PLACE YOUR AD HERE AT LOWEST PRICE
ಅಗ್ನಿಪಥ ಯೋಜನೆಯಡಿ ನೇಮಕಕ್ಕಾಗಿ ಯುವಕ ಯುವತಿಯರಿಗೆ ಜೂ.೧೫ರಿಂದ ಕೋಲಾರ ಕ್ರೀಡಾ ಸಂಘದಿ0ದ ಉಚಿತ ತರಬೇತಿ
ಕೋಲಾರ: ನಗರದ ಕೋಲಾರ ಕ್ರೀಡಾ ಸಂಘದ ವತಿಯಿಂದ ಭಾರತೀಯ ಸೈನ್ಯಕ್ಕೆ ಸೇರ ಬಯಸುವ ಯುವಕ ಯುವತಿಯರಿಗೆ ಜೂ.೧೫ ರಿಂದ ಉಚಿತ ದೈಹಿಕ ತರಬೇತಿಯನ್ನು ಆರಂಭಿಸಲಿದ್ದು, ಆಸಕ್ತರು ಶಿಬಿರಕ್ಕೆ ಸೇರುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸೈನ್ಯಕ್ಕೆ ಸೇರ ಬಯಸುವ ಯುವಕ ಯುವತಿಯರಿಗಾಗಿ ತರಬೇತಿ ಆರಂಭಿಸಿದ ಪ್ರಥಮ ಸಂಘ ಇದಾಗಿದ್ದು, ೨೦೧೬ ರಿಂದ ಐನೂರಕ್ಕೂ ಹೆಚ್ಚು ಮಂದಿ ಈ ಸಂಘದಿ0ದ ತರಬೇತಿ ಹೊಂದಿದ್ದಾರೆ. ಅಗ್ನಿಪಥ್ ಯೋಜನೆಯಡಿ ನೇಮಕಾತಿ ಬಯಸಿದ ಮುನ್ನೂರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಸಂಘದ ವತಿಯಿಂದ ತರಬೇತಿ ನೀಡಲಾಗಿದೆ.
ಇದೀಗ ಜೂ.೧೫ ರಿಂದ ಆರಂಭವಾಗುವ ಶಿಬಿರದಲ್ಲಿ ೧೭ ವರ್ಷ ೬ ತಿಂಗಳಿಗೆ ಮೇಲ್ಪಟ್ಟ ಮತ್ತು ೨೧ ವರ್ಷಕ್ಕೆ ಒಳಪಟ್ಟ ಮತ್ತು ಈಗಾಗಲೇ ಅಗ್ನಿಪಥ ಯೋಜನೆಯಡಿ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕೋಲಾರ ಜಿಲ್ಲೆಯ ಅರ್ಹ ಯುವಕ ಯುವತಿಯರು ಈ ಶಿಬಿರಕ್ಕೆ ಹೆಸರು ನೋಂದಾಯಿಸಬಹುದಾಗಿದೆ.
ಶಿಬಿರದಲ್ಲಿ ೪೫ ದಿನಗಳ ಕಾಲ ನಿವೃತ್ತ ಸೈನಿಕರಿಂದ ಕಠಿಣ ತರಬೇತಿಯನ್ನು ನೀಡಲಾಗುವುದು. ಅಭ್ಯರ್ಥಿಗಳು ಯಾವುದೇ ದೈಹಿಕ ನ್ಯೂನತೆ ಹೊಂದಿರಬಾರದು ಮತ್ತು ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಒಳಗೊಂಡಿರಬಾರದು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಯುವಕ ಯುವತಿಯರಿಗೆ ತರಬೇತಿಯನ್ನು ಮಾಜಿ ಸೈನಿಕರಾದ ಎನ್. ಕೃಷ್ಣಮೂರ್ತಿ ಮತ್ತು ಸುರೇಶ್ ಬಾಬು (ಕಮಾಂಡೊ) ನೀಡಲಿದ್ದು, ತರಬೇತಿಯ ಉಸ್ತುವಾರಿಯನ್ನು ಸಂಘದ ಹಿರಿಯ ತರಬೇತುದಾರ ಪುರುಷೋತ್ತಮ್ ವಹಿಸಲಿದ್ದಾರೆ.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಎನ್. ಕೃಷ್ಣಮೂರ್ತಿ ಮೊ. ೭೮೯೯೪೧೫೮೪೦, ಸುರೇಶ್ ಬಾಬು (ಕಮಾಂಡೊ) ಮೊ. ೯೮೪೪೧೦೭೭೬೪, ಹರೀಶ್ ಬಾಬು ಮೋ. ೯೯೦೦೮೧೭೨೯೨ ರವರನ್ನು ಸಂಪರ್ಕಿಸಬಹುದು. ತರಬೇತಿಗೆ ಸೇರಲು ಬಯಸುವ ಅಭ್ಯರ್ಥಿಗಳು ಜೂ.೧೫ ರ ಒಳಗಾಗಿ ನೋಂದಾಯಿಸಿಕೊಳ್ಳತಕ್ಕದ್ದು. ತದನಂತರ ಬರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸುವುದರ ಮೂಲಕ ಶಿಬಿರದ ಉಪಯೋಗವನ್ನು ಪಡೆಯುವಂತೆ ಸಂಘದ ಅಧ್ಯಕ್ಷ ಸಾಮಾ ಅನಿಲ್ ಬಾಬು ಮತ್ತು ಪ್ರಧಾನ ಕಾರ್ಯದರ್ಶಿ ಹರೀಶ್ ಬಾಬು ಮನವಿ ಮಾಡಿದ್ದಾರೆ.