PLACE YOUR AD HERE AT LOWEST PRICE
ಬಂಗಾರಪೇಟೆ: ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆಯ ಒಳಗೆ ಯರಗೋಳ್ ಡ್ಯಾಂ ಅನ್ನು ಲೋಕಾರ್ಪಣೆ ಮಾಡಲು ದಿನಾಂಕ ನಿಗಧಿ ಮಾಡದೇ ಇದ್ದರೆ ೧೪ ರಂದು ರಾತ್ರಿ ೧೨ ಗಂಟೆಗೆ ಯರಗೋಳ್ ಡ್ಯಾಂ ಮುಂದೆ ಖಾಲಿ ಬಿಂದಿಗೆಗಳೊoದಿಗೆ ನಮ್ಮ ಕುಡಿಯುವ ನೀರು ನಮಗೆ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುವ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ಸರ್ಕಾರಕ್ಕೆ ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ನೀಡಿದರು.
ಯರಗೋಳ್ ಡ್ಯಾಂ ಉದ್ಘಾಟನೆಗೆ ಸರ್ಕಾರ ನಿಗದಿಪಡಿಸದೇ ಇದ್ದರೆ ಆಗಸ್ಟ್ ೧೪ರ ಮದ್ಯ ರಾತ್ರಿ ರೈತಸಂಘದಿoದ ಯರಗೋಳ್ ಡ್ಯಾಂ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಸರ್ಕಾರಕ್ಕೆ ಎಚ್ಚರಿಕಗೆ ಸಂದೇಶ ರವಾನೆ ಮಾಡಿದರು.
ಜಿಲ್ಲೆಯ ಬಹುನಿರೀಕ್ಷೆಯ ಶುದ್ಧಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಡ್ಯಾಂ ಲೋಕಾರ್ಪಣೆ ಮಾಡುವಂತೆ ರೈತಸಂಘದಿoದ ಯರಗೋಳ್ ಡ್ಯಾಂಬಳಿ ಖಾಲಿ ಬಿಂದಿಗೆಗಳೊoದಿಗೆ ಹೋರಾಟ ಮಾಡಿ ಯರಗೋಳ್ ನೀರನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಆರ್.ಐ ಸುರೇಶ್, ಎಇಇ ಶಿವಕುಮಾರ್ ಮೂಲಕ ಕಳುಹಿಸಿಕೊಡುವ ಮುಖಾಂತರ ದಿನಾಂಕ ನಿಗಧಿ ಮಾಡುವಂತೆ ಒತ್ತಾಯ ಮಾಡಿದರು.
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಸುತ್ತಾಡಿದರು ಎಂಬ ಗಾಧೆಯಂತೆ ಮುಂಗಾರು ಮಳೆ ನೀರು ಸಂಗ್ರಹವಾಗಿರುವ ಜಿಲ್ಲೆಯ ಬಹುನಿರೀಕ್ಷಿತ ಕುಡಿಯುವ ನೀರಿನ ಯೋಜನೆಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಯರಗೋಳ್ ಬಳಿ ಅಭಿವೃದ್ಧಿಪಡಿಸಿರುವ ಸುಮಾರು ೧೮೫ ಕೋಟಿರೂ ವೆಚ್ಚದ ಡ್ಯಾಂಅನ್ನು ಲೋಕಾರ್ಪಣೆ ಮಾಡಲು ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಕಾಣುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಮಳೆಯಿಲ್ಲದೆ ಕೃಷಿ ಚಟುವಟಿಕೆ ಹಿನ್ನಡೆಯಾಗಿರುವ ಜೊತೆಗೆ ಕೆರೆ ಕುಂಟೆಗಳಲ್ಲಿ ಇರುವ ನೀರು ಕಡಿಮೆಯಾಗುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಸಮಸ್ಯೆ ಉದ್ಬವವಾಗುವ ಮುನ್ಸೂಚನೆ ಇದ್ದರೂ ಇರುವ ನೀರನ್ನು ಏಕೆ ಉಪಯೋಗಿಸಿಕೊಳ್ಳಬಾರದು. ಅಣೆಕಟ್ಟು ಉದ್ಘಾಟನೆ ಮಾಡಿದರೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಸಿಗುವುದರಿಂದ ಟ್ಯಾಂಕರ್ ಮಾಫಿಯಾದಿಂದ ಬರುವ ಹಣಕ್ಕೆ ಕಡಿವಾಣ ಬೀಳಬಹುದೆಂಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಊಹೆಯೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಕೆಸಿವ್ಯಾಲಿ ನೀರಿನಿಂದ ಜಿಲ್ಲೆಯ ೧೮೫ ಕೆರೆಗಳು ತುಂಬಿದ್ದರೂ ಆಯಾ ವ್ಯಾಪ್ತಿಯಲ್ಲಿ ಆ ನೀರನ್ನು ಕೃಷಿ ಮತ್ತು ಕುಡಿಯಲು ಉಪಯೋಗಿಸಲು ಯೋಗ್ಯವಾಗಿಲ್ಲ. ಅದರಂತೆ ಎತ್ತಿನಹೊಳೆ ನೀರು ಈ ಜನ್ಮದಲ್ಲಿ ಜಿಲ್ಲೆಗೆ ಹರಿಯುವುದಿಲ್ಲ. ಇದರ ಮಧ್ಯೆ ಜಿಲ್ಲೆಯ ಏಕೈಕ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ಗೂ ಕೆಸಿವ್ಯಾಲಿ ನೀರು ಹರಿಸುವ ಒಳಸಂಚು ಸರ್ಕಾರ ರೂಪಿಸುತ್ತಿದೆಯೇ ಎಂದು ಅನುಮಾನವಾಗಿದೆ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ೧೮೫ಕೋಟಿ ಅನುದಾನ ನೀಡಿ ಅಣೆಕಟ್ಟು ಅಭಿವೃದ್ಧಿಪಡಿಸಲು ಟೆಂಡರ್ದಾರರು ೧೫ ವರ್ಷ ಅಲ್ಲಿನ ಕಲ್ಲುಬಂಡೆಗಳನ್ನು ಸಿಡಿಸಿ ಅಕ್ರಮ ಗಣಿಗಾರಿಕೆ ಮಾಡುವ ಮುಖಾಂತರ ಕೋಟಿಕೋಟಿ ಲೂಟಿ ಮಾಡಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಹಣವನ್ನು ನೀಡುವ ಮುಖಾಂತರ ಕಾಮಗಾರಿಯನ್ನು ಆಮೆಗತಿಯಲ್ಲಿ ಚಾಲನೆ ಮಾಡಿದರು. ಬಳಿಕ ಹೋರಾಟಗಳ ನಂತರ ಎಚ್ಚೆತ್ತುಕೊಂಡು ಕಾಮಗಾರಿ ವೇಗವಾಗಿ ಮುಗಿಸುವ ಮೂಲಕ ಕಳೆದ ವರ್ಷ ಸುರಿದ ಮುಂಗಾರು ಮಳೆಗೆ ಸಂಪೂರ್ಣವಾಗಿ ಡ್ಯಾಂ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಅಂದಿನ ಮೂರೂ ಪಕ್ಷಗಳು ನಾ ಮುಂದು ತಾ ಮುಂದು ಎಂದು ಭಾಗೀನ ಅರ್ಪಿಸಿದ ಜನಪ್ರತಿನಿಧಿಗಳಿಗೆ ಅಣೆಕಟ್ಟನ್ನು ಲೋಕಾರ್ಪಣೆ ಮಾಡುವ ಇಚ್ಛಾಶಕ್ತಿ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್ ಮಾತನಾಡಿ, ಸ್ಥಳೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಅವರು, ಡ್ಯಾಂ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ದೂರು ನೀಡಿರುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಭ್ರಷ್ಟಾಚಾರ ನಡೆದಿದ್ದರೆ ಅಧಿಕಾರಿಗಳನ್ನು, ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಿ. ಕೂಡಲೇ ಡ್ಯಾಂ ಉದ್ಘಾಟನೆ ಮಾಡಲು ಮುಖ್ಯಮಂತ್ರಿಗಳ ಮೇಲೆ ಜಿಲ್ಲೆಯ ೬ ಶಾಸಕರೂ ಒತ್ತಡ ಹಾಕುವ ಮುಖಾಂತರ ಡ್ಯಾಂ ಲೋಕಾರ್ಪಣೆ ಮಾಡಲೇಬೇಕು. ಜಿಲ್ಲೆಯ ಜನತೆಗೆ ಶುದ್ಧ ನೀರು ಕೊಡಲೇಬೇಕು ಎಂದು ಆಗ್ರಹಿಸಿದರು.
ಅಲ್ಲದೆ ನೂರಾರು ವರ್ಷಗಳಿಂದ ಗಡಿಭಾಗದ ರೈತರ ಜೀವ ಹಿಂಡುತ್ತಿರುವ ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬನ್ನೇರುಘಟ್ಟ ಅರಣ್ಯ ಉದ್ಯಾನವನ ಅಭಿವೃದ್ಧಿಪಡಿಸಿದಂತೆ ಯರಗೋಳ್ ಪಕ್ಕದಲ್ಲಿರುವ ಸಾವಿರಾರು ಎಕರೆ ಅರಣ್ಯವನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಸರ್ಕಾರಕ್ಕೂ ಆದಾಯ ಬರುತ್ತದೆ. ಕಾಡಾನೆಗಳ ಹಾವಳಿಗೂ ಶಾಶ್ವತ ಪರಿಹಾರ ನೀಡುವಂತಾಗುತ್ತದೆ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರ್.ಐ ಸುರೇಶ್, ಎಇಇ ಶಿವಕುಮಾರ್ ಅವರು, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು. ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ವಿಶ್ವ, ಮುನಿರಾಜು, ಲಕ್ಷ್ಮಣ್, ಸುರೇಶ್ಬಾಬು, ರಾಮಸಾಗರ ವೇಣು, ಚಾಂದ್ಪಾಷ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಲಪತಿ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮುಳಬಾಗಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತರ್ನಹಳ್ಳಿ ಆಂಜಿನಪ್ಪ, ಕೋಟೆ ಮಂಜುಳಮ್ಮ, ಶ್ರೀನಿವಾಸ್, ಮಂಜುನಾಥ್, ಯಾರಂಘಟ್ಟ ಗಿರೀಶ್, ಮಂಗಸoದ್ರ ತಿಮ್ಮಣ್ಣ, ಮುಂತಾದವರಿದ್ದರು.
nammasuddi.net ನಲ್ಲಿ ಜಾಹೀರಾತು ಪ್ರಕಟಣೆಗಾಗಿ ಸಂಪರ್ಕಿಸಿ :
ಕೆ.ಎಸ್.ಗಣೇಶ್ – 9448311003
ಸಿ.ವಿ.ನಾಗರಾಜ್ – 9632188872
ಕೆ.ರಾಮಮೂರ್ತಿ – 9449675480