PLACE YOUR AD HERE AT LOWEST PRICE
ಬೆಂಗಳೂರು:ಕೇಂದ್ರ ಸರ್ಕಾರದಡಿ ಬರುವ ಐಬಿಪಿಎಸ್ (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್) ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಡೆಸುತ್ತಿರುವುದು ಏಕೆ? ಇದರಿಂದ ಕನ್ನಡ ಹಾಗೂ ಇತರೇ ಭಾಷಿಗರು ಅವಕಾಶ ವಂಚಿತರಾಗುವುದಿಲ್ಲವೇ? ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ಪ್ರಶ್ನಿಸಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದಲ್ಲಿರುವ ಹಿಂದಿ ಮಾತೃಭಾಷಿಗರು ಹಿಂದಿಯಲ್ಲೇ ಪರೀಕ್ಷೆ ತೆಗೆದುಕೊಳ್ಳಬಹುದಾದರೆ ಕನ್ನಡಿಗರು ಹಾಗೂ ದೇಶದ ಇನ್ನಿತರ ಮಾತೃ ಭಾಷಿಗರಿಗೂ ಅವರದೇ ಭಾಷೆಯ ಆಯ್ಕೆ ಏಕಿಲ್ಲ? ತಮ್ಮ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಅನಿವಾರ್ಯ ವಾತಾವರಣವಿದೆ ಏಕೆ? ಎಂದು ಪ್ರಶ್ನಿಸಿದ್ದಾರೆ.
“ಇದು ಹಿಂದಿ ಹೇರಿಕೆಯಾಗಿದೆ ಹಾಗೂ ಹಿಂದಿಯೇತರರನ್ನು 2ನೇ ದರ್ಜೆ ಭಾರತೀಯರನ್ನಾಗಿ ಪರಿಗಣಿಸುವ ಕುತಂತ್ರವಾಗಿದೆ. ಅಂದಾಜು ಏಳು ಕೋಟಿ ಕನ್ನಡಿಗರು ಕರ್ನಾಟಕದಲ್ಲಿ, ಮತ್ತು ಅಂದಾಜು 82 ಕೋಟಿ ಹಿಂದಿಯೇತರರು ಭಾರತದಲ್ಲಿದ್ದಾರೆ. ಈ ಕಾರ್ಯವು ಇವರನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನವಲ್ಲವೇ?” ಎಂದು ಪ್ರಶ್ನಿಸಿದರು.
ಸಂಸ್ಕೃತಕ್ಕೂ ಬ್ಯಾಂಕ್ ಸೇವೆಗಳಿಗೂ ಏನು ಸಂಬಂಧ? ಬ್ಯಾಂಕುಗಳಲ್ಲಿ ಕನ್ನಡಕ್ಕೆ ಅವಕಾಶ ಇಲ್ಲ, ಸಂಸ್ಕೃತಕ್ಕೆ ಇದೆ ಎನ್ನುವುದಾದರೆ, ಇದು ವಿಪರ್ಯಾಸವಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಹಾಗೂ ಬೇರೆ ಎಲ್ಲೆಡೆ ಕೂಡ ಜನರಲ್ಲಿ ನನ್ನ ಮನವಿ. ಬ್ಯಾಂಕುಗಳಲ್ಲಿ ಈ ಭಾಷಾ ನೀತಿಯ ಅನ್ಯಾಯವನ್ನು ತಡೆಯಲು ಮತ್ತು ಈಗಾಗಲೇ ಆಗಿರುವ ಅನ್ಯಾಯಕ್ಕೆ ಪರಿಹಾರ ಒದಗಿಸಲು ನಾವೆಲ್ಲರೂ ಕೈ ಜೋಡಿಸೋಣ.
ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಮತ್ತು ಬಿಜೆಪಿಯ ಎಲ್ಲ ಬೆಂಬಲಿಗರಿಗೆ ನಮ್ಮ ಸಂದೇಶವಿದು, ದಯವಿಟ್ಟು ಎಚ್ಚರಗೊಳ್ಳಿ. ಅವರು ನಿಮಗೆ ಏನು ಮಾಡುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳಿ. ನಿಮ್ಮದೇ ಗುಲಾಮಗಿರಿಗೆ ನೀವು ವೋಟು ಹಾಕಬೇಡಿ. ನಮ್ಮೊಡನೆ ಕೈ ಜೋಡಿಸಿ. ನಾವೆಲ್ಲರೂ ಬಟ್ಟಾಗಿ ಬದಲಾವಣೆ ತರೋಣ ಎಂದು ರಮೇಶ್ ಬೆಳ್ಳಂಕೊಂಡ ರಾಜ್ಯದ ಜನತೆಗೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ಅಶ್ವಿನಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.