PLACE YOUR AD HERE AT LOWEST PRICE
ಕರ್ನಲ್ ವಿಲಿಯಂ ಲ್ಯಾಮ್ಬ್ಟನ್ ಎಂಬುವವರು ಸರ್ವೇಯನ್ನು ವೈಜ್ಞಾನಿಕವಾಗಿ ತ್ರಿಕೋನಮಿತಿ ಆಧಾರದ ಮೇಲೆ ೧೮೯೧ ರ ಏ.೧೦ ರಂದು ಆರಂಭಿಸಿದ ಹಿನ್ನಲೆಯಲ್ಲಿ ಅವರ ಸ್ಮರಣಾರ್ಥವಾಗಿ ರಾಷ್ಟ್ರಮಟ್ಟದಲ್ಲಿ ಈ ದಿನವನ್ನು ಭೂಮಾಪಕರ ದಿನವಾಗಿ ಆಚರಿಸಲಾಗುತ್ತಿದೆ ಎಂದು ಭೂಮಾಪನಾ ಇಲಾಖೆ ಉಪನಿರ್ದೇಶಕಿ ಬಿ.ಭಾಗ್ಯಮ್ಮ ತಿಳಿಸಿದರು.
ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿನ ಭೂಮಾಪನಾ ಇಲಾಖೆ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಭೂಮಾಪಕರ ದಿನಾಚರಣೆಯನ್ನು ಸರಳವಾಗಿ ಆಚರಿಸಿದ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ತ್ರಿಕೋನಮಿತಿ ಆಧಾರದ ಮೇಲೆ ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ ಸಲಕರಣೆ ಬಳಸಿ ಜಮೀನಿನ ಅಳತೆ, ಕಂದಾಯ ನಿಗಧಿ ಆರಂಭಿಸಿದ ಹಿನ್ನಲೆಯಲ್ಲಿ ಅವರ ಸ್ಮರಣೆಗಾಗಿ ಈದಿನವನ್ನು ಆಚರಿಸುತ್ತಿದ್ದು, ಭೂಮಾಪನದಲ್ಲಿ ವೈಜ್ಞಾನಿಕತೆ ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಭೂ ಅಳತೆ ಕಾರ್ಯ ಅತ್ಯಂತ ವಿಳಂಬವಾಗುತ್ತಿದ್ದು, ರೈತರು,ಭೂಮಾಲೀಕರಿಗೆ ತೊಂದರೆಯಾಗುತ್ತಿದೆ ಇದನ್ನು ಅರಿತು ಸರ್ವೇ ವಿಳಂಬ ಹಾಗೂ ಭೂಮಾಪಕರ ಕೊರತೆ ನೀಗಿಸಲು ಪರವಾನಗಿ ಪಡೆದ ಭೂಮಾಪಕರ ನೇಮಕಾಗಿಯೂ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸರ್ವೇಯಲ್ಲಿ ಆಗುತ್ತಿರುವ ವಿಳಂಬ ಕೊನೆಗೊಳ್ಳಲಿದೆ ಎಂದು ತಿಳಿಸಿ, ರೈತರು ಮತ್ತು ಸರ್ವೇ ಇಲಾಖೆ ಸಿಬ್ಬಂದಿಗೆ ಅವರು ಶುಭಾಷಯ ಕೋರಿದರು.
ಹಿಂದೆ ಭೂಮಾಪನ ಮಾಡಲು ಹಳೆ ಪದ್ದತಿಗಳಿತ್ತು. ಹಗ್ಗ ಮತ್ತು ಕೋಲು ಬಳಸಿ ಅಳತೆ ಮಾಡಲಾಗುತ್ತಿತ್ತು. ಇದರಿಂದಾಗಿ ಭೂಮಿಯ ಅಳತೆ,ವಿಭಾಗ ಸಮರ್ಪಕವಾಗಿಲ್ಲದ ಕಾರಣ ಅನೇಕ ಸಮಸ್ಯೆಗಳಿಗೆ ಕಾರಣವಾಗಿತ್ತು ಎಂದ ಅವರು, ವೈಜ್ಞಾನಿಕ ಪದ್ದತಿ ಅಳವಡಿಕೆಯಿಂದ ಅನೇಕ ಸಮಸ್ಯೆಗಳಿಗೆ ಕೊನೆಯಾಗಿದೆ ಮತ್ತು ಸರ್ವೇ ಕಾರ್ಯ ಮತ್ತು ಅಳತೆಯ ಕುರಿತು ಸಾರ್ವಜನಿಕರಲ್ಲಿ ನಂಬಿಕೆಯೂ ಬಲಗೊಂಡಿದೆ ಎಂದರು.
ರಾಜ್ಯ ಸರ್ವೇ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ಮಾತನಾಡಿ, ಸರ್ವೇ ಕಾರ್ಯಕ್ಕೆ ಬೇಸ್ಲೈನ್ ನಿರ್ಮಾಣ ಮಾಡಿ ಸರ್ವೆ ಪ್ರಾರಂಭಿಸಿದ್ದು ಮೊದಲ ಬಾರಿಗೆ ಚೆನ್ನೈನ ಮರಿನಾ ಬೀಚ್ನಲ್ಲಿ ಎಂದ ಅವರು, ಜಿಟಿಎಸ್ ಅಂದರೆ ಗ್ರೇಟ್ ಟ್ರಿಗನಾಮೆಟಿಕಲ್ ಸರ್ವೇಯನ್ನು ಆರಂಭಿಸಿದ ಕರ್ನಲ್ ವಿಲಿಯಂ ಲ್ಯಾಮ್ಬ್ಟನ್ ಅವರ ಈ ಪ್ರಯತ್ನ ವಿಶ್ವ ಮೆಚ್ಚುಗೆ ಗಳಿಸಿತ್ತು ಎಂದರು.
ಮರೀನಾ ಬೀಚ್ನಿಂದ ಹಿಮಾಲಯದ ಎವರೆಸ್ಟ್ ಶಿಖರದವರೆಗೂ ಸ್ಕೆಚ್ ತಯಾರಿಸುವ ಆಶಯವೊಂದಿದ್ದ ಅವರು, ಅರ್ಧದಲ್ಲೇ ವಿಧಿವಶರಾದರು. ಅವರ ನಂತರ ಅವರು ಕೈಬಿಟ್ಟ ಸರ್ವೇ ಕಾರ್ಯವನ್ನು ಮೌಂಟ್ ಎವರೆಸ್ಟ್ ಹೆಸರಿನ ವಿಜ್ಞಾನಿ ಪುನಾರಂಭಿಸಿ ಪೂರ್ಣಗೊಳಿಸಿದರು ಎಂದು ತಿಳಿಸಿದರು.
ಸರ್ವೇ ನೌಕರರು ಇಂದು ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ, ಜಮೀನು ಮಾಲೀಕರ ಒತ್ತಡ, ನ್ಯಾಯಾಲಯಗಳ ಸೂಚನೆ, ಸರ್ಕಾರದ ನಿರ್ದೇಶನ ಪಾಲನೆ ನಡೆಸಬೇಕಾಗಿದ್ದು, ಸಿಬ್ಬಂದಿ ಕೊರತೆಯನ್ನು ಮೀರಿಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೂಪರ್ವೈಸರ್ ಜಯಲಕ್ಷ್ಮಿ, ಭೂಮಾಪಕರಾದ ಶೋಭಾ, ನಮ್ರತಾ, ಸಂಧ್ಯಾ, ಸಂದೀಪ್,ಭೂದಾಕಲೆಗಳ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಸೂಪರ್ ವೈಸರ್ಗಳಾದ ಪುರುಷೋತ್ತಮ್, ರವಿಕುಮಾರ್ ಮತ್ತು ಸಿಬ್ಬಂದಿ ಹಾಜರಿದ್ದರು.