PLACE YOUR AD HERE AT LOWEST PRICE
ಬೆಂಗಳೂರು:ಮಹಾಘಟಬಂಧನ್ ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟಿಲ್ಲ, ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, “ಆಹ್ವಾನ ಕೊಟ್ಟರೋ, ಇಲ್ಲವೋ ಅನ್ನುವುದಕ್ಕೆ ತಲೆ ಕೂಡ ಕೆಡಿಸಿಕೊಂಡಿಲ್ಲ” ಎಂದಿದ್ದಾರೆ.
ಎನ್ಡಿಎ ಸಭೆಯಲ್ಲಿ ಭಾಗಿ ವಿಚಾರವಾಗಿ ಮಾತನಾಡಿದ ಅವರು, “ಇನ್ನೂ ದಿನಗಳಿವೆ ನೋಡೋಣ. ನಮಗೆ ಎಲ್ಲೂ ಆಹ್ವಾನ ಇಲ್ಲ. ನಾನು ಪಕ್ಷ ಸಂಘಟನೆ ಮಾಡಬೇಕು ಮಾಡುತ್ತೇನೆ. 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಇವರಿಗೆ ಚಿಂತೆ ಇಲ್ಲ, ಮಹಾಘಟಬಂಧನ್ ಮಾಡುತ್ತಿದ್ದಾರೆ. ಯಾರು ಮಾಡದೇ ಇರುವ ಸಾಧನೆ ಮಾಡಿದ್ದೇವೆ ಎಂದು ಬ್ಯಾನರ್ಗಳನ್ನು ಕಟ್ಟಿಕೊಂಡಿದ್ದಾರೆ. ಈ ಸಭೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ರೈತರು ಸಾಯುತ್ತಿರುವುದು ಇವರಿಗೆ ಲೆಕ್ಕ ಇಲ್ಲ” ಎಂದು ಕಿಡಿಕಾರಿದರು.
ಎರಡೂ ಬಣಗಳಿಗೆ ಪ್ರಾದೇಶಿಕ ಪಕ್ಷ ಅನಿವಾರ್ಯತೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾಡಿನ ಜನತೆ ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿ ಚುನಾವಣೆಯಲ್ಲಿ ಒಂದೊಂದು ರೀತಿಯ ಬದಲಾವಣೆ ಆಗುತ್ತಿರುತ್ತದೆ. ನಮ್ಮ ಪಕ್ಷ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ಪಕ್ಷ. ಈಗಲೇ ಚರ್ಚೆ ಮಾಡುವುದು ಪ್ರೀ ಮೆಚುರ್ಡು, ಇನ್ನು ಚುನಾವಣೆ ಎಂಟೋ ಒಂಬತ್ತೋ ತಿಂಗಳು ಇದೆ. ನೋಡೋಣ ಏನೇನಾಗುತ್ತೆ” ಎಂದರು.
ಜೆಡಿಎಸ್ಗೆ ಆಹ್ವಾನವಿಲ್ಲ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಎರಡು ದಿನ ನಡೆಯುವ ದೇಶದ ಪ್ರತಿಪಕ್ಷಗಳ ನಾಯಕರ ಸಭೆಗೆ ಜೆಡಿಎಸ್ಗೆ ಅಧಿಕೃತ ಆಹ್ವಾನ ನೀಡಿರಲಿಲ್ಲ. ಮತ್ತೊಂದೆಡೆ ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸೋಮವಾರ ಸಂಜೆ ಅಥವಾ ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜುಲೈ 18 ರಂದು ದೆಹಲಿಯಲ್ಲಿ ಎನ್ಡಿಎ ಸಭೆ ನಡೆಯಲಿದೆ. ಸಭೆಗೂ ಮುನ್ನ ಬಿಜೆಪಿ ಜೊತೆ ಎಚ್ ಡಿ ಕುಮಾರಸ್ವಾಮಿ ಮಾತುಕತೆ ನಡೆಸಬಹುದು ಎನ್ನಲಾಗಿದೆ.