PLACE YOUR AD HERE AT LOWEST PRICE
ಬಂಗಾರಪೇಟೆ.ಇದೇ ತಿಂಗಳು 8ರಿಂದ ಬಿಜೆಪಿ ಒಗ್ಗಟ್ಟಿ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಎಲ್ಲಾ ಮುಖಂಡರು ಒಂದಾಗಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ತಿಳಿಸಿದರು.
ಬಂಗಾರಪೇಟೆ ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದರೂ ಬಿಜೆಪಿ ಯಾಕೆ ಇನ್ನು ಮೌನವಾಗಿದೆ ಎಂಬ ಗೊಂದಲಗಳು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿತ್ತು.
ನಮ್ಮಲ್ಲಿದ್ದ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳಲಾಗಿದೆ, ಪಕ್ಷದಲ್ಲಿ ಆರು ಮಂದಿ ಟಿಕೆಟ್ ಆಕಾಂಕ್ಷಿಗಳಿರುವ ಹಿನ್ನೆಲೆ ಗೊಂದಲ ಸಹಜ. ಆರು ಮಂದಿ ಆಕಾಂಕ್ಷಿಗಳು ಟಿಕೆಟ್ ಯಾರಿಗೇ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ಶ್ರಮಿಸಲು ಉಸ್ತುವಾರಿ ಸಚಿವ ಮುನಿರತ್ನರ ಸೂಚನೆಯಂತೆ ನಡೆಯಲು ಸಂಕಲ್ಪ ಮಾಡಿದ್ದಾರೆಂದು ತಿಳಿಸಿದರು.
ಅದರಂತೆ ಬುಧವಾರದಿಂದ 5ದಿನಗಳ ಕಾಲ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಸಮಾವೇಶ ಮಾಡಿ ಪಕ್ಷವನ್ನು
ಸಂಘಟನೆ ಮಾಡಲಾಗುವುದು. ಬಳಿಕ ಪ್ರತಿ ಗ್ರಾಮಕ್ಕೂ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ತಿಳಿಸಿ ಚುನಾವಣೆವರೆಗೆ ಮಾತ್ರ ಒಗ್ಗಟ್ಟು ಇರದೆ ಬಳಿಕವೂ ಮುಂದುವರೆಯಲಿದೆ ಎಂದರು.
ಮಾಜಿ ಶಾಸಕ ಟಿಕೆಟ್ ಆಕಾಂಕ್ಷಿ ಎಂ.ನಾರಾಯಣಸ್ವಾಮಿ ಮಾತನಾಡಿ ಬರುವ ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಸಲು ನಾವು ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಶಕ್ತಿ ದೇವತೆ ಕೋಲಾರಮ್ಮ ಮೇಲೆ ಪ್ರಮಾಣ ಮಾಡಲಾಗಿದೆ ಅದರಂತೆ ನಡೆದುಕೊಳ್ಳುವೆವು. ಟಿಕೆಟ್ ಗೊಂದಲವಿಲ್ಲ.
ಹೈಕಮಾಂಡ್ ಯಾರಿಗೆ ಕೊಟ್ಟರೂ ಎಲ್ಲರೂ ಸೇರಿ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ ನಮ್ಮ ಗುರಿ ಏನಿದ್ದರೂ ಚುನಾವಣೆಯಲ್ಲಿ ಗೆಲ್ಲುವುದು ಮಾತ್ರ ಎಂದರಲ್ಲದೆ 8ರಂದು ಹುತ್ತೂರು ಹೋಬಳಿಯಿಂದ ನಮ್ಮ ಒಗ್ಗಟ್ಟಿನ ಯಾತ್ರೆ ನಡೆಯಲಿದ್ದು ಇದು ಮುಂದೆ ಸಹ ಮುಂದುವರೆಯಲಿದೆ ಎಂದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ ಕ್ಷೇತ್ರದ ಬಿಜೆಪಿಯಲ್ಲಿ ಬಣ ರಾಜಕೀಯ ನಡೆಯುತ್ತಿತ್ತು ಇದರಿಂದ ಹತ್ತು ವರ್ಷ ಶಾಸಕ ಸ್ಥಾನವನ್ನು ಕಳೆದುಕೊಳ್ಳುವಂತಾಗಿತ್ತು, ಮತ್ತೆ ವನವಾಸ ಬೇಡವೆಂದು ಮುಖಂಡರು, ಕಾರ್ಯಕರ್ತರು ಒಂದಾಗಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ. ಇದರಿಂದ ಕಾರ್ಯಕರ್ತರಿಗೆ ನವ ಚೈತನ್ಯ ಬಂದಿದೆ ಮುಂದೆ ಚುನಾವಣೆಯಲ್ಲಿ ಶಾಸಕ ಸ್ಥಾನವನ್ನು ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿಯ ತೋರಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಬಿ.ವಿ.ಮಹೇಶ್, ವಿ.ಶೇಷು, ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್, ಜುಂಜನಹಳ್ಳಿ ನಾರಾಯಣಸ್ವಾಮಿ, ರಾಜಾರೆಡ್ಡಿ, ಚೌಡಪ್ ಪ, ಹೊಸರಾಯಪ್ಪ, ಪಾರ್ಥಸಾರಥಿ, ಮತ್ತಿತರರು ಇದ್ದರು.