PLACE YOUR AD HERE AT LOWEST PRICE
ಕೆಜಿಎಫ್.,ಡಿ.೧:ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೩ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಶುಕ್ರವಾರದಂದು ಉದ್ಘಾಟನೆ ಮಾಡಲಾಯಿತು. ಕೆಜಿಎಫ್ನ ಚಾಂಫೀಯನ್ರೀಫ್ಸ್ ನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಲಾರದ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಕೆಜಿಎಫ್ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು, ಸಕ್ರಿಯವಾಗಿ ಕ್ರೀಡಾಸಕ್ತಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪೊಲೀಸರು, ಸಾರ್ವಜನಿಕರ ನಡುವೆ ಉತ್ತಮ ಸಂಬಂಧವಿದ್ದು ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಪೊಲೀಸರಿಲ್ಲದ ಸಮಾಜವನ್ನು ನಡೆಸುವುದು ಕಷ್ಟಸಾಧ್ಯದ ಸಂಗತಿ, ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಸಮಾಜವನ್ನು ಶಾಂತಿ, ಸಂಯಮಯುತವಾಗಿ ಕೊಂಡೊಯ್ಯಬೇಕೆಂದು ಅವರು ಕರೆ ನೀಡಿದರು.
ಕ್ರೀಡಾಕೂಟಕ್ಕೆ ಪೊಲೀಸ್ ಅಧೀಕ್ಷಕರಾದ ಕೆ.ಎಂ.ಶಾಂತರಾಜು ಅವರು ಅಧ್ಯಕ್ಷತೆ ವಹಿಸಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು. ೧೦೦ ಮೀಟರ್ ಓಟದ ಸ್ಪರ್ಧೆಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೋಲಾರದ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಚಾಲನೆ ನೀಡಿದರು. ಡಿವೈಎಸ್ಪಿ ಎಸ್.ಪಾಂಡುರಂಗ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಇಲಾಖಾಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘದ ಕೆಜಿಎಫ್ ಅಧ್ಯಕ್ಷ ತ್ಯಾಗರಾಜು, ಬಂಗಾರಪೇಟೆ ಅಧ್ಯಕ್ಷ ಎಂ.ಸಿ.ಮಂಜುನಾಥ್ ಹಾಗೂ ಎರಡೂ ತಾಲ್ಲೂಕಿನ ಪತ್ರಕರ್ತರು ಮತ್ತು ಗಣ್ಯರು ಭಾಗವಹಿಸಿದ್ದರು.
ಕ್ರೀಡಾಕೂಟದ ಜ್ಯೋತಿಯನ್ನು ಸಿಪಿಸಿ ಶ್ರೀನಾಥ ಅವರು ಹೊತ್ತು ಆಕರ್ಷಕ ರೀತಿಯಲ್ಲಿ ಸಂಚರಿಸಿದರು. ಕ್ರೀಡಾಕೂಟದಲ್ಲಿ ಆರ್.ಪಿ.ಐ. ವಿ.ಸೋಮಶೇಖರ ಅವರ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ, ಜನಾಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಕ್ರೀಡಾ ತಂಡಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರವಾಯಿತು. ಎಸ್ಪಿ ಕೆ.ಎಂ.ಶಾಂತರಾಜು ಅವರು ಮೊದಲಿಗೆ ಸ್ವಾಗತಿಸಿ, ಎಪಿಸಿ ಸದಾಶಿವ ಮನಗುಳಿ, ಶರಣಪ್ಪ ಕವಟಗಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.