• Sun. May 19th, 2024

PLACE YOUR AD HERE AT LOWEST PRICE

ಬಂದ್ರು.. ಸುಟ್ರು… ಹೋದ್ರು…. ಸಾರ್ವಜನಿಕ್ರಿಗೆ ತೊಂದ್ರೆ ತಂದ್ರು!

ಕೋಲಾರ,ಜು.೨೨: ಅವರು ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿದರು. ಹಾಗೆಯೇ ಪ್ರತಿಕೃತಿ ದಹಿಸಿ ಹೋದರು. ಸುಟ್ಟ ಜಾಗದಲ್ಲಿ ಹೊಗೆ ಎದ್ದಿತ್ತು. ಅದರಲ್ಲಿನ ಪ್ಲಾಸ್ಟಿಕ್-ರಬ್ಬರ್ ಸುಟ್ಟಿತ್ತು. ಹಾಗೆ ಬಿಟ್ಟು ಹೋದ ಜಾಗದಲ್ಲಿ ಅರೆಬೆಂದ ಒಣ ಹುಲ್ಲು, ಕಡ್ಡಿಗಳು, ಬಟ್ಟೆ, ಹಳೆ ಚಪ್ಪಲಿಗಳು ಹಾಗೆಯೇ ಉಳಿದವು.
ಇದರಿಂದ ಜನ ಹಾಗೂ ವಾಹನ (ದ್ವಿಚಕ್ರ) ಸಂಚಾರಕ್ಕೆ ಹಾಗೂ ಪರಿಸರಕ್ಕೂ ತೊಂದರೆ ಉಂಟಾಯಿತು, ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಕಂಡು ಬಂದ ದೃಶ್ಯ ಇದಾಗಿತ್ತು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ನಿರ್ಧಾರ, ಧೋರಣೆ, ಹೇಳಿಕೆಗಳನ್ನು ಖಂಡಿಸಿ ವಿರೋಧ ಪಕ್ಷವಾದ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾವಚಿತ್ರ ಮುದ್ರಿಸಿದ ಪ್ಲೆಕ್ಸ್ನ್ನು ಹುಲ್ಲಿನಿಂದ ತಯಾರಿಸಿದ ಪ್ರತಿಕೃತಿಗೆ ಕಟ್ಟಲಾಗಿತ್ತು. ಇದಕ್ಕೆ ೨೦ಕ್ಕೂ ಹೆಚ್ಚು (ರಬ್ಬರ್ ಮತ್ತು ಪ್ಲಾಸ್ಟಿಕ್) ಬಿಸಾಡಲಾಗಿದ್ದ ಹಳೇ ಚಪ್ಪಲಿಗಳ ಹಾರ ತಯಾರಿಸಿ ಪ್ರತಿಕೃತಿಗೆ ಹಾಕಲಾಗಿತ್ತು.
ಪ್ರತಿಭಟನೆ ನಂತರ ವೃತ್ತದ ನಡುವೆ ಪ್ರತಿಕೃತಿ ದಹಿಸಲಾಯಿತು. ಇದರಿಂದ ಬೆಂಕಿಯ ಜ್ವಾಲೆಯಿಂದ ಹೊಗೆಯೂ ಎದ್ದಿತು. ಬಹು ಹೊತ್ತು ರಸ್ತೆ ತಡೆ ಪ್ರತಿಭಟನೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯೂ ಆಗಿತ್ತು. ಇದನ್ನು ಗಮನಿಸಿದ ಬಂದೋ ಬಸ್ತ್ನಲ್ಲಿದ ಮಪ್ತಿ ಪೊಲೀಸ್ ಪೇದೆಯೋರ್ವರು ಬಿಂದಿಗೆಯಲ್ಲಿ ನೀರುತಂದು ಉರಿಯುತ್ತಿದ್ದ ಪ್ರತಿಕೃತಿಯ ಮೇಲೆ ಸುರಿದಾಗ ಅದು ಆರಿ ಹೋಯಿತು ಆಗ ಪ್ರತಿಭಟನಾಕಾರರು ಗೊಣಗಿಕೊಂಡು ಹಿಂದಿರುಗಿದರು.
ಆದರೆ ನಡು ರಸ್ತೆಯಲ್ಲಿ ಬಿದ್ದಿದ್ದ ಅರೆ ಬೆಂದ ಪ್ರತಿಕೃತಿಯ ತ್ಯಾಜ್ಯವನ್ನು ತೆಗೆಯುವವರು ಯಾರು? ಇದೇನು ಯಕ್ಷಪ್ರಶ್ನೆಯಲ್ಲ. ಯಾವುದೇ ಕಾರ್ಯಕ್ರಮದ ಆಯೋಜಕರು ಸ್ಥಳದಲ್ಲಿನ ಘನತೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳುವುದು ಹಾಗೂ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಇದೊಂದು ಸಾಮಾನ್ಯ ಜ್ಞಾನವೂ ಹೌದು.
ಇದು ಹಾಗೆಯೇ ಅಲ್ಲವಾ. ಪ್ರತಿಭಟನೆಗೆ ಅನುಮತಿ ಪಡೆದವರು ಭೂತದಹನ ಮಾಡಿದ ನಂತರ ಅದನ್ನು ತೆರವು ಮಾಡುವ ಕಾರ್ಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಪೊಲೀಸರದ್ದು ಬಂದೋಬಸ್ತ್ ಹಾಗೂ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಡು ರಸ್ತೆಯಲ್ಲಿ ಬಿಟ್ಟ ತ್ಯಾಜ್ಯದಿಂದ ಎಲ್ಲರಿಗೂ ತೊಂದರೆ. ಅದರಿಂದ ಹೊರಬಿದ್ದ ಹೊಗೆ, ಧೂಳು ಧೂಳಾಗಿ ಹರಡುವ ಮಸಿ, ಉಳಿಕೆ ಪಳೆಯುಳಿಕೆ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅರೆ ಬೆಂದ ಚಪ್ಪಲಿಗಳಿಂದ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ.
ಇಷ್ಟಕ್ಕೂ ಇದು ಇಂದು ನಡೆದ ಬಿಜೆಪಿ ಪ್ರತಿಭಟನೆಯ ಉದಾಹರಣೆ ಒಂದೇ ಅಲ್ಲ. ಈ ಹಿಂದೆ ನಡೆದ ಇತರೆ ಪಕ್ಷಗಳು ಹಾಗೂ ಸಂಘಟನೆಗಳ ಇದೇ ರೀತಿಯ ಘಟನೆಗಳು ಮತ್ತು ಮುಂದೆ ನಡೆಯುವ ಘಟನೆಗಳಿಗೆ ಜನರು ಹಾಗೂ ವಾಹನಗಳ ಸಂಚಾರಕ್ಕೆ ಮತ್ತು ಪರಿಸರಕ್ಕೆ ಹಾನಿಕಾರಕ.
ಸಾರ್ವಜನಿಕವಾಗಿ ಈ ರೀತಿ ತೊಂದರೆಗಳಿಗೆ ಅವಕಾಶವಾಗದಂತೆ ಸಂಬoಧಿಸಿದ ಪ್ರತಿಭಟನಾಕಾರರಿಗೆ ಪೊಲೀಸರು ಎಚ್ಚರಿಕೆ ಕೊಡುವುದು, ಹಾಗೆಯೇ ತ್ಯಾಜ್ಯವನ್ನು ಆಗಲೇ ಸುರಕ್ಷಿತವಾಗಿ ವಿಲೇವಾರಿ ಮಾಡುವ ಜವಾಬ್ದಾರಿ ಆಯಾ ಕಾರ್ಯಕ್ರಮ ಸಂಘಟಕರಿಗೆ ಸೇರಿದ್ದಾಗಿದೆ. ಇನ್ನು ಮುಂದಾದರೂ ಸಾರ್ವಜನಿಕವಾಗಿ ಮತ್ತು ಪರಿಸರಕ್ಕೆ ತೊಂದರೆ ಆಗುವ ಇಂತಹ ಘಟನೆಗಳಿಗೆ ಅವಕಾಶವಾಗದಂತೆ ಸಾರ್ವಜನಿಕ ಹೊಣೆಗಾರಿಕೆ ಎಲ್ಲಾ ಪಕ್ಷಗಳು ಮತ್ತು ಸಂಘಟನೆಗಳ ಮೇಲಿರಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ ಎಂದು ಪರಿಸರ ಚಿಂತಕ ಸಿ.ಜಿ.ಮುರಳಿ ತಿಳಿಸಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!