PLACE YOUR AD HERE AT LOWEST PRICE
ಬಂಗಾರಪೇಟೆ:ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಹಿನ್ನಲೆಯಲ್ಲಿ ತಾಲೂಕಿನ ಚಿನ್ನಕೋಟೆ ಗ್ರಾಪಂನ ತಮ್ಮೇನಹಳ್ಳಿ ಗ್ರಾಮದ ೪೦ ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರದಿಂದ ಖಾಲಿ ನಿವೇಶನ ಹಂಚಿಕೆ ಮಾಡಬೇಕೆಂದು ಅಖಿಲ ಕರ್ನಾಟಕ ಅಂಬೇಡ್ಕರ್ ವೇದಿಕೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಹ ಪಟ್ಟಣಕ್ಕೆ ಹತ್ತಿರವಾಗಿರುವ ಗ್ರಾಮಗಳಲ್ಲಿ ಬಡವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ಸರ್ಕಾರಗಳು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.
ತಾಲೂಕಿನ ಚಿನ್ನಕೋಟೆ ಗ್ರಾಪಂ ವ್ಯಾಪ್ತಿಯ ತಮ್ಮೇನಹಳ್ಳಿ ಗ್ರಾಮದಲ್ಲಿ ಸುಮಾರು ೪೦ ಬಡ ಕುಟುಂಬಗಳಿಗೆ ವಾಸಿಸಲು ಸೂರು ಇಲ್ಲದೆ ಇರುವುದರಿಂದ ಗುಡಿಸಲು ಹಾಗೂ ಬಾಡಿಗೆ ರೂಪದ ಹಳೆಯ ಮನೆಗಳಲ್ಲಿ ವಾಸಿಸುತ್ತಿರುವುದು ದುರಾದೃಷ್ಠಕರವಾಗಿದೆ. ಹಲವಾರು ಬಾರಿ ಗ್ರಾಪಂಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಹ ನೀಡದೇ ತಾಲ್ಲೂಕು ಆಡಳಿತ ನಿರ್ಲಕ್ಷ್ಯತೆ ಮಾಡಿದೆ ಎಂದು ದೂರಿದರು.
ಪ್ರತಿನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿರುವ ೪೦ ಕುಟುಂಬಗಳು ಸ್ವಂತವಾಗಿ ನಿವೇಶನವನ್ನು ಕೊಂಡುಕೊಳ್ಳಲು ಅಶಕ್ತರಾಗಿದ್ದಾರೆ. ಸರ್ಕಾರವು ಈ ಭಾಗದಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ಗುರ್ತಿಸಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕಾಗಿದೆ. ಅನಂತರ ಸರ್ಕಾರದಿಂದ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಅಪರ ಶಿರಸ್ತೇದಾರ್ ಚಂದ್ರಶೇಖರ್ರಿಗೆ ಮನವಿ ಸಲ್ಲಿಸಿದರು. ಜೈಭೀಮ್ ಯುವ ಮುಖಂಡರಾದ ಕೆಜಿಎಫ್ ಸುಧಾ, ಚರಣ್, ಸಂಜು, ಲಿಂಗೇಶ್, ಉದಯ್, ಪವನ್ರೆಡ್ಡಿ, ನಾಗರಾಜ್, ರಾಘವೇಂದ್ರ, ಪ್ರಭಾಕರ್, ಸುರೇಶ್ ಹಾಗೂ ತಮ್ಮೇನಹಳ್ಳಿ ಗ್ರಾಮಸ್ಥರು ಹಾಜರಿದ್ದರು.