PLACE YOUR AD HERE AT LOWEST PRICE
ಬಂಗಾರಪೇಟೆ:ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡುವಲ್ಲಿ ರಾಜಕೀಯ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಸಿಪಿಐ(ಎಂ)ಪಕ್ಷದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ವೇಳೆ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 10ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ.
ಮೊದಲು ಅಕ್ಕಿ ಕೊಡಲು ಒಪ್ಪಿ ನಂತರ ರಾಜಕೀಯ ದ್ವೇಷಕ್ಕಾಗಿ ಅಕ್ಕಿ ಕೊಡಲು ನಿರಾಕರಣೆ ಮಾಡಿರುವುದು ತಪ್ಪು, ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರ ಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರು.
ಕೇಂದ್ರ ಸರ್ಕಾರ ಸೂಚನೆ ನಂತರ ಕೊಡಲು ನಿರಾಕರಣೆ ಬಡವರ ವಿರೋಧಿ ಧೋರಣೆಯಾಗಿದೆ, ಬಿಜೆಪಿ ಮತ್ತು ಒಕ್ಕೂಟ ಸರ್ಕಾರ ನಮ್ಮ ಸಂಕುಚಿತ ಜನವಿರೋಧಿ ರಾಜಕಾರಣವನ್ನು ಈ ಕೂಡಲೇ ಕೈಬಿಡಬೇಕು.
ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಪಿಐ (ಎಂ) ಪಕ್ಷದ ಮುಖಂಡ ಎಂ.ಶ್ರೀನಿವಾಸ್ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಈ ಯೋಜನೆಯು ಬಡವರ ಹಸಿವು ನೀಗಿಸುವಲ್ಲಿ ನೆರವಾಗುವ ಯೋಜನೆಯಾಗಿದ್ದು ಇದು ಹಸುವಿನ ಸೂಚ್ಯಂಕದಲ್ಲಿ ಅತ್ಯಂತ ತಳಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯಬೇಕು ಎಂದರು.
ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರ ಪರವಾಗಿರದೆ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಆದರಿಂದ ಕರ್ನಾಟಕ ರಾಜ್ಯಕ್ಕೆ ಅಗತ್ಯ ಇರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮಂತರಾಯ, ಜನಾರ್ಧನ್, ಪಿಚ್ಚಕಣ್ಣು, ರಘುಪತಿ, ಅಪ್ಪಯ್ಯಣ್ಣ, ಮೋಹನ್ ಕುಮಾರ್, ಬಿ.ಎಲ್ ಕೇಶವರಾವ್,ಸಿ.ಆರ್ ಮೂರ್ತಿ ಮತ್ತಿತರರು ಇದ್ದರು.