PLACE YOUR AD HERE AT LOWEST PRICE
ಸೋಮವಾರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ರಾಜಧಾನಿ ಢಾಕಾ ಬಿಟ್ಟು ಅವರು ಪರಾರಿಯಾಗಿದ್ದು, ಭಾರತದ ತ್ರಿಪುರಾದಲ್ಲಿ ಆಶ್ರಯ ಪಡೆದಿದ್ದಾರೆ. ಬಿಎಸ್ಎಫ್ ಸಿಬ್ಬಂದಿ ಕಣ್ಗಾವಲಿನಲ್ಲಿ ರಹಸ್ಯ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.
ಢಾಕಾ ಬಿಟ್ಟು ಹೆಲಿಕಾಪ್ಟರ್ನಲ್ಲಿ ಪರಾರಿಯಾಗಿದ್ದ ಶೇಖ್ ಹಸೀನಾ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಈ ರಾಜಕೀಯ ಬೆಳವಣಿಗೆ ಕುರಿತು ಬಿಎಸ್ಎಫ್ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಟ್ಟೆಚ್ಚರವನ್ನು ವಹಿಸುವಂತೆ ಸೂಚನೆ ನೀಡಲಾಗಿದೆ.
ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾದ ಬಳಿಕ ಪ್ರತಿಭಟನಾ ನಿರತರು ಪ್ರಧಾನಿ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ. ಸೇನಾ ಮುಖ್ಯಸ್ಥ ವಾಕರ್-ಉಜ್ -ಜಮಾನ್ ಜನರು ಪ್ರತಿಭಟನೆ ಕೈ ಬಿಟ್ಟು ಶಾಂತಿ ಕಾಪಾಡಿ ಎಂದು ದೇಶದ ಜನರಿಗೆ ಮಾಧ್ಯಮಗಳ ಮೂಲಕ ಕರೆ ನೀಡಿದ್ದಾರೆ.
76 ವರ್ಷದ ಶೇಖ್ ಹಸೀನಾ ಈ ವರ್ಷದ ಆರಂಭದಲ್ಲಿ 5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸೇನಾ ಹೆಲಿಕಾಪ್ಟರ್ ಮೂಲಕ ಢಾಕಾದಿಂದ ಸಹೋದರಿ ಶೇಖ್ ರೇಹನಾ ಜೊತೆ ಭಾರತಕ್ಕೆ ಆಗಮಿಸಿದರು ಎಂದು ವರದಿಯಾಗಿದೆ.