PLACE YOUR AD HERE AT LOWEST PRICE
ಬಂಗಾರಪೇಟೆ:ಸಂಸತ್ ಭವನದ ಒಳನುಗ್ಗಿದ ದುಷ್ಕರ್ಮಿಗಳ ಕೃತ್ಯಕ್ಕೆ ಈಡೀ ದೇಶವೇ ಬೆಚ್ಚಿಬಿದ್ದಿದೆ, ಅದು ಕೂಡ ೨೦೦೧ ರಂದು ಸಂಸತ್ ಭವನದ ಮೇಲೆ ನಡೆದ ದಾಳಿಯ ದಿನವೇ ಈ ಘಟನೆ ನಡೆದಿದ್ದು ಭದ್ರತೆ ವಿಚಾರದ ಮೇಲೆ ಪ್ರಶ್ನೆ ಎತ್ತುವಂತೆ ಮಾಡಿದೆ. ಇದಕ್ಕೆ ಕಾರಣೀಭೂತರಾದ ಸಂಸದ ಪ್ರತಾಪ್ಸಿಂಹ ಅವರನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಕಾಂಗ್ರೇಸ್ ಪಕ್ಷದ ಕೋಲಾರ ಜಿಲ್ಲಾ ಎಸ್ಸಿ ವಿಭಾಗದ ಮಾದ್ಯಮ ವಕ್ತಾರ ಅ.ನಾ.ಹರೀಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶ ರಕ್ಷಣೆಯ ಹೆಸರಿನಲ್ಲಿ ಬೊಬ್ಬೆ ಹೊಡೆಯುವ ಕೇಂದ್ರ ಬಿಜೆಪಿ ಸರ್ಕಾರ ತನ್ನ ಸಂಸತ್ ಸದಸ್ಯರಿಂದಲೇ ಇಂತಹ ಘಟನೆಗೆ ಕಾರಣವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಸಂಸದ ಪ್ರತಾಪ್ಸಿಂಹ ಅವರಿಗೆ ಭಯೋತ್ಪಾದಕರೊಂದಿಗೆ ನೆಂಟು ಇರಬಹುದೆಂಬ ಶಂಕೆಯನ್ನು ವ್ಯಕ್ತವಾಗುತ್ತಿದೆ. ಪ್ರಾತಾಪ್ ಸಿಂಹ ಅವರನ್ನು ಕೂಡಲೇ ಕೇಂದ್ರದ ವಿವಿಧ ಹಂತಗಳಲ್ಲಿರುವ ತನಿಖಾ ಸಂಸ್ಥೆಗಳಿಂದ ತೀರ್ವ ತನಿಖೆಗೆ ಒಳಪಡಿಸಿ ಇಂತಹ ದೇಶ ದ್ರೋಹಿ ಸಂಸದರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇಪ್ಪತ್ತೆರಡು ವರ್ಷಗಳ ಹಿಂದೆ (೧೩-೧೨-೨೦೦೧) ಸಂಸತ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯವೂ ಮೂಡುತ್ತಿದೆ.
೨೦೦೧ರ ದಾಳಿಯ ಸಮಯದಲ್ಲಿಯೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೇ ಇತ್ತು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದ್ದು, ಸಂಸದ ಪ್ರತಾಪ್ಸಿಂಹ ತನ್ನ ಪುಂಡಾಟಿಕೆ ಮೆರೆದಿದ್ದಾರೆಂದು ಅನುಮಾನ ಹುಟ್ಟುತ್ತಿದೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿದವರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರ ಕಛೇರಿಯಿಂದ ಪಾಸ್ ನೀಡಿರುವುದು ಸಾಭೀತಾಗಿದ್ದು, ಪಾಸ್ ಪಡೆದಿರುವ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.