PLACE YOUR AD HERE AT LOWEST PRICE
ಬಂಗಾರಪೇಟೆ:ಸ್ವಾತಂತ್ರ್ಯ ಬಂದು 77 ವರ್ಷವಾದರೂ ದೇಶದ ಸಂಪತ್ತನ್ನು ಸೃಷ್ಟಿಸುವ ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಕೆ.ಪಿ.ಆರ್.ಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸೂರ್ಯನಾರಾಯಣ ಹೇಳಿದರು.
ಅವರು ಪಟ್ಟಣದ ಕೆಂಪೇಗೌಡ ಪುತ್ತಳಿ ಬಳಿ ಸಿಐಟಿಯು ಹಾಗೂ ಕೆ.ಪಿ.ಆರ್.ಎಸ್ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರಚಾರ ಅಂದೋಲನ ಜಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಒಂದೆಡೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು ಮತ್ತೊಂದೆಡೆ ರೈತರ ಭೂಮಿಯನ್ನು ಕಿತ್ತುಕೊಂಡು ರೈತಾಪಿ ಕೃಷಿ ಬದಲಿಗೆ ಕಾರ್ಪೊರೇಟ್ ಕೃಷಿ ತರಲು ಸರ್ಕಾರಹೊರಟಿದೆ.
ಕೃಷಿ ತಜ್ಞ ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ 50% ಎಷ್ಟು ಲಾಭಾಂಶ ಸೇರಿದಂತೆ ಬೆಂಬಲ ಬೆಲೆಯನ್ನು ನಿಗದಿಗೊಳಿಸುವ ಕಾನೂನು ಮಾಡುವ ಬದಲಿಗೆ ರೈತರು ತಮ್ಮ ಸ್ವಾಭಿಮಾನ ಸಂಕೇತವಾಗಿರುವ ಭೂಮಿಯನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಸಗೊಬ್ಬರ ಸಬ್ಸಿಡಿ ರದ್ದುಪಡಿಸಲಾಗಿದೆ 60% ರಷ್ಟು ಭೂ ರಹಿತರು 19 ಕೋಟಿಗಿಂತಲೂ ಹೆಚ್ಚು ಜನರು ಕೃಷಿ ಕೂಲಿಕಾರರಾಗಿ ಪರಿವರ್ತನೆಯಾಗಿ ಕನಿಷ್ಠ ಕೂಲಿಯ ಖಾತ್ರಿ ಇಲ್ಲದೆ ಸಾಮಾಜಿಕ ರಕ್ಷಣೆಯು ಇಲ್ಲದೆ ಪರದಾಡುತ್ತಿದ್ದಾರೆ. ಕೂಲಿಕಾರರ ರಕ್ಷಣೆಗೆ ಸಮಗ್ರ ಕಾನೂನು ಜಾರಿಗೊಳಿಸಬೇಕೆಂದು ಹಲವು ದಶಕಗಳಿಂದ ನಿರಂತರ ಹೋರಾಟ ಮುಂದುವರಿಸಲಾಗುತ್ತಿದೆ. ಆದರೆ ಕೇರಳ ರಾಜ್ಯ ಹೊರತುಪಡಿಸಿ ಇತರೆಡೆ ಕೃಷಿ ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತಾ ಕಾನೂನುಗಳು ಇಲ್ಲವಾಗಿದೆ ಎಂದು ಹೇಳಿದರು.
77ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದ ಹಾರ್ದಿಕ ಸಾರ್ವಭೌಮತೆ, ಸಂವಿಧಾನದ ಕನಸಾದ ಕಲ್ಯಾಣ ಕಾರ್ಯಕ್ರಮಗಳು ಗಗನ ಕುಸುಮವಾಗುತ್ತಿವೆ, ಮಾತ್ರವಲ್ಲದೆ ಭಾರತದಲ್ಲಿ ಮನುಷ್ಯನ ಜೀವಿಸುವ ಹಕ್ಕು, ಘನತೆಯ ಬದುಕಿನ ಹಕ್ಕು, ಸಮಾನತೆಯ ಹಕ್ಕು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಬಂದಿದೆ. ಅದರಿಂದ ರಾಜ್ಯದ ದುಡಿಯುವ ಜನರು ಒಂದಾಗಿ 1947ರ ಸ್ವಾತಂತ್ರ್ಯದ ಪರಿಕಲ್ಪನೆಯಂತೆ ಭಾರತವನ್ನು ಕಲ್ಯಾಣ ರಾಷ್ಟ್ರದ ಕಡೆ ತೆಗೆದುಕೊಂಡು ಹೋಗಲು ಎಲ್ಲರೂ ದುಡಿಯೋಣ ಎಂದರು.
2023 ಆಗಸ್ಟ್ ಒಂದರಿಂದ 14ರವರೆಗೆ ದೇಶ ವ್ಯಾಪ್ತಿ ಪ್ರಚಾರ ಆಂದೋಲನ ಮತ್ತು ಆಗಸ್ಟ್ 14ರ ಮಧ್ಯರಾತ್ರಿ ಧ್ವಜಾರೋಹಣ ಮತ್ತು ಅಹೋರಾತ್ರಿ ವೈವಿಧ್ಯಮಯ ಆಚರಣೆಗೆ ನಡೆಸಲು ದೇಶ ಕ್ರಾಂತಿಕಾರಿ ಪರಂಪರೆ ಮೂಸೆಯಲ್ಲಿ ಒಡಮೂಡಿದ ರೈತ ಕಾರ್ಮಿಕ ಕೂಲಿಕಾರರ ಸಂಘಗಳು ಜಂಟಿಯಾಗಿ ಕರೆ ನೀಡಿವೆ. ರಾಜ್ಯದಲ್ಲಿ ಆಹೋರಾತ್ರಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸವ ಮೂಲಕ ನಮ್ಮ ಸ್ವಾತಂತ್ರವನ್ನು ಉಳಿಸಲು ಜನತೆಯ ಹೋರಾಟಗಳನ್ನು ಮುನ್ನಡೆಸಲು ಪಣತೊಡಲು ನಾವೆಲ್ಲರೂ ಮುಂದಾಗೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ ಶ್ರೀನಿವಾಸ್, ಕೇಶವ ರಾವ್, ಅಪ್ಪಯ್ಯಣ್ಣ, ಮೋಹನ್,ಪಿಚ್ಚಿ ಕಣ್ಣು, ಹನುಮಂತರಾಯ,ಮುನಿಸ್ವಾಮಿ, ಪೆರಮಾಲಪ್ಪ,ಮೋಹನ್ ಕುಮಾರ್ ಇನ್ನೂ ಅನೇಕರು ಇದ್ದರು.