PLACE YOUR AD HERE AT LOWEST PRICE
ಕೋಲಾರ:ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ ಡ್ಯಾಂ ಗ್ರಾಮದ ಅಣೆಕಟ್ಟಿನ ಲೋಕಾರ್ಪಣೆ ನ.10 ನಡೆಯಲಿದ್ದು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡ್ಯಾಂ ಉದ್ಘಾಟನೆಗೆ ಅಹ್ವಾನ ನೀಡಿದರು.
ಬೆಂಗಳೂರಿನ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಮುಖಂಡರು ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಹೊರಭಾಗದಲ್ಲಿ ತಮಿಳುನಾಡಿಗೆ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಮಳೆ ನೀರನ್ನು ತಡೆದು, ಕೋಲಾರ, ಮಾಲೂರು, ಬಂಗಾರಪೇಟೆ ನಗರಗಳು ಮತ್ತು ಸುತ್ತಮುತ್ತ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
2008 ರಲ್ಲಿ ಆರಂಭವಾಗಿದ್ದ ಯೋಜನೆ ಬರೋಬ್ಬರಿ 15 ವರ್ಷಗಳ ನಂತರ ಉದ್ಘಾಟನೆಗೆ ಸಿದ್ದವಾಗಿದ್ದು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಬೂದಿಕೋಟೆ ಬ್ಲಾಕ್ ಅಧ್ಯಕ್ಷ ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಕೆ ನಾರಾಯಣಸ್ವಾಮಿ, ಮುಖಂಡ ಸುಹೇಲ್, ಸಮಾಜಸೇವಕ ಡಿ.ಕೆ ಹಳ್ಳಿ ಗೋಪಾಲರೆಡ್ಡಿ, ಮುಖಂಡರಾದ ದೊಡ್ಡವಲಗಮಾದಿ ಮುನಿರಾಜು, ಬಲಮುಂದೆ ಗ್ರಾಪಂ ಅದ್ಯಕ್ಷ ರಾಮಪ್ಪ, ಬಾಬು ಮುಂತಾದವರು ಇದ್ದರು.