PLACE YOUR AD HERE AT LOWEST PRICE
ಬಂಗಾರಪೇಟೆ:ದಲಿತ ಸಮುದಾಯವನ್ನು ಅಪಮಾನಿಸುವ, ಜಾತಿ ದೌರ್ಜನ್ಯದ ಗಾದೆಯನ್ನು ಸಾರ್ವಜನಿಕವಾಗಿ ಬಳಸಿ ನಿಂದಿಸಿದ ನಟ ಉಪೇಂದ್ರ ಹಾಗು ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ರ ತಪ್ಪು ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ)ದ ಬಂಗಾರಪೇಟೆ ತಾಲ್ಲೂಕು ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ತಾಲೂಕು ಕಾರ್ಯದರ್ಶಿ ಪಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಪುತ್ತಳಿ ಬಳಿ ಪ್ರತಿಭಟನೆ ನಡೆಸಿ ಅವರು ಮಾತನಾಡಿ, ಮೇಲ್ಜಾತಿ ಹಾಗೂ ಅದರ ಬಲಾಢ್ಯ ವರ್ಗಗಳು ಬಳಸುವ ಈ ದೌರ್ಜನ್ಯದ ಗಾದೆ ಕೇವಲ ಕೆಲ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ನಿಂದಿಸುತ್ತಿಲ್ಲ, ಬದಲಿಗೆ ಇಡೀ ಸಮುದಾಯವನ್ನೇ ನಿಂದಿಸುತ್ತದೆ ಮತ್ತು ಅಪಮಾನಿಸುತ್ತದೆ.
ಘನ ನ್ಯಾಯಾಲಯವೂ ಕೂಡಾ, ಇಡೀ ದಲಿತ ಸಮುದಾಯವನ್ನೇ ಗುರಿಯಾಗಿಸಿ, ನಿಂದನೆಯನ್ನು, ಅಪಮಾನವನ್ನು ಮಾಡುವ ಈ ದೌರ್ಜನ್ಯದ ಗಾದೆಯ ಪ್ರಯೋಗವನ್ನು, ಕೇವಲ ಗಾದೆಯ ಬಳಕೆಯೆಂದು ಲಘುವಾಗಿ ಪರಿಗಣಿಸಿರುವುದು ಆಶ್ಚರ್ಯಕರ ಮತ್ತು ವಿಷಾಧನೀಯವಾಗಿದೆ ಎಂದರು.
ಈ ರೀತಿಯ ಗಾದೆಯನ್ನು ಸಾರ್ವಜನಿಕವಾಗಿ ಬಳಸುವ ಮೂಲಕ ಒಂದು ಸಮುದಾಯವನ್ನು ನಿಂದಿಸಬಹುದೇ? ಅಪಮಾನಿಸಬಹುದೇ ನೋವುಂಟು ಮಾಡಬಹುದೇ? ಎಂದು ಪ್ರಶ್ನಿಸಿದರು. ನ್ಯಾಯಾಲಯದ ಅಭಿಪ್ರಾಯ ಪ್ರಕಟಣೆಯ ನಂತರ, ನಾಯಕ ನಟ ಉಪೇಂದ್ರ ಹಾಗೂ ಸಚಿವರು ಬಳಸಿದ ಗಾದೆಯನ್ನು ಎತ್ತಿ ಹಿಡಿದು ಜಾತಿ ತಾರತಮ್ಯ ಹಾಗೂ ದೌರ್ಜನ್ಯ ಮೆರೆವ ಖಂಡನೀಯ ಬೆಂಬಲಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಅವುಗಳನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರಕಾರವನ್ನು ಸಿಪಿಐಎಂ ಒತ್ತಾಯಿಸುತ್ತದೆ ಎಂದು ಹೇಳಿದರು.
ಅದೇ ರೀತಿ, ಘನ ನ್ಯಾಯಾಲಯವು ಹೇಳಿಕೆಯನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ. ಚಿತ್ರರಂಗದ ನಾಯಕ ನಟನ ಹಾಗೂ ಮಂತ್ರಿ ಮಲ್ಲಿಕಾರ್ಜುನರ ಹೇಳಿಕೆ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ರಾಜ್ಯದ ಜನತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂಬುದನ್ನು ಗಮನಿಸಬೇಕಾಗಿದೆ.
ನಟ ಉಪೇಂದ್ರ ಹಾಗೂ ಮಂತ್ರಿಗಳು ಅವರಿಗೆ ಅರಿವಿಲ್ಲದೇ ಅಥವಾ ಯಾರನ್ನು ನಿಂದಿಸುವ ದುರುದ್ದೇಶವಿಲ್ಲದೇ ವಾಡಿಕೆಯಂತೆ ಬಳಸಿದ್ದು ನಿಜವಾದಲ್ಲಿ, ಅವರು ಸಾರ್ವಜನಿಕವಾಗಿ ದಮನಿತ ಸಮುದಾಯ ಹಾಗೂ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮುದಾಯ ರಾಜ್ಯಾದ್ಯಕ್ಷ ಅಚ್ಚುತ, ಸಿಐಟಿಯು ಮುಖಂಡರಾದ ಬಿ ಎಲ್ ಕೇಶವರಾವ್ , ಪಿಚ್ಚಕಣ್ಣು, ಮೋಹನ್, ಆರ್ ಡಿ ಅಲಿಕ್, ವೇಣುಗೋಪಾಲ್, ಮೇಲು ಮುರುಗನ್ ಮೊದಲಾದವರು ಇದ್ದರು.