PLACE YOUR AD HERE AT LOWEST PRICE
ಬೆಂಗಳೂರು : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಕಾಂಗ್ರೆಸ್ ಅಸ್ತ್ರ ಪ್ರಯೋಗಿಸುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ನಾಯಕರುಗಳಿಗೆ ಗಾಳ ಹಾಕಿದೆ. ಈ ಮೊದಲು ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಸೇರಿದಂತೆ ಹಲವು ನಾಯಕರಿಗೆ ಗಾಳ ಹಾಕಿತ್ತು. ಇದೀಗ ಆಪರೇಷನ್ ಹಸ್ತ ಜೆಡಿಎಸ್ನತ್ತ ತಿರುಗಿದೆ. ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ಕೊಡಲಾಗಿದೆ. ಈ ಬಗ್ಗೆ ಸ್ವತಃ ಶಾಸಕ ಕೃಷ್ಣಪ್ಪ ಅವರೇ ಇದೀಗ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿರುವ ಎಂ.ಟಿ. ಕೃಷ್ಣಪ್ಪ ಅವರು, ಕಾಂಗ್ರೆಸ್ ಪಕ್ಷದಿಂದ ನನಗೂ ಆಹ್ವಾನ ಬಂದಿದ್ದು ನಿಜ. ಆದ್ರೆ, ಕಾಂಗ್ರೆಸ್ ಗೆ ಏಕೆ ಹೋಗೋಣ? ಹೋಗುವಂತದ್ದು ಏನು ಇದೆ ಹೇಳಿ? ಕಾಂಗ್ರೆಸ್ ನವರೆ 136ಜನ ಇದ್ದು, ಓವರ್ ಲೋಡ್ ಆಗಿದೆ. ನಾವು ಎಲ್ಲಿ ಹೋಗಿ ಕುತಿಕೊಳ್ಳುವುದು ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ಆಹ್ವಾನವನ್ನು ನಿರಾಕರಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಮುಳುಗಿ ಹೋಗಿದೆ. ಒಂದು ಕಡೆ ವರ್ಗಾವಣೆ ದಂಧೆ, ಮತ್ತೊಂದು ಕಡೆ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಕಿಡಿಕಾರಿದ ಕೃಷ್ಣಪ್ಪ, ಕೇಳಿದ ಎಲ್ಲಾ ಕೆಲಸವನ್ನು ಡಿ.ಕೆ.ಶಿವಕುಮಾರ್ ಮಾಡಿಕೊಡುತ್ತಾರೆ. ವಿಧಾನಸೌದದಲ್ಲಿ ಡಿಸಿಎಂ ಡಿಕೆ ಚೇಂಬರ್ಗೆ ಹೋಗಿ ಮಾತಾಡ್ತೇನೆ. ಕಾಂಗ್ರೆಸ್ಗೆ ಹೋಗುವಂತಹದ್ದು ಏನಿದೆ ಹೇಳಿ. ಕಾಂಗ್ರೆಸ್ನಲ್ಲೇ 136 ಶಾಸಕರಿದ್ದು ಓವರ್ ಲೋಡ್ ಆಗಿ ಬಿಟ್ಟಿದೆ. ಸರ್ಕಾರ ಬಿದ್ದು ಹೋಗಲ್ಲ. ಬದಲಿಗೆ ಪಂಚರ್ ಆಗಿ ಮೂಲೆಯಲ್ಲಿ ನಿಂತಿಕೊಳ್ಳುತ್ತೆ ಎಂದು ಲೇವಡಿ ಮಾಡಿದರು.