PLACE YOUR AD HERE AT LOWEST PRICE
ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಇಲಾಖಾ ಕಛೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುಲು, ವಿವಿಧ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘಟನೆಗಳ ಒಕ್ಕೂಟದಿಂದ ಕೆಜಿಎಫ್ ಉರಿಗಾಂ ರೈಲ್ವೆ ನಿಲ್ದಾಣ ರಸ್ತೆಯ ಟೆಂಪೋ ಸ್ಟಾಂಡ್ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು,, ಕೆಜಿಎಫ್ ತಾಲ್ಲೂಕು ಆರಂಭಗೊಂಡು ಸುಮಾರು 4 ವರ್ಷಗಳು ಕಳೆದರೂ ಈ ತನಕ ಇಲ್ಲಿ ತಾಲ್ಲೂಕು ಮಟ್ಟದ ಇಲಾಖಾ ಕಛೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿರುವುದಿಲ್ಲ.
ಈ ಬಗ್ಗೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ನಾಲ್ಕು ವರ್ಷಗಳಿಂದ ಅನೇಕ ಬಾರಿ ಪ್ರತಿಭಟನೆಗಳನ್ನು ಮಾಡಿ ಮನವಿ ಪತ್ರಗಳನ್ನು ನೀಡುತ್ತಾ ಬರುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಜರುಗಿಸದಿರುವು ವಿಪರ್ಯಾಸವೇ ಸರಿ.
ಕೆಜಿಎಫ್ ತಾಲ್ಲೂಕು ಪ್ರತ್ಯೇಕಗೊಂಡಾಗಿನಿಂದ ಹೆಸರಿಗೆ ಮಾತ್ರ ತಾಲ್ಲೂಕು ಕೇಂದ್ರ ಎನಿಸಿಕೊಂಡಿದೆ. ಆದರೆ ಕಂದಾಯ ಇಲಾಖೆಗೆ ಸಂಬಂಧಸಿದ ಎಲ್ಲಾ ಕೆಲಸ ಕಾರ್ಯಗಳಿಗೆ ದೂರದ ಬಂಗಾರಪೇಟೆಗೆ ಅಲೆಯುವ ಪರಿಸ್ಥಿತಿ ಮುಂದುವರೆದಿದೆ.
ಕಳೆದ ತಿಂಗಳು ತಾಲ್ಲೂಕು ಆಡಳಿತ ಸೌಧ ಉದ್ಘಾಟನೆಯಾಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಕಂದಾಯ/ಸಮಾಜ ಕಲ್ಯಾಣ/ಕೃಷಿ/ತೋಟಗಾರಿಕೆ ಸೇರಿದಂತೆ ಬಹುತೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ.
ತಾಲ್ಲೂಕು ಮಟ್ಟದ ಇಲಾಖೆಗಳು ಆರಂಭಿಸುವ ವಿಷಯದಲ್ಲಿ ನಾಲ್ಕು ವರ್ಷಗಳ ಹಿಂದೆ ಸ್ವಾಮಿನಾಥಪುರಂ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಬಳಿ ಇಲಾಖೆಗಳ ನಾಮಫಲಕಗಳನ್ನು ಅಳವಡಿಸಲಾಗಿದೆ, ಅಲ್ಲಿ ಇಲಾಖಾ ಕಛೇರಿ ಆರಂಭಗೊಂಡಿರುವುದಿಲ್ಲ.
ಸ್ವಾಮಿಸಾಥಪುರಂ ಬಳಿ ಕಳೆದ ನಾಲ್ಕು ವರ್ಷಗಳ ಹಿಂದೆ ಕೇವಲ ಕೆಲವು ತಿಂಗಳು ಮಾತ್ರ ತಾಲ್ಲೂಕು ಮಟ್ಟದ ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಈಗಲೂ ತಾಲ್ಲೂಕು ಮಟ್ಟದ ಕಛೇರಿಗಳಿಗೆ ಬಂಗಾರಪೇಟೆಗೆ ಅಲೆಯುವಂತಾಗಿದೆ.
ದಲಿತರ ಮೇಲಿನ ದೌರ್ಜನ್ಯ ತಡೆಯಲು ಅನೇಕ ಕಾನೂನುಗಳಿದ್ದಗ್ಯೂ ದೌರ್ಜನ್ಯ ದಬ್ಬಾಳಿಕೆ ಮುಂದುವರೆದಿದೆ. ದಲಿತ ಸಂಘಟನೆಗಳ ಉಗಮ ಜಿಲ್ಲೆ ಎಂದೇ ಕರೆಯಲ್ಪಡುವ ಕೋಲಾರ ಜಿಲ್ಲೆಯಲ್ಲಿಯೂ ದಲಿತರ ಮೇಲಿನ ದೌರ್ಜನ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ.
ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆಗಳು ನಡೆಯುತ್ತಿವೆಯಾದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಮುಂದುವರೆಯದಂತೆ ತಡೆಯುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.
ಇದರ ಮುಂದುವರೆದ ಭಾಗವಾಗಿ ದಲಿತರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕಿನ ಮೇಲೆ ದಾಳಿ ಹೆಚ್ಚುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಖಾಯಿದೆಯ ದುರ್ಭಳಕೆ ಹೆಚ್ಚಾಗುತ್ತಿದೆ.
ಕೆಜಿಎಫ್ ನಲ್ಲಿನ ಜನ ಚಿನ್ನದ ಗಣಿಯಲ್ಲಿ ಕೆಲಸ ಮಾಡಿದವರಾಗಿದ್ದು, ಅನೇಕರು ಈಗಲೂ ಸಿಲಿಕಾಸಿಸ್ ಖಾಯಿಲೆಯಿಂದ ನರಳುತ್ತಿದ್ದಾರೆ. ಇಲ್ಲಿ ದಲಿತರೇ ಹೆಚ್ಚು ವಾಸ ಮಾಡುತ್ತಿದ್ದಾರೆ. ಇಲ್ಲಿನ ಜನರ ಆಹಾರ ಪದ್ದತಿಯ ಮೇಲೆ ನಿರಂತರ ದಾಳಿ ಮುಂದುವರೆದಿದೆ.
ಕೆಜಿಎಫ್ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಇಲಾಖಾ ಕಛೇರಿಗಳನ್ನು ಈ ಕೂಡಲೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಈ ತಾಲ್ಲೂಕಿನ ಜನತೆಗೆ ಅನುಕೂಲಕ್ಕೆ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಈ ಕೂಡಲೆ ಆರಂಭಿಸಬೇಕು.
ಕೆಜಿಎಫ್ ನಗರದಲ್ಲಿ ಮತ್ತು ತಾಲ್ಲೂಕಿನಾದ್ಯಂತ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ದೌರ್ಜನ್ಯಗಳು ಮರುಕಳಿಸದಂತೆ ಕ್ರಮ ತೆಗೆದುಕೊಂಡು ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಖಾಯಿದೆಯನ್ನು ವಾಪಸ್ ಪಡೆಯಬೇಕು. ಆಹಾರದ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯಬೇಕು. ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಬೇಕು ಎಂದು ಒತ್ತಾಯಿಸಿದ ಅವರು ಇಲ್ಲವಾದರೆ ಹೋರಾಟವನ್ನು ಹಂತ ಹಂತವಾಗಿ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಮುಖಂಡರಾದ ಪಿ.ತಂಗರಾಜ್, ಎಪಿಎಲ್ ರಂಗನಾಥ್, ಪಿಚ್ಚಹಳ್ಳಿ ಮಂಜುನಾಥ್, ಅನ್ಬರಸನ್, ಪ್ರಭಾಕರನ್, ಕಣ್ಣಪ್ಪನ್, ಕುಮಾರ್, ದಲಿತ್ ಸ್ಟಾಲಿನ್, ಗೋವಿಂದಪ್ಪ, ಲೆನಿನ್ ಕುಮಾರ್, ರಾಧಾಕೃಷ್ಣ, ಲಕ್ಷ್ಮಯ್ಯ, ಬಾಬು, ಸಂಪತ್, ರಾಜಶೇಖರ್, ಶ್ರೀನಾಥ್ ನಾಸ್ತಿಕ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.