PLACE YOUR AD HERE AT LOWEST PRICE
ಕೋಲಾರ,ಫೆ.೦೯ : ಮುಳಬಾಗಿಲು ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನ ಕೇಳಲು ಮುಖ್ಯಮಂತ್ರಿಗಳನ್ನು ಬೇಟಿ ಮಾಡಿದ್ದು ನಿಜಾ, ಹಾಗಾಂತ ಪಕ್ಷ ಸೇರಿದಂತೆಯೇ? ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಗಳೇ, ಇತರೆ ಪಕ್ಷಗಳು ಅವರನ್ನು ಬೇಟಿ ಮಾಡಬಾರದೇ? ಶಾಸಕ ಮಿತ್ರರಾದ ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಬಾಯಿ ಇದೆ ಅಂತ ಏನೇನೋ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಹೇಳಿಕೆ ನೀಡಿದ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಮ್ಮಸುದ್ದಿ.ಕಾಂ ಗೆ ಪ್ರತಿಕ್ರಿಯೆ ನೀಡಿದ ಸಮೃದ್ದಿ ಮಂಜುನಾಥ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ಗೆ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ, ಅದಕ್ಕೇ ಅವರು ಪಕ್ಷಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ನನಗೆ ಅಂತಹ ಪರಿಸ್ಥಿತಿ ಏನೂ ಬಂದಿಲ್ಲ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೇಳಿದ್ದು ಮಾತ್ರ ನಿಜಾ, ಅದಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿಯವರು ಕ್ಷೇತ್ರಕ್ಕೆ ೨೫ ಕೋಟಿ ಅನುದಾನವನ್ನೂ ನೀಡಿದರು. ನನ್ನೊಂದಿಗೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿಯವರು, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಸಹ ಇದ್ದರು, ಇದೇ ವೇಳೆ ಮಾಲೂರು ಶಾಸಕ ನಂಜೇಗೌಡ, ಕೊತ್ತೂರು ಮಂಜುನಾಥ್ ಸೇರಿದಂತೆ ಬಹಳ ಜನ ಕರೆದಿದ್ದು ಮಾತ್ರ ನಿಜಾ. ನಮಗೆ ಮಾತ್ರ ಅಂತ ಪರಿಸ್ಥಿತಿ ಬಂದಿಲ್ಲಾ. ನಾವು ಪಕ್ಷ ಸೇರಲೆಂದೇ ಮುಖ್ಯಮಂತ್ರಿಗಳನ್ನು ಬೇಟಿಯಾಗಿದ್ದೆವು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಲಿ ನೋಡೋಣ ಎಂದು ಸವಾಲೆಸದರು.
ಇದೇ ರೀತಿಯಾಗಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಹ ಪ್ರತಿಕ್ರಿಯೆ ನೀಡಿ, ನಾನು ಈಗಾಗಲೇ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದೇನೆ. ಶಾಸಕನಾಗೂ ಆಯ್ಕೆಯಾಗಿದ್ದೇನೆ. ಜೆಡಿಎಸ್ ಪಕ್ಷದಲ್ಲಿ ಸಂತೋಷವಾಗೇ ಇದ್ದೀನಿ. ಇದ್ದಲ್ಲೇ ನೆಮ್ಮದಿಯಾಗಿದ್ದೀನಿ. ಕೊತ್ತೂರು ಮಂಜುನಾಥ್ ಅವರಿಗೆ ನಮ್ಮ ಮೇಲೆ ಇರುವ ಪ್ರೀತಿಯನ್ನು ನೋಡಿ ಸಂತೋಷವಾಯಿತು. ಅವರ ಅಭಿಮಾನಕ್ಕೆ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.