PLACE YOUR AD HERE AT LOWEST PRICE
ತಮಿಳುನಾಡಿಗೆ ಬೇಕಾಬಿಟ್ಟಿಯಾಗಿ ನೀರು ಹರಿಬಿಟ್ಟು ಜಲಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಾಪತ್ತೆಯಾಗಿದ್ದಾರೆ. ಅವರನ್ನು ಕಾಂಗ್ರೆಸಿಗರು ಹುಡುಕಿಕೊಡಬೇಕು ಎಂದು ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದೆ.
ಟ್ವಿಟರ್ನಲ್ಲಿ ಕರ್ನಾಟಕ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದ್ದು, “ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ’ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನಾಪತ್ತೆಯಾಗಿದ್ದಾರೆ. ದಯವಿಟ್ಟು ಹುಡುಕಿಕೊಡಿ” ಎಂದಿದೆ.
“ಡಿಕೆ ಶಿವಕುಮಾರ್ ಅವರನ್ನು ಹುಡುಕಿಕೊಟ್ಟವರಿಗೆ ಐದು ಗ್ಯಾರಂಟಿಗಳು ಉಚಿತ ಖಚಿತ ನಿಶ್ಚಿತ” ಎಂದು ವ್ಯಂಗ್ಯವಾಡಿದೆ.
ವಿದ್ಯುತ್ ಲೋಡ್ ಶೆಡ್ಡಿಂಗ್ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರೆತೇ ಹೋಗಿದ್ದ ಲೋಡ್ ಶೆಡ್ಡಿಂಗನ್ನು ಕಾಂಗ್ರೆಸ್ ಬಂದ ನಾಲ್ಕೇ ತಿಂಗಳಲ್ಲಿ ಜಾರಿ ಮಾಡಿದೆ. ವಿದ್ಯುತ್ ಅಭಾವದಿಂದಾಗಿ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳು ಕೆಲಸ ಮಾಡಲಾರದೆ ಉದ್ಯೋಗ ಕಡಿತ ಮಾಡುತ್ತಿವೆ.
ಇನ್ನೊಂದೆಡೆ, ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ದಿನಕ್ಕೆ 7 ಗಂಟೆ ಮೂರು ಫೇಸ್ ವಿದ್ಯುತ್ ಈಗ ಕೇವಲ ಒಂದೆರಡು ಗಂಟೆಗಳಿಗೆ ಇಳಿದಿದೆ. ರಾಜ್ಯದ ಜನತೆಯ ಕೈಯಿಂದ ಅನ್ನ-ನೀರು ಎರಡನ್ನೂ ಕಸಿದುಕೊಂಡಿದ್ದೇ ಸಿದ್ದರಾಮಯ್ಯ ಅವರ ಸರ್ಕಾರದ ನಾಲ್ಕು ತಿಂಗಳ ಸಾಧನೆ” ಎಂದು ಕುಟುಕಿದೆ.
ರಾಜ್ಯ ಶಿಕ್ಷಣ ನೀತಿಗೆ ರಾಜ್ಯ ಸರ್ಕಾರ ಸಮಿತಿ ರಚಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, “ಭಾರತದಲ್ಲಿ ರಾಷ್ಟ್ರೀಯತೆ ಜಾಗೃತಗೊಂಡರೆ, ತನ್ನ ಅಸ್ತಿತ್ವ ಕಮರಿ ಹೋಗುತ್ತದೆ ಎಂಬುದು ಬ್ರಿಟಿಷರ ಸಂಜಾತರಾಗಿರುವ ಕಾಂಗ್ರೆಸ್ ಮನಸ್ಥಿತಿ. ಹೀಗಾಗಿ ಅಧಿಕಾರ ದೊರೆತಾಗ ಮತ್ತು ಅವಕಾಶ ಸಿಕ್ಕಾಗ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯತೆಯ ಅಂಶಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹತ್ತಿಕ್ಕುತ್ತಲೇ ಬಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿದ್ದು, ರಾಷ್ಟ್ರೀಯತೆಯನ್ನು ಒಳಗೊಂಡ ಪಠ್ಯಪುಸ್ತಕವನ್ನು ಹಿಂಪಡೆದಿದ್ದು, ಇದೆಲ್ಲಾ ಕಾಂಗ್ರೆಸ್ನ ರಾಷ್ಟ್ರ ವಿರೋಧಿ ಧೋರಣೆಯ ಪ್ರತೀಕ” ಎಂದು ಹೇಳಿದೆ.
“ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ, ತಾನು ಮಾಡುವ ಕಿತಾಪತಿಗಳಿಗೆ ಜಾಗ ಇರುವುದಿಲ್ಲವೆಂಬುದೇ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಗಿದ್ದ ಪ್ರಮುಖ ಅಸಮಾಧಾನ. ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಕಾಂಗ್ರೆಸ್ ಯಾವುದೇ ಪ್ರಮುಖ ನೀತಿಯನ್ನು ಇದುವರೆಗೆ ಜಾರಿಗೆ ತಂದಿಲ್ಲ.
ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು (ಆರ್ಟಿಇ) ಕಾಯಿದೆಯಿಂದ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಯಿತೇ ವಿನಹ ಶೈಕ್ಷಣಿಕ ಕ್ಷೇತ್ರಕ್ಕಾದ ಪ್ರಯೋಜನ ಶೂನ್ಯ” ಎಂದಿದೆ.