PLACE YOUR AD HERE AT LOWEST PRICE
ಕನ್ನಡ ಚಿತ್ರರಂಗದ ಮೇಲೆ ಬಹಳ ಹಿಂದಿನಿಂದಲೂ ಇಂತಹದ್ದೊಂದು ಆರೋಪವಿದೆ. ಹೀರೊ- ಹೀರೋಯಿನ್ ಬಿಟ್ಟರೆ ಚಿತ್ರರಂಗ ಕಲಾವಿದರನ್ನು, ಬರಹಗಾರರನ್ನು, ತಂತ್ರಜ್ಞರನ್ನು ತಿರಸ್ಕಾರ ಮಾಡುತ್ತಲೇ ಇದೆ. ನಿರ್ಮಾಪಕರಿಗೆ ನಾಯಕ, ನಾಯಕಿಯರಷ್ಟೇ ಮುಖ್ಯ. ಆದರೆ, ಒಂದು ಸಿನಿಮಾ ನಿರ್ಮಾಣ ಆಗುವುದಕ್ಕೆ ಎಲ್ಲಾ ವಿಭಾಗದವರು ಮುಖ್ಯ ಅನ್ನೋದು ಇಂದಿಗೂ ಗೊತ್ತೇ ಇಲ್ಲ.
ಜನಪ್ರಿಯ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಕನ್ನಡದ ಎವರ್ಗ್ರೀನ್ ಸಿನಿಮಾಗಳಿಗೆ ಕಥೆ ಬರೆದಿದ್ದ ಎಂ ಡಿ ಸುಂದರ್ ಕೊನೆಯ ದಿನಗಳ ಬಗ್ಗೆ ಮಾತಾಡಿದ್ದಾರೆ. ದೊಡ್ಡ ಸಿನಿಮಾಗಳಿಗೆ ಕಥೆ ಎಂ ಡಿ ಸುಂದರ್ ಕೊನೆಯ ದಿನಗಳಲ್ಲಿ ಹಸಿವಿನಿಂದ ಪ್ರಾಣ ಬಿಟ್ಟ ದುರಂತ ಕತೆಯನ್ನು ಹೇಳಿದ್ದಾರೆ.
ಕನ್ನಡ ಚಿತ್ರರಂಗ ಇಂತಹ ಬರಹಗಾರರನ್ನು ಬೆಳೆಸಿದ್ದರೆ, ಇಂದು ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂದು ದೂರಿದ್ದಾರೆ. ಹಿಂದಿನಿಂದಲೂ ನಡೆದುಕೊಂಡು ಬಂದ ಕನ್ನಡದ ಚಿತ್ರರಂಗದ ಈ ಧೋರಣೆಯೇ ಚಿತ್ರರಂಗದ ಈ ಸ್ಥಿತಿಗೆ ಕಾರಣವೆಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಎಂ ಡಿ ಸುಂದರ್ ಕಥೆ ಬರೆದ ಸಿನಿಮಾಗಳು ಯಾವುವು? ಅವರ ಕೊನೆಯ ದಿನಗಳು ಹೇಗಿತ್ತು ಅನ್ನೋದನ್ನು ಧರ್ಮೇಂದ್ರ ಕುಮಾರ್ ಅವರದ್ದೇ ಶೈಲಿಯಲ್ಲಿ ವಿವರಿಸಿದ್ದಾರೆ ಓದಿ.
ಎಂ ಡಿ ಸುಂದರ್ ಯಾರು? “ಎಂ ಡಿ ಸುಂದರ್ ಅನ್ನುವ ಒಬ್ಬ ಕಥೆಗಾರನ ಹೆಸರನ್ನು ಕೇಳಿದ್ದೀರ. ಕನ್ನಡ ಸಿನಿಮಾ ನೋಡಿರೋ ಕೆಲವರಾದರೂ, ನನ್ನ ವಯಸ್ಸಿನವರು ಕೇಳಿರುತ್ತೀರ. ಎಂತಹ ಪಿಕ್ಚರ್ಗಳಿಗೆ ಕತೆ ಬರೆದಿದ್ದಾರೆ ಗೊತ್ತಾ? ಸೂರ್ಯ ಚಂದ್ರ ಇರೋವರೆಗೂ ಇರುವ ಏಕೈಕ ಸಿನಿಮಾ ‘ಗಂಧದ ಗುಡಿ’ ಬರೆದಿದ್ದು ಅವರೇ. ಆಲ್ ಟೈಮ್ ಹಿಟ್ ‘ಶಂಕರ್ ಗುರು’ ಬರೆದಿದ್ದು ಅವರೇ. ‘ತಾಯಿಗೆ ತಕ್ಕ ಮಗ’ ಬರೆದಿದ್ದು ಅವರೇ. ‘ಚಕ್ರವ್ಯೂಹ’ ಬರೆದಿದ್ದು ಅವರೇ. ‘ಒಲವು ಗೆಲುವು’, ‘ತ್ರಿಮೂರ್ತಿ’, ‘ಸಿಂಗಾಪುರದಲ್ಲಿ ರಾಜ ಕುಳ್ಳ’ ಅವರದ್ದೇ. ‘ಆಟೋ ರಾಜ’, ‘ಕಿಲಾಡಿ ಕಿಟ್ಟು’, ‘ನಾರದ ವಿಜಯ’, ‘ಸಹೋದರರ ಸವಾಲ್’, ‘ಅವಳ ಹೆಜ್ಜೆ’, ‘ಕಳ್ಳ ಕುಳ್ಳ’, ‘ನೀ ನನ್ನ ಗೆಲ್ಲಲಾರೆ’, ‘ಪ್ರೀತಿ ಮಾಡು ತಮಾಷೆ ನೋಡು’, ‘ಕಾರ್ಮಿಕ ಕಳ್ಳನಲ್ಲ’, ‘ಮೂಗನ ಸೇಡು’, ಎಷ್ಟು ಸಿನಿಮಾ ಬೇಕು. ಕನ್ನಡದ ಖ್ಯಾತಿಯನ್ನು ಜಗದಗಲ, ಮುಗಿಲಗಲ, ದೇಶದಗಲ ಹಬ್ಬಿಸಿದಂತಹ ಖ್ಯಾತಿ ಕೊಟ್ಟ ಕನ್ನಡದ ಎಂ ಡಿ ಸುಂದರ್ ನಮಗ್ಯಾರಿಗೂ ಗೊತ್ತಿಲ್ಲ. ಬೆಂಗಳೂರಿನಲ್ಲಿ ಹಸಿವಿನಿಂದ ಪ್ರಾಣ ಬಿಟ್ಟ ಪುಣ್ಯಾತ್ಮ. ಥೂ ನಮ್ಮ ಜನ್ಮಕ್ಕೆ. ” ಎಂದು ಧರ್ಮೇಂದ್ರ ಕುಮಾರ್ ಬೇಸರ ಹೊರ ಹಾಕಿದ್ದಾರೆ.
ಕನ್ನಡ ಚಿತ್ರರಂಗ ಹೇಗೆ ಉದ್ಧಾರ ಆಗುತ್ತೆ? “ಇಂತಹ ಕಥೆಗಳನ್ನು ಕೊಟ್ಟ ಒಬ್ಬ ರೈಟರ್ ಅನ್ನು ನೋಡಿಕೊಂಡ ಗತಿಯಿದು. ಕನ್ನಡ ಚಿತ್ರರಂಗ ಉದ್ಧಾರ ಆಗು ಅಂದರೆ ಎಲ್ಲಿ ಆಗುತ್ತೆ. ಎಂ ಡಿ ಸುಂದರ್ ತೀರಾ ಬಡತನದಲ್ಲಿ ಕೊನೆಯ ದಿನಗಳನ್ನು ಕಳೆದು ತೀರಿಕೊಂಡರು ಅಂತ ಗೊತ್ತಾದಾಗ ಎಷ್ಟು ಸಂಕಟ ಆಗುತ್ತೆ. ಒಂದೊಂದು ಸಿನಿಮಾವೂ ಮುತ್ತುಗಳು ಅಲ್ವೇನ್ರಿ. ಇಂತಹ ಕಥೆಗಾರರನ್ನು ಇಷ್ಟು ಕೆಟ್ಟದಾಗಿ ನೋಡಿಕೊಂಡ ಮೇಲೆ ಯಾವ ಕಡೆಯಿಂದ ಉದ್ಧಾರ ಆಗುತ್ತೆ.” ಎಂದು ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.
ನೆನಪಿನ ಕಾಣಿಕೆಯಲ್ಲಿ ಒಂದು ಸಾಲು ಇಲ್ಲ “ಕನ್ನಡ ಚಿತ್ರರಂಗ 60 ವರ್ಷ ಆಚರಣೆ ಮಾಡಿ ಒಂದೇ ಒಂದು ಪುಸ್ತಕ ತಂತಲ್ಲ. ಈ ಪುಣ್ಯಾತ್ಮನ ಬಗ್ಗೆ ಒಂದೇ ಒಂದು ಸಾಲು ಇಲ್ಲ ರೀ. ಇನ್ನೇನ್ರಿ ನೀವು ನೆನಪಿನ ಕಾಣಿಕೆ ತಂದಿರೋದು. ಇನ್ನೇನು ಹಿರಿಯರನ್ನು ನೆನಪಿಸಿಕೊಳ್ತೀರ. ಇಂತಹವರು ಎಷ್ಟು ಜನರು ಕನ್ನಡ ನಾಡಿನಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೋ ಅದೇ ಶಾಪ ಈ ಕನ್ನಡ ಚಿತ್ರರಂಗದ ಮೇಲೆ ಬಿದ್ದಿದೆ. ಅದಕ್ಕೆ ಡೋಲಾಯಮಾನ ಸ್ಥಿತಿಗೆ ಬಂದು ಕನ್ನಡ ಚಿತ್ರರಂಗ ನಿಂತಿದೆ.” ಎಂದಿದ್ದಾರೆ.
ಒಂದೂ ಫೋಟೊ ಕೂಡ ಇಲ್ಲ “ಗಂಧದ ಗುಡಿ ಅಂತ ಸಿನಿಮಾ ಬರೆದವರು ಹಸಿನಿಂದ ಸತ್ತು ಹೋದರು ಅಂದರೆ, ನಮ್ಮ ಹೊಟ್ಟೆಗೆ ಅನ್ನ ಹೇಗ್ರಿ ಸೇರುತ್ತೆ. ಯಾಕೋ ಬಳ ದಿನಗಳಿಂದ ಕಾಡುತ್ತಿದ್ದರು. ನಿಮಗೆ ತೋರಿಸುವುದಕ್ಕೆ ಎಂ ಡಿ ಸುಂದರ್ ಅವರ ಒಂದೇ ಒಂದು ಫೋಟೊ ಇಲ್ಲ ರೀ. ಎಂತಹ ಪ್ರತಿಭಾವಂತ ಹೆಂಗೆ ತೀರಿಕೊಂಡು ಬಿಟ್ಟ. ಬೇಜಾರು ಆಗಲ್ವೇನ್ರಿ. ಕನ್ನಡ ಚಿತ್ರರಂಗ ಹಿಂಗಾಗಿ ಹೋಯ್ತು ಅಂದರೆ, ನಾವು ಬೆಳೆದು ಬಂದ ರೀತಿ ಹಾಗಿದೆ.” ಎಂದು ಆಕ್ರೋಶ ಹೊರ ಹಾಕಿದ್ದಾರೆ.