PLACE YOUR AD HERE AT LOWEST PRICE
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಶ್ರೀಲಂಕಾ ಸರ್ಕಾರ ಕ್ರೀಡಾ ಮಂಡಳಿಯಲ್ಲಿ ನಿರಂತರ ಹಸ್ತಕ್ಷೇಪ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಐಸಿಸಿ ತಿಳಿಸಿದೆ.
ಐಸಿಸಿಯ ಉನ್ನತ ಮಂಡಳಿಯು ಶುಕ್ರವಾರ ಸಭೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಂಡಿದೆ. ಜೊತೆಗೆ ಶ್ರೀಲಂಕಾ ಕ್ರಿಕೆಟ್ ಸದಸ್ಯರಾಗಿ ಅದರ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿದೆ.
ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ. ನವೆಂಬರ್ 21 ರಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಸಭೆಯ ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಐಸಿಸಿ ಸಂಘಟಿಸುವ ಯಾವುದೇ ಟೂರ್ನಿಯಲ್ಲಿ ಶ್ರೀಲಂಕಾ ಭಾಗವಹಿಸಲು ಅವಕಾಶ ಇಲ್ಲ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ 9 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4 ಅಂಕ ಪಡೆದುಕೊಂಡಿತ್ತು. ಬ್ಯಾಟಿಂಗ್ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್ನಿಂದಾಗಿ ವಿಶ್ವಕಪ್ನಲ್ಲಿ ಸೋಲು ಅನುಭವಿಸಿದೆ.
ಈ ನಡುವೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಿರಿಯ ಆಟಗಾರ ಆ್ಯಂಜೆಲೋ ಮ್ಯಾಥ್ಯೂಸ್ ‘ಟೈಮ್ಡ್ ಔಟ್’ ವಿವಾದವು ಭಾರೀ ಸುದ್ದಿಯಾಗಿತ್ತು.
ಶ್ರೀಲಂಕಾದ ಎಲ್ಲ ಲೀಗ್ ಪಂದ್ಯಗಳು ಮುಗಿದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ತವರಿಗೆ ಮರಳಿದೆ.
ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾದ ಹೀನಾಯ ಪ್ರದರ್ಶನವು “ಹೊರಗಿನ ಪಿತೂರಿಯ ಫಲಿತಾಂಶ” ಎಂದು ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ ಆರೋಪಿಸಿದ್ದಾರೆ.