PLACE YOUR AD HERE AT LOWEST PRICE
ಬಂಗಾರಪೇಟೆ:ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದವತಿಯಿಂದ ಅಕ್ಟೋಬರ್ 31ರ ಮಂಗಳವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಲವಾರು ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಸಾಂಕೇತಿಕ ಧರಣಿ ಹಮ್ಮಿಕೊಳ್ಳಾಗಿದೆ ಎಂದು ಒಕ್ಕೂಟದ ಸಂಚಾಲಕ ಬಸವರಾಜ್ ಕೌತಾಳ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಕಾಂಗ್ರೇಸ್ ಸರ್ಕಾರ ಕೊಟ್ಟಿರುವ ಮಾತಿನಂತೆ ಮತ್ತು ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೇಸ್ ನಾಯಕರು ನೀಡಿದ ವಾಗ್ದಾನದಂತೆ ಮೊದಲನೆ ಅಧಿವೇಶನದಲ್ಲೇ ಜಸ್ಟೀಸ್ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶೀಫಾರಸ್ಸು ಮಾಡಬೇಕಿತ್ತು.
ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಜಸ್ಟೀಸ್ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಎಲ್ಲಾ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮಗಳಿಗೆ ಅವರವರ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಕೊಡಬೇಕು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಾಂತರಾಜ್ ವರದಿಯನ್ನು ಬಹಿರಂಗಪಡಿಸಬೇಕು. ರಾಜ್ಯಾದ್ಯಂತ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು.
ಇನ್ನೂ ಹಲವಾರಿ ಹಕ್ಕೊತ್ತಾಯಗಳನ್ನು ಇಟ್ಟುಕೊಂಡು ಅ.31 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಈ ಪ್ರತಿಭಟನೆಯಲ್ಲಿ ಎಲ್ಲಾ ದಲಿತಪರ ಚಳುವಳಿಗಳ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಹಿಂದೆ ಜನತಾಪರಿವಾರದಿಂದ ಹೊರಬಂದ ದಿನದಿಂದ ಇದುವರೆಗೂ ದಲಿತ ಸಮುದಾಯ ಅವರನ್ನೇ ಜ್ಯಾತ್ಯಾತೀತ ನಾಯಕರೆಂದು ನಂಬಿ ಅವರನ್ನ ಬೆಂಬಲಿಕೊಂಡು ಬರುತ್ತಿದ್ದೇವೆ.
ಜೊತೆಗೆ ಹಿಂದೆ ಅವರು ಮಾಡಿದ ಅಹಿಂದ ಚಳುವಳಿಗೆ ದಲಿತ ಸಂಘಟನೆಗಳ ಪಾತ್ರ ಬಹಳ ಮುಖ್ಯವಾಗಿತ್ತು. 2014 ರಲ್ಲಿ ಸಿದ್ದರಾಮಯ್ಯರವರೇ ರಚಿಸಿದ ಕಾಂತರಾಜು ಆಯೋಗದ ವರದಿಯನ್ನು ಆಧರಿಸಿ ಈ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದ ವೇಳೆ ಎ.ಜೆ.ಸದಾಶಿವ ಆಯೋಗ ರಚನೆಯಾಗಿತ್ತು.
ಅದರ ವರದಿಗಳು ಈಗ ಸರ್ಕಾರದ ಮುಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಪ್ರಭುದ್ದತೆಯಿಂದ ದಲಿತ ಚಳುವಳಿ ಮತ್ತು ಸಮುದಾಯದ ಭಾವನೆಗಳನ್ನು ಅರ್ಥೈಸಿಕೊಂಡು ಕಾಂತರಾಜು ವರದಿ ಅಂಗೀಕರಿಸಿ ಜಾರಿಗೆ ತರಬೇಕು. ಅದರ ಆಧಾರದಂತೆ ಸದಾಶಿವ ಆಯೋಗದ ವರದಿಯನ್ನು ಕೂಡಲೆ ಕೇಂದ್ರಕ್ಕೆ ಶೀಫಾರಸ್ಸು ಮಾಡಬೇಕು.
2018ರ ನ್ಯಾಯಮೂರ್ತಿ ಅರುಣ್ ಮಿಷ್ರಾರವರ ತೀರ್ಪಿನಂತೆ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರಗಳಿಗೆ ಪರಮಾಧಿಕಾರಿ ಇರುತ್ತದೆ. ಅದರಂತೆ ಎಲ್ಲಾ ಶೋಷಿತ ಸಮುದಾಯಗಳನ್ನು ಶೆಡ್ಯೂಲ್-9ರಲ್ಲಿ ಸೇರ್ಪಡೆ ಮಾಡಿ ಆರ್ಥಿಕ ಮತ್ತು ಉದ್ಯೋಗ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಮೀಲಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಮುಂದೆ ಬರಲಿರುವ ಲೋಕಸಭಾ ಚುನಾವಣೆ ಒಳಗಾಗಿ ಈ ಪ್ರಕ್ರಿಯೆಗಳನ್ನು ಮುಗಿಸಿ ಎಲ್ಲಾ ಶೋಷಿತ ಸಮುದಾಯಗಳ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾಮಾಜಿ ನ್ಯಾಯ ಕಲ್ಪಿಸಬೇಕು. ಆ ಮೂಲಕ ಅವರು ದಲಿತ ಸಮುದಾಯಗಳ ಪರ ಇದುರುವುದನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜನಾಧಿಕಾರ ಸಂಘಟನೆಯ ಅದ್ಯಕ್ಷ ಸಿ.ವಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಹೂವರಸನಹಳ್ಳಿ ರಾಜಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಣ್ಣಯ್ಯ ಬಣ) ರಾಜ್ಯ ಸಂಘಟನಾ ಸಂಚಾಲಕ ಕಲಾವಿದ ಯಲ್ಲಪ್ಪ, ಜಿಲ್ಲಾ ಸಂಚಾಲಕ ಹಿರೇಕರಪನಹಳ್ಳಿ ರಾಮಪ್ಪ,, ತಾಲ್ಲೂಕು ಮುಖಂಡರಾದ ಸಿದ್ದನಹಳ್ಳಿ ಯಲ್ಲಪ್ಪ, ಬಸಪ್ಪ, ಕಲಾವಿದ ಮಾರುತಿ ಪ್ರಸಾದ್ ಮೊದಲಾದವರಿದ್ದರು.