PLACE YOUR AD HERE AT LOWEST PRICE
ಕೆಜಿಎಫ್:ಹಳ್ಳಿ ಭಾಗದ ಕೆರೆಗಳಲ್ಲಿ ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರರು ಮಣ್ಣು ತೆಗೆದಿರುವ ಕೆರೆಗಳಲ್ಲಿ ಪ್ರಾಣ ಹಾನಿಯಾಗುವ ಸಂಬವವಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.
ಅವರು ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಚೆನ್ನೈ ಕಾರಿಡಾರ್ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಜನರ ಜೀವನದ ಜತೆಗೆ ಚಲ್ಲಾಟ ಆಡಲಾಗುತ್ತಿದೆ. ಗುತ್ತಿಗೆದಾರರಿಗೆ ಕಂದಾಯ ಇಲಾಖೆಯಿಂದ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಯಿಂದ ಕೆರೆಗಳಲ್ಲಿ ಮಣ್ಣು ತೆಗೆಯಲು ಸುತ್ತೋಲೆಯನ್ನು ಗಾಳಿಗೆ ತೋರಿದ್ದಾರೆಂದು ಆರೋಪಿಸಿದರು.
ಗ್ರಾಮೀಣ ಭಾಗದ ಯಾವುದೇ ಕೆರೆಯಲ್ಲಿ ಕಾರಿಡಾರ್ ರಸ್ತೆಯವರು ಸುಮಾರು 20-25 ಅಡಿಯಷ್ಟು ಅಳದ ವರೆಗೂ ಮಣ್ಣು ತೆಗೆದು ಕಾನೂನನ್ನು ಗಾಳಿಗೆ ತೋರಿದ್ದಾರೆ, ಗುತ್ತಿಗೆದಾರರು ಆಕ್ರಮವಾಗಿ ಮಣ್ಣು ತೆಗೆಯುತ್ತಿದರೂ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳು ಸಹ ತಡೆಯಲು ಮುಂದಾಗದಿರುವುದು ದುರದೃಷ್ಠ ಸಂಗತಿ ಎಂದರು.
ರೈತ ಸಂಘ, ರೈತರು, ವಿವಿಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ಯಾರೇ ಸಹ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಢಳಿತಕ್ಕೆ ಮನವಿ ಮಾಡಿದರೂ ಯಾವ ಅಧಿಕಾರಿಗಳು ಸಹ ಕ್ರಮ ಕೈಗೊಳ್ಳಲು ಮುಂದಾಗದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಸೃಷ್ಠಿಯಾಗುತ್ತದೆ ಎಂದರು.
ಕೆರೆಗಳ ನೀರು ಕಾಲಿ: ಕಾರಿಡಾರ್ ರಸ್ತೆಯ ಗುತ್ತಿಗೆದಾರರು ಮಣ್ಣು ತೆಗೆಯಲು ಪೋತರಾಜನಹಳ್ಳಿ ಕೆರೆ ಸೇರಿದಂತೆ ಅನೇಕ ಕೆರೆಗಳಲ್ಲಿನ ನೀರು ಹೊರಗೆ ಬಿಟ್ಟು ಕೆರೆಗಳನ್ನು ಕಾಲಿ ಮಾಡಿದ್ದಾರೆಂದು ಆರೋಪಿಸಿದರು.
ಕೆಜಿಎಫ್ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆಯುವುದು ಕಂಡು ಬಂದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಷಣ್ಮುಗಂ ಅವರು ಸಹ ಒಂದು ಭಾರಿಯೂ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ ಅವರು ಈ ಮಣ್ಣು ಸಾಗಾಟದಿಂದಾಗಿ ಗ್ರಾಮೀಣ ಭಾಗದ ಬಹುತೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಡಾಂಬರೀಕರಣ ಕಿತ್ತು ಬಂದಿದ್ದು, ಸಾರ್ವಜನಿಕರು ಸಂಚಾರ ನಡೆಸಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಹಸಿರು ಸೇನೆ ಕೋಲಾರ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ತಾಲ್ಲೂಕು ಅಧ್ಯಕ್ಷ ಮುನಿರತ್ನಂರೆಡ್ಡಿ, ಕಾರ್ಯದರ್ಶಿ ಸುಬ್ರಮಣಿ, ಮುನಿವೆಂಕಟೇಗೌಡ, ರಾಮೂರ್ತಿ ಸೇರಿದಂತೆ ಇತರರು ಇದ್ದರು.