PLACE YOUR AD HERE AT LOWEST PRICE
ಕೋಲಾರ,ಅ.25 : ಜಿಲ್ಲೆಯಲ್ಲಿ ಇತ್ತೀಚಿಗೆ ಮಾಲೂರು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಸರಣಿಯಂತೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದೀಗ ದೊಡ್ಡವಲಗಮಾದಿ ಗ್ರಾಮದ ದಲಿತ ಕೂಲಿಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ದೌರ್ಜನ್ಯ ನಡೆಸಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಪಲವಾಗಿದೆ.
ಕೂಡಲೇ ದಲಿತ ಸಂಘಟನೆಗಳ ಸಭೆ ಕರೆದು ಚರ್ಚೆ ನಡೆಸಿ ದೌರ್ಜನ್ಯ ತಡೆಯದಿದ್ದರೆ ನವೆಂಬರ್ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯರಗೋಳ ಉದ್ಘಾಟನೆಗೆ ಬಂದಾಗ ಘೇರಾವ್ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ತಿಳಿಸಿದರು.
ನಗರದ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆಗೆ ಆಗಮಿಸಿದಾಗ ಪೊಲೀಸರು ತಡೆದು ನಂತರ ಕೆಲವೇ ಮುಖಂಡರು ಹೋಗಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿದರು. ಮನವಿ ಸಲ್ಲಿಸಿದ ನಂತರ ಸೂಲಿಕುಂಟೆ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೇ ತಿಂಗಳ 17 ನೇ ತಾರೀಖು ದೊಡ್ಡ ವಲಗಮಾದಿ ಗ್ರಾಮದಲ್ಲಿ ಕೂಲಿ ಮಾಡಿದ ಕಾಸನ್ನು ಕೇಳಿದ ಪರಿಶಿಷ್ಟ ಜಾತಿ ಜನಾಂಗದ ಅಮರೇಶ್ ಅವರಿಗೆ ಅದೇ ಗ್ರಾಮದ ಜಗದೀಶ್ ಸಿಂಗ್, ಸತೀಶ್ ಸಿಂಗ್ ಮತ್ತು ರವೀಂದ್ರ ಸಿಂಗ್ ಅವರು ರಸ್ತೆಯಲ್ಲಿ ಮನಸೋ ಇಚ್ಛೆ ತಳಿಸುತ್ತಾರೆ. ಬೈಯುತ್ತಾರೆ, ಒಡೆಯುತ್ತಾರೆ, ಜೊತೆಗೆ ಅವಮಾನ ಮಾಡುವ ಮೂಲಕ ತಮ್ಮ ದರ್ಪ ತೋರಿಸುತ್ತಾರೆ.
ಈಗಾಗಲೇ ಆ ವ್ಯಕ್ತಿಯನ್ನು ಬಂಗಾರಪೇಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿಸುವ ಕೆಲಸ ನಡೆಯುತ್ತಿದೆ. ಆದರೆ ಆ ವ್ಯಕ್ತಿ ತಾನು ಯಾರು ಎನ್ನುವುದನ್ನೇ ಮರೆತಿದ್ದಾನೆ. ಆ ಮಟ್ಟಕ್ಕೆ ಅಮರೇಶ್ ಎನ್ನುವ ವ್ಯಕ್ತಿಗೆ ಹಿಂಸೆ ನೀಡಿದ್ದಾರೆ.
ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮೂರನೇ ಆರೋಪಿ ರವೀಂದ್ರ ಸಿಂಗ್ ಅವರನ್ನು ಇಲ್ಲಿಯವರೆಗೂ ಬಂಧಿಸಿಲ್ಲ. 307 ಸೆಕ್ಷನ್ ನಮೂದಿಸಬೇಕು. ಆದರೆ ಆ ಸೆಕ್ಷನ್ ಸಹ ನಮೂದಿಸಿಲ್ಲ. ಕೇವಲ ನೆಪಕ್ಕೆ 2 ಸೆಕ್ಷನ್ ಹಾಕಿ ದೌರ್ಜನ್ಯ ನಡೆಸಿರುವವರಿಗೆ ಅನುಕೂಲವಾಗುವ ರೀತಿ ಎಫ್ಐಆರ್ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಈ ಕೂಡಲೇ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ನೊಂದ ವ್ಯಕ್ತಿಗೆ ನ್ಯಾಯ ಒದಗಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ಇತ್ತೀಚಿಗೆ ದಲಿತರ ಮೇಲೆ ದೌರ್ಜನ್ಯ ಘಟನೆಗಳು ನಡೆಯುತ್ತಿವೆ. ಜಿಲ್ಲಾಡಳಿತ ಎಚ್ಚರಗೊಳ್ಳಬೇಕು. ಪರಿಶಿಷ್ಟ ಜಾತಿ ಜನಾಂಗದ ಜನರಿಗೆ ರಕ್ಷಣೆ ಕೊಡಬೇಕು. ತಪ್ಪಿದಲ್ಲಿ ನವೆಂಬರ್ ತಿಂಗಳ 10 ರಂದು ಮಾನ್ಯ ಮುಖ್ಯಮಂತ್ರಿಗಳು ಯರಗೋಳ ಡ್ಯಾಂ ಉದ್ಘಾಟನೆಗೆ ಬಂದಾಗ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾರೋಹಳ್ಳಿ ರವಿ, ಹೂವರಸನಹಳ್ಳಿ ರಾಜಪ್ಪ, ಸಿ ಜೆ ನಾಗರಾಜ್, ಹುಣಸನಹಳ್ಳಿ ವೆಂಕಟೇಶ್, ಕೆ.ಮದಿವಣ್ಣನ್ , ಕಲಾವಿದ ಯಲ್ಲಪ್ಪ, ಹಿರೇಕರಪನಹಳ್ಳಿ ರಾಮಪ್ಪ, ಕೆ.ರಾಮಮೂರ್ತಿ, ಮಾರುತಿ ಪ್ರಸಾದ್, ಮಂಜುಳಾ, ಬೀರಮಾನಹಳ್ಳಿ ಆಂಜಪ್ಪ , ರಘುಪತಿ, ರಾಜ್ ಕುಮಾರ್, ಮಂಜುನಾಥ್, ಮದನ್ ಸೇರಿದಂತೆ ಇತರರು ಇದ್ದರು.