PLACE YOUR AD HERE AT LOWEST PRICE
ರಾಜ್ಯ ಸರ್ಕಾರ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿರುವುದನ್ನು ವಾಪಸ್ ಪಡೆಯದಿದ್ದರೆ, ಎಸ್ಸಿ ಎಸ್ಟಿ ಸಮುದಾಯದ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.
ರಾಜ್ಯ ಸರ್ಕಾರ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಸರ್ಕಾರದ ನಡೆ ಇವತ್ತು ನಮಗೆ ನಿರಾಸೆ ತಂದಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ದಲಿತರ ಜೀವನದ ಜೊತೆ ಆಟ ಆಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಇಬ್ಬರೂ ದಲಿತರ ಕೇರಿಗಳಿಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡಿ ಬಂದಿರಿ, ಆಗ ದಲಿತರಿಗೆ ನಿಮ್ಮ ಎಸ್ಸಿಎಸ್ಪಿ/ಟಿಎಸ್ಪಿ ಹಣ ಬಳಕೆ ಮಾಡುತ್ತೇವೆ ಅಂತ ಹೇಳಬೇಕಿತ್ತು” ಎಂದು ಕಿಡಿಕಾರಿದರು.
“ಗ್ಯಾರಂಟಿಗಳ ಹೆಸರಲ್ಲಿ ರಾಜ್ಯವನ್ನು ದಿವಾಳಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಾನು ಬಜೆಟ್ ಸಂದರ್ಭದಲ್ಲಿಯೇ ಹೇಳಿದ್ದೆ. ನೀವು 34 ಸಾವಿರ ಕೊಟಿ ಕೊಡುವುದಾಗಿ ಹೇಳಿದ್ದೀರಿ. ಆದರೆ ಸುಮಾರು 23 ಸಾವಿರ ಕೋಟಿ ಮಾತ್ರ ಎಸ್ಸಿಎಸ್ಪಿ/ಟಿಎಸ್ಪಿಗೆ ನೀಡುತ್ತಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.
“ಶಕ್ತಿ ಯೋಜನೆಗೆ 700 ಕೋಟಿ ಮೀಸಲಿಟ್ಟಿದ್ದೀರಿ. ಶಕ್ತಿ ಯೋಜನೆಯಡಿ ಎಸ್ಸಿ ಎಸ್ಟಿ ಯಾರು ಎಂದು ಹೇಗೆ ಗುರುತಿಸುತ್ತೀರಿ. ಗೃಹ ಲಕ್ಷ್ಮೀ ಯೋಜನೆ ಅಡಿ ಗೃಹಿಣಿಯರಿಗೆ ಸುಮಾರು 5,500 ಕೋಟಿ ರೂ. ಎಸ್ಸಿಎಸ್ಪಿ/ಟಿಎಸ್ಪಿ ಹಣ ನೀಡಿದ್ದೀರಿ, ಅವರಲ್ಲಿ ಯಾರು ಎಸ್ಸಿ ಎಸ್ಟಿ ಅಂತ ಹುಡುಕುತ್ತಿರಾ? ಎಸ್ಸಿಎಸ್ಪಿ/ಟಿಎಸ್ಪಿಯಿಂದ ವರ್ಗಾವಣೆ ಮಾಡಿರುವ ಸುಮಾರು 11 ಸಾವಿರ ಕೋಟಿ ರೂ ಎಲ್ಲವೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಬಳಕೆ ಆಗುವುದಿಲ್ಲ” ಎಂದರು.
“ಈ ಹಣ ಇದ್ದಿದ್ದರೆ ದಲಿತರಿಗೆ ಸಾವಿರಾರು ಗಂಗಾ ಕಲ್ಯಾಣ ಬೋರ್ ವೆಲ್ ಕೊರೆಸಬಹುದಿತ್ತು. ಎಸ್ಸಿ ಎಸ್ಟಿ ಹಾಸ್ಟೆಲ್ ನಿರ್ಮಾಣ ಮಾಡಬಹುದಿತ್ತು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಬಹುದಿತ್ತು. ನೀವು ಅದನ್ನು ತಪ್ಪಿಸಿ ಎಸ್ಸಿ ಎಸ್ಟಿ ಜನರಿಗೆ ಅನ್ಯಾಯ ಮಾಡಿದ್ದೀರಿ” ಎಂದು ಹರಿಹಾಯ್ದರು.
“ನಾವು ದಲಿತರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಿದ್ದೆವು. ನೀವು ಅದನ್ನು 47 ಯುನಿಟ್ ಗೆ ಇಳಿಸಿದ್ದೀರಿ. ನೀವು ದಲಿತರ ಪರವಾಗಿದ್ದರೆ 7ಡಿ ಕಾಯ್ದೆಯನ್ನು ಮೊದಲ ಅಧಿವೇಶನದಲ್ಲಿ ರದ್ದುಗೊಳಿಸಬಹುದಿತ್ತು. ಅದರ ಬದಲು ಮತಾಂತರ, ಗೋಹತ್ಯೆ ನಿಷೇಧ ವಾಪಸ್ ಪಡೆಯಲು ಮುಂದಾಗಿದ್ದೀರಿ” ಎಂದು ಆರೋಪಿಸಿದರು.
ಮಹಾದೆವಪ್ಪಗೆ ಬೆನ್ನುಮೂಳೆ ಇಲ್ವಾ?
“ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರು ದಲಿತ ಸಮುದಾಯದಿಂದ ಬಂದವರು. ಆ ಸಮುದಾಯದ ಆಶೀರ್ವಾದದಿಂದ ಮಂತ್ರಿಯಾದವರು. ಇದನ್ನು ತಡೆಯಲು ಅವರಿಗೆ ಬೆನ್ನು ಮೂಳೆ ಇಲ್ಲವೇ? ಹಣ ವರ್ಗಾವಣೆಗೆ ಒಲ್ಲದ ಮನಸಿನಿಂದ ಒಪ್ಪಿರುವುದಾಗಿ ಹೇಳಿದ್ದೀರಿ. ನಿಮಗೆ ಅಂತಹ ಅನಿವಾರ್ಯತೆ ಏನಿದೆ? ನೀವು ದಲಿತರಿಗೆ ಮಾಡುತ್ತಿರುವ ದ್ರೋಹವಾಗಿದೆ” ಎಂದು ಟೀಕಿಸಿದರು.
“ನೀವು ಎಷ್ಟೇ ದೊಡ್ಡ ಮಂತ್ರಿಗಳಿದ್ದರೂ ದಲಿತರಿಗೆ ಅನ್ಯಾಯ ಮಾಡಿದರೆ ನೀವು ಆ ಸಮುದಾಯಕ್ಕೆ ಮಾಡುವ ದ್ರೋಹವಾಗಿದೆ. ಕೂಡಲೇ ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಚಳವಳಿ ರೂಪದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಕೆ. ಬೆಳ್ಳುಬ್ಬಿ ಚಿ.ನಾ.ರಾಮು ಸೇರಿದಂತೆ ಅನೇಕರು ಹಾಜರಿದ್ದರು.