• Sun. Sep 8th, 2024

PLACE YOUR AD HERE AT LOWEST PRICE

ಕರ್ನಾಟಕ ಯುವ ಮುನ್ನಡೆ ತಂಡದಿ0ದ ಪರಿಸರ ನ್ಯಾಯಕ್ಕಾಗಿ ಯುವ ಧ್ವನಿ ಘೋಷಣೆಯಡಿ “ಜೀವನದಿ ಪಾಲಾರ್ ಗಾಗಿ ನಮ್ಮ ಹೆಜ್ಜೆ” ಅರಿವಿನ ಜಾಥಾ ಯಶಸ್ವಿ:

ಕೋಲಾರ : ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ಕೆರೆಗಳು ಇದ್ದವು. ಇಂದು ಅಕಾಲಿಕ ಮಳೆ, ಒತ್ತುವರಿಗಳಿಂದ ಕೆರೆಗಳು ಕಡಿಮೆಯಾಗುತ್ತಿವೆ. ತುಂಬಿ ಕೋಡಿ ಹರಿದು ಸಂಭ್ರಮ ನೀಡುತ್ತಿದ್ದ ನೂರಾರು ಕೆರೆಗಳಿಗೆ ಜೀವ ತುಂಬುತ್ತಿದ್ದ ಜೀವನದಿ ಪಾಲಾರ್ ನಮ್ಮ ಹೆಜ್ಜೆ ಘೋಷ ವಾಕ್ಯದೊಂದಿಗೆ ಅರಿವಿನ ಜಾಥಾವನ್ನು ಸಂವಾದ ಯುವಜನ ಸಂಸ್ಥೆ ಸಹಯೋಜಿತ ಕರ್ನಾಟಕ ಯುವ ಮುನ್ನಡೆ ತಂಡ ಹಮ್ಮಿಕೊಂಡಿದ್ದು, ಶನಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಕೋಲಾರ ಜಿಲ್ಲೆಯ ಕೆರೆಗಳ ಕೊನೆಯ ಕೊಂಡಿಯಾದ ಕೆ.ಜಿ.ಎಫ್ ತಾಲ್ಲೂಕಿನ ರಾಮಸಾಗರ ಕೆರೆಯಿಂದ ಅರಿವಿನ ಜಾಥಾವನ್ನು ಪ್ರಾರಂಭಿಸಲಾಯಿತು. ಜಾಥಾಗೆ ಕುರಿತು ಸಂವಾದ ಯುವಜನ ಸಂಸ್ಥೆಯ ಎಸ್.ಜಿ. ಮಂಜುನಾಥ್ ಮಾತನಾಡಿ, ಪಾಲಾರ್ ನದಿ ಕೋಲಾರದಲ್ಲಿದೆ ಎಂಬ ವಿಷಯವೇ ಹಲವರಿಗೆ ತಿಳಿದಿಲ್ಲ ಎಂಬುದು ದುರಂತ. ಆದ್ದರಿಂದಲೆ ಬೆಂಗಳೂರಿನ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು, ಘನ ತ್ಯಾಜ್ಯ ನೀರಿಗೆ ಸೇರಿ ಅನಾಹುತಗಳನ್ನು ಸೃಷ್ಠಿ ಮಾಡುತ್ತಿವೆ. ಕೆಸಿ ವ್ಯಾಲಿ ನೀರು ಜಿಲ್ಲೆಯ ಜಲ ಮೂಲಗಳನ್ನೇ ಹಾಳುಗೆಡವಿದೆ. ಈ ಬಗ್ಗೆ ಅರಿಯುವ ಮತ್ತು ಅರಿವು ಮೂಡಿಸುವ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ರಾಮಸಾಗರದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಟರಾಜ್, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಮುಖ್ಯ ಶಿಕ್ಷಕಿ ನುಸ್ರತ್ ಜಹಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್, ರಾಮಸಾಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಪ್ಪ ವಿ. ಮಾಜಿ ಅಧ್ಯಕ್ಷ ಹೇಮರೆಡ್ಡಿ , ಈನೆಲ ಈಜಲ ಸಾಂಸ್ಕೃತಿಕ ಸಂಸ್ಥೆಯ ವೆಂಕಟಾ ಚಲಪತಿ ಅವರು ಕರಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಬೇತಮಂಗಲಕ್ಕೆ ತೆರಳಿ ಜನ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಜಲಾಶಯವನ್ನು ವೀಕ್ಷಿಸಲಾಯಿತು. ಹೊಳೆಯಲ್ಲಿ ಕೆರೆಯ ಸ್ಥಿತಿ , ಕಾರಣಗಳನ್ನು ಅರಿಯುತ್ತಾ, ಹುತ್ತೂರಿಗೆ ಸಾಗಿತು. ಹುತ್ತೂರಿನ ಜಾಗೃತಿ ಸಭೆಯಲ್ಲಿ ಡಾ. ಅರಿವು ಶಿವಪ್ಪ ಅವರು ಮಾತನಾಡುತ್ತಾ, ದಶಕಗಳ ಹಿಂದೆ ತುಂಬಿ ಹರಿಯುತ್ತಿದ್ದ ಕೋಲಾರದ ಕೆರೆಗಳ ಸಮೀಪ ಸ್ನಾನಘಟ್ಟಗಳು ಇದ್ದವು. ಹಲವರ ಬದುಕಿಗೆ ಜೀವಾಳವಾಗಿದ್ದವು. ಹಿಂದೆ ವಿಶಾಲವಾಗಿ ಹರಿದು ನದಿಯಂತೆ ಕಾಣುತ್ತಿದ್ದ ಪಾಲಾರ್  ಇಂದು ಕಾಲುವೆಯಂತಾಗಿದೆ.

ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ನಶಿಸಿಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ನದಿ ಉಳಿದರೆ ನಮ್ಮ ಉಳಿವು. ಹಾಗಾಗಿ ನಾವೆಲ್ಲರೂ ಇದಕ್ಕೆ ಜವಾಬ್ದಾರರು ಎಂದು ತಿಳಿಸಿದರು. ನಂತರ ರಸ್ತೆ ತಂಬಳ್ಳಿಯಲ್ಲಿ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲಾಯಿತು. ಮಣಿಘಟ್ಟದಲ್ಲಿ ಹಾಡು, ನಾಟಕದ ಮೂಲಕ ಅರಿವು ಮೂಡಿಸಿ ಎಸ್ ಅಗ್ರಹಾರಕ್ಕೆ ತೆರಳಿತು.

ಸುಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭೂಪತಿಗೌಡ ಅವರು ಮಾತನಾಡಿ, ಪಾಲಾರ್ ಹಿಂದೆ ತುಂಬಿ ಹರಿಯುತ್ತಿತ್ತು. ಆದರೆ ಈಗ ಪಾಲಾರ್ ಅಂದರೆ ಕೊಳಚೆ ನೀರಿನ ಕಾಲುವೆ ಎಂಬ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಬದಲಾಯಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೂ ಅರಿವು ನೀಡುತ್ತಿದ್ದೇವೆ ಎಂದು ಹೇಳಿದ ಅವರು, ಸಂವಾದ ಸಹಯೋಗದ ಕರ್ನಾಟಕ ಯುವ ಮುನ್ನಡೆಯಂತಹ ತಂಡಗಳು ಹೆಚ್ಚಾಗಬೇಕು. ಜಾಗೃತಿ ಮೂಡಿಸಬೇಕು. ಇದಕ್ಕೆ ಪಂಚಾಯಿತಿಯ ಎಲ್ಲಾ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಎರಡನೇ ದಿನ ಜನ್ನಘಟ್ಟ, ಸುಗಟೂರು, ಮುದವಾಡಿ ಗ್ರಾಮ ಗಳಲ್ಲಿ ಜಾಗೃತಿ ಗೀತೆ, ಮಾಹಿತಿ ಹಂಚಲಾಯಿತು. ನಂತರ ಅಭಿಯಾನದ ಮಾಹಿತಿಯಂತೆ ಪಾಲಾರ್ ಲಿಂಕ್ ಕೆರೆಗಳ ರಕ್ಷಣಾ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು “ಯುವಜನರು ಪರಿಸರ ಕಾಳಜಿ ವಹಿಸಿ ಮಹತ್ತರ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ. ನಿಮ್ಮ ಶ್ರಮಕ್ಕೆ ನಮ್ಮ ಬೆಂಬಲವೂ ಇದೆ” ಎಂದು ಅಭಿನಂದಿಸಿದರು. ಜಿಲ್ಲೆಯಲ್ಲಿದ್ದ ಸುಮಾರು ೨೫೦೦ ಕೆರೆಗಳಲ್ಲಿ ಕೆಲವು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಅವುಗಳನ್ನು ಪುನಶ್ಚೇತನಗೊಳಿಸಲು ಕೆರೆಗಳ ಸರ್ವೇ ಕಾರ್ಯ ಆರಂಭಿಸಿದ್ದೇವೆ. ಒತ್ತುವರಿಯಾದ ಕೆರೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಕೆಸಿ ವ್ಯಾಲಿ ನೀರನ್ನು ಕುಡಿಯಲು ಬಳಸದೆ ಅಂತರ್ಜಲ ವೃದ್ಧಿಗೆ ಮಾತ್ರ ಬಳಸಲಾಗುತ್ತಿದೆ. ನದಿ, ಕೆರೆಗಳು, ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸುತ್ತಿದ್ದು, ಶೀಘ್ರ ಶುದ್ಧ ನೀರು ಒದಗಿಸುವ ಕೆಲಸ ನಡೆಯುತ್ತಿದೆ. ಅರಣ್ಯೀಕರಣಕ್ಕೆ ಪ್ರಯತ್ನಿಸುತಿದ್ದೇವೆ. ಇನ್ನುಳಿದ ಪರಿಸರ ಸಂರಕ್ಷಣಾ ಕ್ರಮಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದರು.

ಕರ್ನಾಟಕ ಯುವ ಮುನ್ನಡೆ ತಂಡದ ಮನವಿಗೆ ಸಂವಾದ ಸಂಸ್ಥೆಯ ಮಂಜುನಾಥ್ ಜಿ.ಕೆ, ಸಬೀನಾ ಎ., ಅಮೀರ್ ನದಾಫ್, ನಾಗಮಣಿ, ಗಮನ ಮಹಿಳಾ ಸಮೂಹದ ಶಾಂತಮ್ಮ, ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ವೆಂಕಟಾ ಚಲಪತಿ, ವಕೀಲರಾದ ವಾಸುದೇವ ರೆಡ್ಡಿ ಅವರು ಬೆಂಬಲಿಸಿದರು.

ಜಾಥಾದಲ್ಲಿ ಸಮಾನ ಮನಸ್ಕ ಪರಿಸರವಾದಿಗಳು, ಸ್ಥಳೀಯ ಆಡಳಿತ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!