PLACE YOUR AD HERE AT LOWEST PRICE
ಬಂಗಾರಪೇಟೆ:ವಿದ್ಯುತ್ ಮತ್ತು ರೈಲ್ವೆ ಖಾಸಗಿಕರಣವನ್ನು ಕೈ ಬಿಡಲು ಒತ್ತಾಯಿಸಿ ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂದೆ ಸಿಐಟಿಯು ಸಂಘಟನೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಿಐಟಿಯು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಕಾರ್ಪೊರೇಟ್ ಬಂಡವಾಳ ಪರ ನೀತಿಗಳನ್ನು ಆಕ್ರಮಣ ಕಾರಿಯಾಗಿ ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರದ ತಪ್ಪು ನೀತಿಗಳಿಂದ ರೈತರು ಸಾಲ ಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತು ಬೆಳೆದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗದೆ ಕೃಷಿ ತೊರೆಯುವರ ಸಂಖ್ಯೆ ಹೆಚ್ಚಾಗುತ್ತಿದೆ.
ಅದೇ ರೀತಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ 4 ಸಂಹಿತೆಗಳಾಗಿ ರೂಪಿಸಿ ಕಾರ್ಮಿಕರ ಶ್ರಮದ ಶೋಷಣೆ ಮೂಲಕ ಕಾರ್ಪೊರೇಟ್ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಸೌಲಭ್ಯ ಮಾಡಿಕೊಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್ಲೈನ್ ಯೋಜನೆಯಡಿ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡಲು ಮುಂದಾಗಿದೆ. ರೈತರ ಜನತೆಯ ತೀವ್ರ ವಿರೋಧವನ್ನು ಕಡೆಗಣಿಸಿ ಕಾರ್ಪೊರೇಟ್ ಬಂಡವಾಳಗಾರರ ಅನುಕೂಲಕ್ಕಾಗಿ ಆಧುನಿಕ ನಾಗರಿಕ ಸಮಾಜ ಕೇಂದ್ರ ನರಮಂಡಲವಾಗಿ ಕೆಲಸ ನಿರ್ವಹಿಸುವ ವಿದ್ವತ್ ರಂಗವನ್ನು ಸಂಪೂರ್ಣ ಖಾಸಗಿಕರಣ ಮಾಡಲು ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಿದೆ, ಇದನ್ನು ಕೈಬಿಡಬೇಕೆಂದು ಒತ್ತಾಯ ಮಾಡಿದರು.
ಅದೇ ರೀತಿ ದೇಶದ ಬಹುಸಂಖ್ಯಾತ ಜನರ ಆರ್ಥಿಕ,ಸಾಮಾಜಿಕ ಜೀವನದ ಅವಿಭಾಗ್ಯ ಅಂಗ, ದೇಶದ ಆರ್ಥಿಕತೆಯ ಬೆನ್ನೆಲುಬಾದ ಭಾರತೀಯ ರೈಲ್ವೆಯನ್ನು ಖಾಸಗಿಕರಣ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಅಧ್ಯಕ್ಷ ಅಮರನಾರಾಯಣ, ಪ್ರಧಾನ ಕಾರ್ಯದರ್ಶಿ ವಿಜಯ ಕೃಷ್ಣ, ಮುಖಂಡರಾದ ಎಚ್ ಪಿ ಕೃಷ್ಣಪ್ಪ, ಎ.ಆರ್.ಬಾಬು, ತಂಗರಾಜ್, ಆನಂದರಾಜ್ ಕೇಶವರಾವ್, ಜಯಲಕ್ಷ್ಮಿ, ಭೀಮರಾಜ್,ತಂಗರಾಜ್, ಶಿವಾನಂದ,ರಮೇಶ್, ಕಲ್ಪನಾ ಮೊದಲಾದವರು ಇದ್ದರು.