವಿವಾದ ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಹುಲಿ ಉಗುರು ಡಾಲರ್, ಲಾಕೆಟ್ ಧರಿಸಿದವರನ್ನು ಅಥವಾ ಮನೆಯಲ್ಲಿ ಇಟ್ಟುಕೊಂಡವರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಜೈಲಿಗೆ ಕಳುಹಿಸುತ್ತಾ ಹೋದರೆ ರಾಜ್ಯದಲ್ಲಿ ಜೈಲುಗಳು ಸಾಕಾಗಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಹೇಳಿಕೆಯ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಪ್ರಸ್ತುತ ತೀರ್ಥಹಳ್ಳಿ ಕ್ಷೇತ್ರದ ಶಾಸಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಮಲೆನಾಡು, ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಸತ್ತು ಬಿದ್ದ ವನ್ಯಜೀವಿಗಳ ವಸ್ತುಗಳನ್ನು ಧೈರ್ಯದ ಪ್ರತೀಕ ಎಂದು ಹಾಕುತ್ತಿದ್ದರು. ಇತ್ತೀಚೆಗೆ ಶ್ರೀಮಂತರು ಅದಕ್ಕೆ ಆಲಂಕಾರಿಕವಾಗಿ ಚಿನ್ನದ ಪೆಂಡೆಂಟ್ ಮಾಡಿ ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಈ ಕುರಿತು ಸರ್ಕಾರ ಮಧ್ಯ ಪ್ರವೇಶಿಸುವುದು ಅವಶ್ಯವಿದೆ’ ಎಂದು ತಿಳಿಸಿದ್ದಾರೆ.
ಹಿಂದೂ-ಮುಸ್ಲಿಂ ಐಕ್ಯತಾ ಸ್ಥಳವಾದ ಹಣಗೇರಿನಲ್ಲಿರುವ ದರ್ಗಾಕ್ಕೆ ಸ್ಪೀಕರ್, ಮಂತ್ರಿಗಳು ಎಲ್ಲರೂ ಹೋಗುತ್ತಾರೆ. ಈ ವೇಳೆ ಅಲ್ಲಿನ ಇಮಾಮರು ನವಿಲು ಗರಿಯಿಂದ ತಲೆಮೇಲೆ, ಭುಜದ ಮೇಲೆ ಹೊಡೀತಾರೆ. ಅದು ಅಲ್ಲಿನ ಪದ್ಧತಿ. ಹಾಗಾಗಿ, ಅಲ್ಲಿ ನವಿಲುಗರಿ ಇರುವುದು ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಂತಾದರೆ ಸಾಧ್ಯವಾಗುವುದಾದರೆ ಅವರನ್ನೂ ಬಂಧಿಸಬೇಕು.
ಟಿಪ್ಪು ಸುಲ್ತಾನ್ ಹುಲಿಯೊಂದನ್ನು ಕೊಲ್ಲುತ್ತಿರುವ ಫೋಟೋಗಳನ್ನು ಅನೇಕ ಜನ ತಮ್ಮ ಮನೆಗಳಲ್ಲಿ ತೂಗು ಹಾಕಿದ್ದಾರೆ. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆಯಲ್ಲವೇ? ಅದನ್ನು ನೋಡಿ ಬೇರೆ ಜನ ಹುಲಿಗಳನ್ನು ಬೇಟೆಯಾಡಲು ಮುಂದಾದರೆ ಹೇಗೆ? ಎಂದು ಪ್ರಶ್ನಿಸಿದರು.
ಕೆಲವರು ತಮಗೆ ತಿಳಿಯದೆ ಅಥವಾ ಪರಂಪರಾಗತವಾಗಿ ಹುಲಿ ಉಗುರು ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ. ಅವರನ್ನೆಲ್ಲ ಬಂಧಿಸಿ ಜೈಲಿಗೆ ಹಾಕುತ್ತಾ ಹೋದರೆ, ರಾಜ್ಯದಲ್ಲಿ ಜೈಲುಗಳು ಸಾಕಾಗಲ್ಲ. ಅರಣ್ಯ ಇಲಾಖೆ ಹುಲಿಯುಗುರು ಇಟ್ಟುಕೊಂಡಿರುವವರನ್ನು ಬಂಧಿಸುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಸಚಿವ ಮತ್ತು ಅಧಿಕಾರಿಗಳು ವಿಷಯದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.