PLACE YOUR AD HERE AT LOWEST PRICE
ಕೆಜಿಎಫ್:ಮಣಿಪುರ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಪಾರ್ಕ್ನಿಂದ ಗಾಂಧಿ ವೃತ್ತದವರೆಗೆ ಕಪ್ಪು ಬಾವುಟದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಎಪಿಎಲ್ ರಂಗನಾಥ್, ದೇಶದ ಸಣ್ಣ ರಾಜ್ಯವಾಗಿರುವ ಮಣಿಪುರದಲ್ಲಿ ಜನಾಂಗೀಯ ಸಂಘರ್ಷದಲ್ಲಿ ದಲಿತ ಮಹಿಳೆಯನ್ನು ಮತ್ತು ದೇಶ ಕಾಯುವ ನಿವೃತ್ತ ಯೋಧನ ಪತ್ನಿಯನ್ನು ವಿವಸ್ತçಗೊಳಿಸಿ ಮೆರವಣಿಗೆ ನಡೆಸಲಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ದಲಿತರ ಮೇಲೆ ಹಲ್ಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ, ಮನುವಾದಿಗಳ ಅಟ್ಟಹಾಸದಿಂದ ದಲಿತರಿಗೆ ದೇಶದಲ್ಲಿ ರಕ್ಷಣೆ ಇದೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ದೇಶದಲ್ಲಿ ದಲಿತರ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಅಂಬೇಡ್ಕರ್ ಬರೆದ ಸಂವಿಧಾನದಿAದ ಆಯ್ಕೆಯಾಗಿರುವ ಶಾಸಕರು, ಸಂಸದರು ಮಾತ್ರ ತುಟಿ ಬಿಚ್ಚದೇ ಮೌನವಾಗಿರುವುದು ದುಃಖಕರವಾದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ದಲಿತ ಮಹಿಳೆಯರ ಮೇಲೆ, ದಲಿತ ಯುವಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಅಂಬೇಡ್ಕರ್ ನೀಡಿದ ಭಿಕ್ಷೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತಿತರೆ ಪಕ್ಷಗಳಿಂದ ಸಂಸದ, ಶಾಸಕರಾಗಿ ಆಯ್ಕೆಯಾಗಿರುವವರು ಒಬ್ಬರೂ ಸಹ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ದಲಿತ ಕೋಟಾದಲ್ಲಿ ಆಯ್ಕೆಯಾಗಿರುವ ಸಂಸದರು ಮತ್ತು ಶಾಸಕರು ಸಹ ದಲಿತ ವಿರೋಧಿಗಳೇ ಆಗಿದ್ದಾರೆ ಎಂದು ಟೀಕಿಸಿದರು.
ಕೋಲಾರ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರದಿಂದ ೩ ಶಾಸಕರು ಆಯ್ಕೆಯಾಗಿದ್ದು ಒಬ್ಬರು ಸಹ ಮಣಿಪುರ ಘಟನೆ ಬಗ್ಗೆ ದ್ವನಿ ಎತ್ತಿಲ್ಲ ಇದು ನೋವಿನ ವಿಚಾರವಾಗಿದೆ. ಜನಪ್ರತಿನಿಧಿಗಳಿಗೆ ಕೇವಲ ಅವರ ಉದ್ದ್ದಾರಕ್ಕಾಗಿ ಮಾತ್ರ ದಲಿತ ಎಂಬ ಟ್ರಂಪ್ಕಾರ್ಡ್ ಬಳಸುತ್ತಾರೆ. ದೇಶದಲ್ಲಿ ದಲಿತ ಕುಟುಂಬಗಳ ಮೇಲೆ ಹಲ್ಲೆ ದೌರ್ಜನ್ಯಗಳು ನಡೆದಾಗ ಮಾತ್ರ ಮೌನಕ್ಕೆ ಶರಣರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ನಿವೃತ್ತ ಬಿಇಎಂಎಲ್ ನೌಕರ ರಾಜಶೇಖರನ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಸಿ.ಮುರಳಿ, ನಗರಸಭೆ ಸದಸ್ಯ ತಂಗರಾಜ್, ಗೀತಾ, ಅನ್ಬರಸನ್, ಪುರುಷೋತ್ತಮನ್, ದಾಸ್ ಮೊದಲಾದವರು ಇದ್ದರು.