PLACE YOUR AD HERE AT LOWEST PRICE
ಗದ್ದರ್ ಅಣ್ಣಾ, ದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.
ಬಡ ರೈತರ ನೊಗಕ್ಕೆ ಹೆಗಲು ಕೊಟ್ಟ
ಬಡ ಎತ್ತುಗಳ ಕೊರಳ ಕಿಂಕಿಣಿ ಪಟ್ಟಿಯನ್ನು
ಕಾಲಿನ ಕಿರುಗೆಜ್ಜೆಯಾಗಿ ಕಟ್ಟಿ ಕುಣಿಯುತ್ತಾ
ಕೇಕೆ ಹಾಕುತ್ತಾ ಆಳುವವವರ ಕಣ್ಣಿಗೆ ಧೂಳೆಬ್ಬಿಸುತ್ತಾ
ಶ್ರಮಜೀವಿಗಳ ಮನೋರಂಗಭೂಮಿಯಲ್ಲಿ
ನವಕ್ರಾಂತಿಯ ಗಾನವನ್ನು ಮೊಳಗಿಸಿದ ಗದ್ದರ್ !
ಓದು ಬರಹ ಗೊತ್ತಿಲ್ಲದ, ಅಡವಿ ಗ್ರಾಮದ
ನಡಮಂತರಂ ಯಾನಾದುಲ ಆತ್ಮಬಂಧುವಾಗಿ
ಮುಗ್ದಜನರ ದಗ್ಧಬದುಕಿನ ಬವಣೆಗಳನ್ನೇ
ಹಾಡು ಕಟ್ಟಿ ಕಣ್ತೆರೆಸಿದ, ಕಣ್ಣೊರೆಸಿದ,
ಕಪ್ಪುಕಂಬಳಿ ಹೊದ್ದುಕೊಂಡ ಕೆಂಪುಕರವಸ್ತ್ರವೇ!
ಜನರ ನಾಲಿಗೆಯಲ್ಲೇ ಹಾಡಿದ ಕೆಂಪುಗುಂಡಿಗೆಯೇ !
ಕೂಲಿಜನರು, ರೈತಾಪಿಗಳು, ಪೀಡಿತರು,
ಪೌರುಷ ಸಂತ್ರಸ್ತ ಮಹಿಳೆಯರು, ಬಾಲಕಾರ್ಮಿಕರು,
ದೀನರು, ಹೀನರು ನಾನಾಬಗೆಯ ಮೂಕಜೀವಿಗಳಿಗೆ
ದಿಟ್ಟ ಧ್ವನಿಯಾಗಿ ಉಳ್ಳವರ ಎದೆಯಲ್ಲಿ ನಡುಕ
ಹುಟ್ಟಿಸಿದ ಉಗ್ರ ನರಸಿಂಹ ರೂಪಿಯಾದ ಗದ್ದರ್ !
ಬೆವರನ್ನು ತಬ್ಬಿಕೊಂಡು ಉಬ್ಬಿದ ವಕ್ಷಸ್ಥಲವೇ !
ಅರುಣ ಸೂರ್ಯನಾಗಿ ಹುಟ್ಟಿ ಕೆಂಪುಸೂರ್ಯನಾಗಿ
ದೇಶ ದೇಶಗಳನು ಮೆಟ್ಟಿದ ಅಜ್ಞಾನ ತಿಮಿರದಹನವೇ !
ಮಧ್ಯಾಹ್ನದ ಸುಡುಬಿಸಿಲು ಇಳಿದು ಸಂಜೆಸೂರ್ಯನಾಗಿ ಗಿರಿಶಿಖರಗಳ ಮಧ್ಯೆ ಕಾಣದಾಗಿ ಕಣ್ಮರೆಯಾದೆಯಾ ?
ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ ?
ನಮ್ಮೆಲ್ಲರ ಭಾವಜಲಕ್ಕೆ ನಿನ್ನ ಹಾಡುಗಳೇ ಸುಣ್ಣಾ !
ಪ್ರೊ:ವಿ.ಚಂದ್ರಶೇಖರ ನಂಗಲಿ.