PLACE YOUR AD HERE AT LOWEST PRICE
ಇಂಫಾಲ್:ದೇಶದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮೇಳೈಸಿತ್ತು. ಅದ್ರಲ್ಲೂ ಗಲ್ಲಿಗಲ್ಲಿಯೂ ಸ್ವಾತಂತ್ರ್ಯದ ಕಳೆ ತುಂಬಿಕೊಂಡು, ಭಾರತದ ಗೆಲುವಿನ ಮೆಲುಕು ಹಾಕಿವೆ. ಹೀಗಿರುವಾಗಲೇ ಹಿಂಸಾಚಾರ ಪೀಡಿತ ಮಣಿಪುರದಲ್ಲೂ ಸ್ವಾತಂತ್ರ್ಯ ದಿನದ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಸಮಯದಲ್ಲೇ ಮಣಿಪುರದ ಸಿಎಂ ಶಾಂತಿ ಸಂದೇಶ ರವಾನಿಸಿದ್ದಾರೆ.
ಮಣಿಪುರದ ಪರಿಸ್ಥಿತಿ ಕಳೆದ 3 ತಿಂಗಳಿಂದಲೂ ಬದಲಾಗುತ್ತಿಲ್ಲ,
ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿರುವ ಸ್ಥಿತಿ ಆತಂಕ ಮೂಡಿಸಿದೆ. ಇದೇ ಹೊತ್ತಲ್ಲಿ ಮಣಿಪುರ ಸಿಎಂ ಮಾತನಾಡಿ ಕೆಲವು ತಪ್ಪು ತಿಳುವಳಿಕೆ, ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿ ಮತ್ತು ವಿದೇಶಿ ಶಕ್ತಿಗಳ ಪರೋಕ್ಷ ಆತಂಕವಾದ ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಈ ಮೂಲಕ ಹಿಂಸೆ ನಡೆಸುತ್ತಿರುವವರ ವಿರುದ್ಧ ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಆಕ್ರೋಶ ಹೊರ ಹಾಕಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಹಿಂಸೆಯಿಂದ ಪರಿಹಾರ ಸಿಗುವುದಿಲ್ಲ.
ಮಣಿಪುರ ರೈಫಲ್ಸ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನಂತರ ಬಿರೇನ್ ಸಿಂಗ್ ಮಾತನಾಡಿದರು. ಹತ್ತಾರು ವರ್ಷದಿಂದ ನಾವು ಒಟ್ಟಿಗೆ ವಾಸಿಸಿದ್ದೇವೆ ಈಗ ಅದೇ ರೀತಿ ಸಾಮರಸ್ಯದಿಂದ ಒಟ್ಟಿಗೆ ಬಾಳಬೇಕು. ಹಿಂಸಾಚಾರದಿಂದ ನೂರಾರು ಜನರು ಜೀವ ಕಳೆದುಕೊಂಡು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆಸ್ತಿ ಪಾಸ್ತಿ ನಷ್ಟವಾಗಿ ಜನರು ಸಂಕಷ್ಟದಲ್ಲಿದ್ದಾರೆ ಹಿಂಸಾಚಾರದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗಲ್ಲ. ಹೀಗಾಗಿಯೇ ಎಲ್ಲ ಸಮುದಾಯದ ಮುಖಂಡರು ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚಸಲಿ ಎಂದು ಸಲಹೆ ನೀಡಿದ್ದಾರೆ. ಸ್ವಾತಂತ್ರ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಸಂಧಾನಕ್ಕೆ ಈ ಮೂಲಕ ಪರೋಕ್ಷವಾಗಿ ಸೂಚಿಸಿದ್ದಾರೆ.
ಹಳೆಯದನ್ನು ಮರೆತು ನಾವು ಬಾಳಬೇಕು!
ಹಾಗೇ ಹಿಂಸಾಚಾರ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದವರ ಬಗ್ಗೆ ಮಾತನಾಡಿರುವ ಮಣಿಪುರದ ಸಿಎಂ ಬಿರೇನ್ ಸಿಂಗ್, ಹಿಂಸಾಚಾರ ಪೀಡಿತ ಜನರ ಪುನರ್ವಸತಿಗೆ ರಾಜ್ಯ ಸರ್ಕಾರ ನಿರಂತರ ಶ್ರಮ ವಹಿಸಿದೆ. ಕ್ಷಮಿಸಿ ಮರತುಬಿಡಿ ಎಂಬ ಮಂತ್ರವನ್ನು ಎಲ್ಲರೂ ಪಾಲಿಸಬೇಕು. ಒಂದು ಕುಟುಂಬ ಒಂದೇ ಜೀವನೋಪಾಯ ಯೋಜನೆ ಕಲ್ಪಿಸಿ ಜನರಿಗೆ ಪುನರ್ವಸತಿ ಕಲ್ಪಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಮಣಿಪುರ ಸರ್ಕಾರ ಈ ಸಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿತ್ತು.
ಡ್ರಗ್ಸ್ ವಿರುದ್ಧ ವಾರ್ ಗ್ಯಾರಂಟಿ!
ಮಣಿಪುರ ಹಿಂಸೆಯ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುವಾಗಲೇ ಮಣಿಪುರದ ಸಿಎಂ ಡ್ರಗ್ಸ್ ದಂಧೆ ವಿರುದ್ಧ ಗರಂ ಆಗಿದ್ದಾರೆ. ಡ್ರಗ್ಸ್ ವಿರುದ್ಧದ ಕ್ರಮ ಯಾವುದೇ ಸಮುದಾಯದ ಅಥವಾ ವ್ಯಕ್ತಿಗಳ ವಿರುದ್ಧ ಅಲ್ಲ. ದೇಶವನ್ನು ರಕ್ಷಿಸಲು ಇದು ಅನಿವಾರ್ಯ ಎಂದು ಬಿರೇನ್ ಸಿಂಗ್ ಗುಡುಗಿದ್ದಾರೆ. ನಿಷೇಧಿತ ಕೃಷಿಗಾಗಿ ವ್ಯಾಪಕ ಅರಣ್ಯನಾಶ ಆರಂಭಿಸಿದಾಗ ಸರ್ಕಾರವು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ, ಅಕ್ರಮ ಡ್ರಗ್ಸ್ ದಂಧೆ ಕೊನೆಗಾಣಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮಣಿಪುರ ಸಿಎಂ ಹೇಳಿದ್ದಾರೆ.
ಹೀಗಾಗಿ ಹಿಂಸೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ಸಿಕ್ಕಿದೆ. 3 ತಿಂಗಳಿಂದ ಮಣಿಪುರ ಧಗಧಗ ಅಂದಹಾಗೆ ಮೇ 3 ರಂದು ಮಣಿಪುರದಲ್ಲಿ ಆರಂಭವಾದ ಹಿಂಸಾಚಾರದಲ್ಲಿ 180 ಕ್ಕೂ ಹೆಚ್ಚು ಜನರು ಮೃತಪಟ್ಟು, 3000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ಆಸ್ತಿ ನಷ್ಟಕ್ಕೆ ಲೆಕ್ಕ ಸಿಗುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.
ಮಣಿಪುರ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ ಕೂಡ ಹಿಂಸೆ ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದೆ. ಆದ್ರೂ ಮಣಿಪುರ ತಣ್ಣಗಾಗದೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇತ್ತೀಚೆಗೆ ವಿಪಕ್ಷ ಮುಖಂಡರು ಮುಂಗಾರು ಅಧಿವೇಶನದಲ್ಲಿ ಇದೇ ವಿಚಾರ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದವು. ಈಗ ಮಣಿಪುರ ಸಿಎಂ ಮಾತನಾಡಿದ್ದು, ಹಿಂಸೆ ಬಿಟ್ಟು ಶಾಂತಿ ಸ್ಥಾಪಿಸಲು ಕರೆ ನೀಡಿದ್ದಾರೆ.