PLACE YOUR AD HERE AT LOWEST PRICE
ಸೋಮವಾರ ಲಾಲ್ಬಾಗ್ ಫ್ಲವರ್ ಶೋ ಕಾರ್ಯಕ್ರಮಕ್ಕೆ ಬಂದಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಕಾರು ಅಲ್ಲಿನ ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ತಮ್ಮ ಕಾರು ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದರೂ ನೋಡದ ರಚಿತಾ ರಾಮ್ ಮತ್ತು ಅವರ ಕಾರು ಚಾಲಕರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧಿಸಿದಂತೆ ರಚಿತಾ ರಾಮ್ ಸ್ವಾತಂತ್ರ್ಯ ದಿನದಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ತಮ್ಮ ಕಾರು ಯಾವ ಕಾರ್ಮಿಕರಿಗೆ ಡಿಕ್ಕಿ ಹೊಡೆದಿತ್ತೋ ಅವರನ್ನೇ ತಮ್ಮ ಮನೆಗೆ ಕರೆಸಿ ಕೂರಿಸಿಕೊಂಡು ತಮ್ಮ ಮತ್ತು ತಮ್ಮ ಚಾಲಕನ ಪರವಾಗಿ ಕ್ಷಮೆ ಕೇಳಿದ್ದಾರೆ. ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹೇಳಿಸಿರುವ ಅವರು, ತಮಗೆ ಘಟನೆ ಬಗ್ಗೆ ಕಿಂಚಿತ್ತೂ ತಿಳಿದಿರಲಿಲ್ಲ. ಅಲ್ಲಿದ್ದ ಮಾಧ್ಯಮ ಮಿತ್ರರೂ ಕೂಡ ಈ ಬಗ್ಗೆ ಒಂದು ಮಾತು ಹೇಳಲಿಲ್ಲ. ನಾನು ಫೋನ್ನಲ್ಲಿ ಮಾತನಾಡುತ್ತಿದ್ದ ಕಾರಣ ನೋಡಲಿಲ್ಲ ಎಂದು ಹೇಳಿದ್ದಾರೆ.
ನಟಿ ರಚಿತಾ ರಾಮ್ ಲಾಲ್ಬಾಗ್ಗೆ ಭೇಟಿ ನೀಡಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಕಾರು ಚಾಲಕನ ಯಡವಟ್ಟಿನಿಂದ ಈ ಘಟನೆ ನಡೆದಿತ್ತು ಎನ್ನಲಾಗಿತ್ತು. ಈ ವೇಳೆ ಕಾರ್ಮಿಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಘಟನೆ ನಡೆದಾಗ ನಟಿ ಕಾರಿನಲ್ಲೇ ಇದ್ದರೂ ಕಾರನ್ನು ನಿಲ್ಲಿಸುವುದಾಗಲಿ, ಅವರ ಕಡೆ ತಿರುಗಿ ನೋಡುವುದಾಗಲಿ ಮಾಡಿಲ್ಲ. ಅವರು ಸೌಜನ್ಯಕ್ಕಾದರೂ ಕ್ಷಮೆ ಕೇಳಬೆಕಿತ್ತು ಎಂದು ಹಲವು ಮಂದಿ ಕಿಡಿಕಾರಿದ್ದರು.
ಇದಕ್ಕೆಲ್ಲಾ ಉತ್ತರವಾಗಿ ರಚಿತಾ ರಾಮ್ ಸ್ವಾತಂತ್ರ್ಯ ದಿನದಂದು ಕಾರ್ಮಿಕರಾದ ರಂಗಪ್ಪ ಅವರನ್ನು ಮನೆಗೆ ಕರೆಸಿಕೊಂಡು ಮನಸಾರೆ ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನಟಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾದರೆ ನಟಿ ವಿಡಿಯೋದಲ್ಲಿ ಹೇಳಿರುವುದೇನು ಎಂಬುದನ್ನು ಮುಂದೆ ನೋಡೋಣ.
” ಎಲ್ಲರಿಗೂ ನಮಸ್ಕಾರ. ಇಂದು ಸ್ವಾತಂತ್ರ್ಯ ದಿನಾಚರಣೆ. ನಾನು ಇಷ್ಟು ಹೊತ್ತಾದರೂ ವಿಶ್ ಮಾಡದೇ ಇರೋಕೆ ಕಾರಣ ಏನೆಂದು ಹೇಳುತ್ತೇನೆ. ಇವತ್ತು ಇವರ ಕೈಯಲ್ಲಿ ವಿಶ್ ಮಾಡಿಸುತ್ತೇನೆ. ಇವತ್ತು ಮೊದಲ ಬಾರಿಗೆ ಒಬ್ಬ ವಿಶೇಷ ವ್ಯಕ್ತಿಂದ ವಿಶ್ ಮಾಡಿಸುತ್ತಿದ್ದೇನೆ. ನಿನ್ನೇ ನಾನು ಲಾಲ್ಬಾಗ್ಕಾರ್ಯಕ್ರಮಕ್ಕೆಂದು ಹೊದ ವೇಳೆ ಆಕಸ್ಮಿಕವಾಗಿ ನನ್ನ ಕಾರು ಅಲ್ಲಿ ಕೆಲಸ ಮಾಡ್ತಿದ್ದ ಸ್ವಚ್ಛತಾ ಕಾರ್ಮಿಕರಿಗೆ ಟಚ್ ಆಗಿದೆ. ಇವತ್ತು ಏಕೆ ವಿಡಿಯೋ ಮಾಡ್ತಿದ್ದೇನೆ ಎಂದರೆ, ನಿನ್ನೆ ಈ ಘಟನೆ ನಡೆದಾಗ ನಿಜಕ್ಕೂ ನನ್ನ ಗಮನಕ್ಕೆ ಬರಲಿಲ್ಲ. ನಾನು ಫೋನ್ನಲ್ಲಿ ಇದ್ದೆ” ಎಂದಿದ್ದಾರೆ.
ಮುಂದುವರಿದು, “ನನಗೆ ಖಂಡಿತ ಇದು ಗೊತ್ತಾಗಲಿಲ್ಲ. ನನ್ನ ಹಲವಾರು ಮೀಡಿಯಾ ಸ್ನೇಹಿತರು ಅಲ್ಲೇ ಇದ್ದರೂ ಯಾರು ನನ್ನ ಗಮನಕ್ಕೆ ತರಲಿಲ್ಲ. ಒಕೆ… ನನ್ನ ಕಡೆಯಿಂದ ತಪ್ಪಾಗಿದೆ. ನನ್ನ ಚಾಲಕರ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್ ಕೂಡ ಒಬ್ಬ ಕಾರ್ಮಿಕ. ಅವರ ಕಡೆಯಿಂದ ಮತ್ತು ನನ್ನ ಕಡೆಯಿಂದ ಅಣ್ಣನ ಬಳಿ ಕ್ಷಮೆ ಕೇಳುತ್ತಿದ್ದೇನೆ. ತಪ್ಪಾಯಿತು ಅಣ್ಣಾ ಕ್ಷಮಿಸಿಬಿಡಿ. ಆಕಸ್ಮಿಕವಾಗಿ ನಡೆದಿರುವ ಘಟನೆ ಅದು. ಬೇಕು ಎಂದು ಮಾಡಿದ್ದಲ್ಲ. ಮನಸಾರೆ ನಾನು ನನ್ನ ಚಾಲಕ ಮತ್ತು ನನ್ನ ಪರವಾಗಿ ಕ್ಷಮೆ ಕೇಳುತ್ತೇನೆ. ಇದರಿಂದ ಕಾರ್ಮಿಕರಿಗೆ ಬೇಸವಾಗಿದ್ದರೇ ಕ್ಷಮಿಸಿ. ಮತ್ತೆ ಇಂತಹ ಘಟನೆ ನಡೆಯಲು ಬಿಡುವುದಿಲ್ಲ” ಎಂದು ಕ್ಷಮೆ ಕೇಳಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.