PLACE YOUR AD HERE AT LOWEST PRICE
ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಲೂರಿನ ಲಕ್ಷ್ಮೀನಾರಾಯಣ್ ನೇಮಕಗೊಂಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಇವರ ಆಯ್ಕೆಯನ್ನು ಶನಿವಾರ ಘೋಷಿಸಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ ಚಂದ್ರಾರೆಡ್ಡಿ ಬಿಜೆಪಿಗೆ ಸೇರ್ಪಡೆಯಾದ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಲವು ತಿಂಗಳುಗಳ ಕಾಲ ಖಾಲಿಯಾಗಿತ್ತು. ಕೆಲವು ದಿನಗಳ ಮಟ್ಟಿಗೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.
ಆದರೆ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ಬಣ ರಾಜಕೀಯಕ್ಕೆ ಬೇಸತ್ತು ಅವರು ತಮ್ಮ ಸ್ಥಾನವನ್ನು ತ್ಯಜಿಸಿದ್ದರು. ಆನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣು ಬಿದ್ದಿತ್ತು.
ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಕೋಲಾರದ ಬಿ.ಎಂ ಮುಬಾರಕ್ ಮಾಲೂರಿನ ಲಕ್ಷ್ಮೀನಾರಾಯಣ್ ಅವರ ಹೆಸರುಗಳು ಕೇಳಿಬಂದಿತ್ತು. ಅಂತಿಮವಾಗಿ ಮಾಲೂರಿನ ಹಿರಿಯ ಕಾಂಗ್ರೆಸ್ ಮುಖಂಡ ಲಚ್ಚಿ ಎಂದೇ ಜನಪ್ರಿಯರಾಗಿರುವ ಲಕ್ಷ್ಮಿ ನಾರಾಯಣ್ ಅವರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿಕೊಂಡಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಜವಾಬ್ದಾರಿ ಲಚ್ಚಣ್ಣ ಅವರ ಮೇಲೆ ಬಿದ್ದಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯನ್ನು ನಿಭಾಯಿಸುವ ಅನಿವಾರ್ಯತೆ ಲಚ್ಚಣ್ಣ ಅವರ ಮೇಲಿದೆ.
ಸ್ನೇಹಜೀವಿಯಾಗಿರುವ ಲಚ್ಚಣ್ಣ ಅವರ ಅವಧಿಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ರಾಜಕೀಯವಾಗಿ ಕಂಗೊಳಿಸಲಿದೆ ಎಂಬ ಅಭಿಪ್ರಾಯ ಅವರ ಆತ್ಮೀಯ ವಲಯದ್ದಾಗಿದೆ.