PLACE YOUR AD HERE AT LOWEST PRICE
-ಕೆ.ರಾಮಮೂರ್ತಿ.
ಬಂಗಾರಪೇಟೆ:ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಧ್ಯಾರ್ಥಿನಿಯರಿಗೆ ಬಂಗಾರಪೇಟೆ ಪೊಲೀಸ್ ಇಲಾಖೆಯಿಂದ ನೆನ್ನೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮ ಆರಂಭದಿಂದ ಕಾರ್ಯಕ್ರಮ ಮುಗಿಯುವ ತನಕ ವಿದ್ಯಾರ್ಥಿನಿಯರು ಬ್ಯಾನರ್ ಹಿಡಿದೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಾರೆ.
ಮದ್ಯಾನ್ಹ 3-30ಕ್ಕೆ ಆರಂಭಗೊಂಡು 4-30ರ ಸುಮಾರಿಗೆ ಮುಗಿದ ಕಾರ್ಯಕ್ರಮದಲ್ಲಿ ಸುಮಾರು 1 ಘಂಟೆಗೂ ಹೆಚ್ಚಿನ ಸಮಯ ಕಾರ್ಯಕ್ರಮ ಮುಗಿಯುವ ತನಕ ಇಬ್ಬರು ವಿಧ್ಯಾರ್ಥಿನಿಯರು ಬ್ಯಾನರ್ ಹಿಡಿದು ನಿಂತು ನೋವು ಅನುಭವಿಸಿರುವ (ಕೇವಲ 20ರೂ ಬೆಲೆಯ 2 ಟೈನ್ ದಾರಗಳಲ್ಲಿ ಗೋಡೆಗೆ ಕಟ್ಟಬಹುದಾಗಿದ್ದ ಬ್ಯಾನರ್) ಘಟನೆ ನಡೆದಿದೆ.
ಪೊಲೀಸ್ ಇಲಾಖೆಯಿಂದ ಪ್ರತಿ ಡಿಸೆಂಬರ್ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ, ಚಾಲಕರಿಗೆ, ಸಾರ್ಜನಿಕರಿಗೆ ಹಾಗೂ ಮಹಿಳೆಯರಿಗೆ ಅಪರಾಧ ತಡೆ ಮಾಸಾಚರಣೆಯ ಮೂಲಕ ಕಾನೂನಿನ ತಿಳುವಳಿಕೆ ಮೂಡಿಸಲಾಗುತ್ತದೆ. ಈ ಕಾರ್ಯಕ್ರಮಗಳ ಬಗ್ಗೆ ಮುಂಚಿತವಾಗಿ ತಯಾರಿಗಳನ್ನು ಮಾಡಿಕೊಳ್ಳಲು ಎಲ್ಲ ರೀತಿಯ ಅವಕಾಶಗಳಿರುತ್ತವೆ.
ಆದರೂ ಕೆಲ ವೇಳೆ ಇಂಥಹ ಕೆಟ್ಟ ಘಟನೆಗಳು ಸಂಭವಿಸುತ್ತಿರುತ್ತವೆ. ಡಿಸೆಂಬರ್ ತಿಂಗಳು ಅಪರಾಧ ತಡೆ ಮಾಸಾಚರಣೆ ಮಾತ್ರವಲ್ಲದೆ ಮಕ್ಕಳ ಹಕ್ಕುಗಳ ಮಾಸವೂ ಆಗಿದೆ. ಮಕ್ಕಳ ಹಕ್ಕುಗಳ ಮಾಸಾಚರಣೆ ನಡೆಸಬೇಕಿದ್ದ ಗ್ರಾಮ ಪಂಚಾಯಿತಿಗಳು ಮೌನವಹಿಸುವ ಮೂಲಕ ಮಕ್ಕಳ ಹಕ್ಕುಗಳ ಮೊಟಕಿಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ.
ತಾಲ್ಲೂಕಿನ ಯಾವುದಾರೂ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆಯ ಅಂಗವಾಗಿ ಮಕ್ಕಳಿಗೆ ಇರುವ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಿದ್ದರೆ, ಅದು ದಿನಪತ್ರಿಕೆಗಳು ಮತ್ತು ಇತರೆ ಮಾಧ್ಯಮದ ಮೂಲಕ ಪ್ರಚಾರವಾಗಿದ್ದರೆ ಆಗ ಮಕ್ಕಳಿಗೂ ಹಕ್ಕುಗಳಿವೆ ಎಂಬ ಅರಿವು ಬರುತ್ತಿತ್ತು.
ಕಾರ್ಯಕ್ರಮದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಕ್ಷ್ಮೀ ನಾರಾಯಣ ಮಾತನಾಡಿದ್ದಾರೆ, ಮತ್ತೋರ್ವ ಸಬ್ ಇನ್ಸ್ಪೆಕ್ಟರ್ ಎಂ.ಪಿ. ಸಿಂಗ್ ಮತ್ತು ಸಿಬ್ಬಂದಿ ಹಾಗೂ ಪ್ರೌಢಶಾಲಾ ವಿಭಾಗದ ಪ್ರಬಾರ ಉಪ ಪ್ರಾಂಶುಪಾಲರಾದ ನಾಗೇಶ್ ಮೊದಲಾದವರಿದ್ದಾರೆ. ಬಾಲಕಿಯರ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಜರಿರಲಿಲ್ಲ.
ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನೋಡುವ ಮನಸ್ಥಿತಿಯಿಂದ ದೂರಬರಬೇಕೆಂದು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರೂ ಈ ರೀತಿಯ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿರುತ್ತವೆ. ಶಾಲಾ ಮಕ್ಕಳ ಕೈಯಲ್ಲಿ ಬ್ಯಾನರ್ ಹಿಡಿಸುವ ಕೆಲಸ ಬರೀ ಬಂಗಾರಪೇಟೆಯಲ್ಲಿ ಮಾತ್ರವಲ್ಲದೆ ಹಲವಾರು ಕಡೆ ನಡೆಯುತ್ತಿದೆ.
ಮಕ್ಕಳೂ ಪ್ರಜೆಗಳು, ಅವರಿಗೂ ಎಲ್ಲರಂತೆ ಬದುಕುವ ಹಕ್ಕಿರುವ ಬಗ್ಗೆ ಅನೇಕರಿಗೆ ಅರಿವಿಲ್ಲದಾಗಿದೆ. ಅರಿವಿಲ್ಲದ ಮತ್ತು ನಿರ್ಲಕ್ಷದ ಕಾರಣ ಮಕ್ಕಳ ಕೈಯಲ್ಲಿ ಅನಗತ್ಯ ಕೆಲಸಗಳನ್ನು ಮಾಡಿಸುವುದು ಸಹಜವಾಗಿಹೋಗಿದೆ. ಈ ಬಗ್ಗೆ ಮೇಲಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಿ ಮಕ್ಕಳ ಹಕ್ಕುಗಳನ್ನು ಕಾಪಾಡುತ್ತಾರೆಯೇ ಕಾದುನೋಡಬೇಕಿದೆ.
…………………..
ಪೊಲೀಸ್ ಇಲಾಖೆಯವರು ವಿಧ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ. ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳನ್ನು ಬ್ಯಾನರ್ ಹಿಡಿಯಲು ಒಂದು ಘಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದು ಬೇಸರದ ಸಂಗತಿ. ವಿಧ್ಯಾರ್ಥಿಗಳ ಕೈಯಲ್ಲಿ ಶಾಲಾ ಆವರಣದಲ್ಲಿ ಏನೂ ಕೆಲಸ(ಶೌಚಾಳಯಕ್ಕೆ ನೀರು ಹಾಕುವುದು, ಕಸ ಗುಡಿಸುವುದು, ಆವರಣ ಸ್ವಚ್ಛಗೊಳಿಸುವುದು, ಗಿಡಗಳಿಗೆ ನೀರು ಹಾಕುವುದು ಇತ್ಯಾದಿ) ಮಾಡಿಸಬಾರದು ಎಂದು ಸರ್ಕಾರ ಪದೇ ಪದೇ ಆದೇಶಳನ್ನು ಮಾಡುತ್ತಾ ಬಂದಿದೆ. ಇಂಥಹ ತಪ್ಪುಗಳು ನಡೆದಾಗ ಕ್ರಮ ಜರುಗಿಸಬೇಕಾದ ಪೊಲೀಸರೇ ಹೀಗೆ ಮಾಡಿರುವುದು ತಪ್ಪು. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು.
ಹುಣಸನಹಳ್ಳಿ ವೆಂಕಟೇಶ್. ಅಧ್ಯಕ್ಷರು, ಕರ್ನಾಟಕ ದಲಿತ ರೈತ ಸಂಘ, ಬಂಗಾರಪೇಟೆ.
……………………………..
ಪೊಲೀಸ್ ಇಲಾಖೆಯವರ ಮನವಿ ಮೇರೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿಧ್ಯಾರ್ಥಿಗಳಿಗೆ ಪೊಕ್ಸೋ ಖಾಯಿದೆ ಬಗ್ಗೆ ಮತ್ತು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಪೊಲೀಸ್ ಅಧಿಕಾರಿಗಳು ತಿಳುವಳಿಕೆ ಮೂಡಿಸಿದರು.
ನಾಗೇಶ್. ಬಾಲಕಿಯರ ಪ್ರೌಢಶಾಲೆಯ ಪ್ರಬಾರ ಉಪ ಪ್ರಾಂಶುಪಾಲರು, ಬಂಗಾರಪೇಟೆ.