PLACE YOUR AD HERE AT LOWEST PRICE
ಜೇಡರ ದಾಸಿಮಯ್ಯರ ವಚನಗಳು ಕೃಷಿ ಮತ್ತು ಪಶು ಸಂಗೋಪನೆ ಬದ್ಧವಾದ ಪದ್ಯಗಳಾಗಿವೆ ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಆರ್.ನಾಗರಾಜು ಹೇಳಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ ೨೪ ಕಾರ್ಯಕ್ರಮದಲ್ಲಿ ಮಾನವ ಪರಿಸರ ಸಂಬಂಧದ ಹರಿಕಾರ ಜೇಡರ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದರು.
ಜೇಡರ ದಾಸಿಮಯ್ಯರ ಸಮಗ್ರ ೧೭೬ ವಚನಗಳ ಮೂಲಕ ಇತರೇ ವಚನಕಾರರ ಮೇಲೆ ಪ್ರಭಾವವನ್ನು ಬೀರಿದವರಾಗಿದ್ದರು. ಉದ್ದುದ್ದ ವಚನಗಳನ್ನು ರಚಿಸಿ ಪಾಂಡಿತ್ಯ ಪ್ರದರ್ಶನಕ್ಕಿಂತಲೂ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ವಚನಗಳನ್ನು ರಚಿಸಿದ್ದಾರೆ, ಒಂದೇ ಸಾಲಿನ ವಚನವೂ ಅವರ ರಚನೆಯಾಗಿದೆಯೆಂದರು.
ಆಗಿನ ಕಾಲದಲ್ಲಿ ಪ್ರಾಸ ಹಾಗೂ ಛಂದೋಬದ್ಧವಿಲ್ಲದೆ ಪದ್ಯವನ್ನು ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಕ್ರಾಂತಿ ಕಾರಕವೆನ್ನಬಹುದಾದ ಹೆಜ್ಜೆಗಳನ್ನಿಟ್ಟದ್ದರು. ಸಾಹಿತ್ಯಲೋಕದಲ್ಲಿ ಅಪರೂಪವೆನಿಸಿರುವ ಡ ಕಾರ ಪ್ರಾಸದಲ್ಲಿ ಅವರ ಪದ್ಯಗಳು ಗಮನ ಸೆಳೆಯುತ್ತವೆ ಎಂದರು.
ಸಂವಾದದಲ್ಲಿ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂಬ ಪ್ರಶ್ನೆಗೆ ಇಂತ ವಿವಾದಗಳಿಂದ ತಾವು ದೂರ, ಅವರು ಬರೆದ ವಚನಗಳನ್ನು ಅಸ್ವಾದಿಸುವುದಷ್ಟೇ ತಮ್ಮ ಕಾಯಕ, ಆದರೆ, ಇಬ್ಬರ ಕಾವ್ಯನಾಮ ರಾಮಾನಾಥ ಆಗಿರುವುದರಿಂದ ಇಬ್ಬರೂ ಒಬ್ಬರೇ ಆಗಿರಬೇಕೆಂದು ವಿವರಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಡಯಟ್ ತಂತ್ರಜ್ಞ ಡಾ.ಎಂ.ನಾರಾಯಣಸ್ವಾಮಿವಹಿಸಿ ಜೇಡರ ದಾಸಿಮಯ್ಯ ಹಾಗೂ ಅವರ ವಚನಗಳ ಮಹತ್ವ ಕುರಿತಂತೆ ಮಾತನಾಡಿದರು.
ಓದುಗ ಕೇಳುಗ ಬಳಗದ ಎಚ್.ಎ .ಪುರುಷೋತ್ತಮರಾವ್ ಸ್ವಾಗತಿಸಿ, ಆದಿಮ ಗೋವಿಂದಪ್ಪ ವಂದಿಸಿದರು.