• Thu. May 16th, 2024

PLACE YOUR AD HERE AT LOWEST PRICE

ಕಾವೇರಿ ನೀರಿಗಾಗಿ ಕರ್ನಾಟಕದ ಭೀಕರ ಯುದ್ಧ ಆರಂಭವಾಗಿದೆ. ತಮಿಳುನಾಡಿಗೆ ನಮ್ಮ ಕಷ್ಟ ಅರ್ಥವಾಗದೆ ಇರುವ ಅಲ್ಪಸ್ವಲ್ಪ ಕಾವೇರಿ ನೀರು ಬಿಡಿ ಅಂತಾ ಒತ್ತಡ ಹೇರುತ್ತಿದೆ. ಅಲ್ಲದೆ ಸುಪ್ರೀಂ ಮೆಟ್ಟಿಲು ಏರಿ, ಕರ್ನಾಟಕದ ವಿರುದ್ಧ ಈಗ ಕಾನೂನು ಸಮರ ಸಾರಿದೆ. ಆದರೆ ಈ ಹೊತ್ತಲ್ಲಿ ಕರ್ನಾಟಕದ ಸಂಸದರು ರಾಷ್ಟ್ರ ರಾಜಧಾನಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಒಗ್ಗಟ್ಟಾಗಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಂದಾಗಿದ್ದರು. ರಾಷ್ಟ್ರ ರಾಜಧಾನಿ ದೆಹಲಿ ಈ ಮಹತ್ವದ ಸಭೆಗೆ ವೇದಿಕೆ ಒದಗಿಸಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಸಂಕಷ್ಟ ಸೂತ್ರ ಸಿದ್ದವಾಗದೇ ಇರುವ ಕಾರಣ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕಷ್ಟಕರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಸರ್ವಪಕ್ಷ ಸಂಸದರ ಸಭೆಯಲ್ಲಿ ಹೇಳಿದ್ದಾರೆ.

ನಾಡು, ನುಡಿ, ಜಲ

ಕಾವೇರಿ ನೀರು ಹಂಚಿಕೆಯಲ್ಲಿ ಎದುರಾದ ಸಂಕಷ್ಟ ಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ. ಇದೇ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ ಎಂದು ಹೇಳಿದ್ದಾರೆ. ಹಾಗೇ ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ಬಗ್ಗೆ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಒಂದು ಧ್ವನಿಯಾಗಿ, ಗಟ್ಟಿಯಾಗಿ ನಿಲ್ಲಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.

ನಮಗೆ 106 ಟಿಎಂಸಿ ಬೇಕಿದೆ ಹಾಗೇ ರಾಜ್ಯದ ಪರಿಸ್ಥಿತಿ ವಿವರಿಸಿದ ಸಿಎಂ ಸಿದ್ದರಾಮಯ್ಯ, ಕುಡಿವ ನೀರಿಗಾಗಿ 33 ಟಿಎಂಸಿ ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗೆ 3 ಟಿಎಂಸಿ ಸೇರಿ ಒಟ್ಟಾರೆ 106 ಟಿಎಂಸಿ ನೀರು ನಮಗೆ ಅನಿವಾರ್ಯ. ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ ಎಂದಿದ್ದಾರೆ ಸಿಎಂ.

ಕರ್ನಾಟಕದಲ್ಲಿ ಆಗಸ್ಟ್ ಬಳಿಕ ಮಳೆ ಬೀಳುವುದಿಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ. ಈ ಪರಿಸ್ಥಿತಿ ಬಗ್ಗೆ ನಮ್ಮ ಕಾನೂನು ತಂಡ, ತಜ್ಞ ಹಾಗೂ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎದುರು ಸಮರ್ಥ ವಾದ ಮಂಡಿಸಿದೆ ಎಂದರು.

ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ.

ಹಾಗೇ ಇಂತಹ ಸ್ಥಿತಿ ಎದುರಾದಾಗ ಸಮರ್ಥವಾಗಿ ಜನ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ. ಆದ್ದರಿಂದ ನಮ್ಮ ನೀರನ್ನು ನಮ್ಮ ಜಾಗದಲ್ಲಿ ಸಂಗ್ರಹಿಸಲು ಮತ್ತು ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ಡ್ಯಾಂ ಅಗತ್ಯವಿದೆ. ಈ ಸಮಸ್ಯೆಗೆ ಮೇಕೆದಾಟು ಪರಿಹಾರ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಈ ಮೂಲಕ ಕರ್ನಾಟಕದ ಸರ್ಕಾರ ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ ಎಂಬ ಸಂದೇಶ ರವಾನಿಸಿದೆ.

ಸಂಸದರಿಗೆ ಸಮಸ್ಯೆ ವಿವರಿಸಿದ ಡಿಸಿಎಂ.

ಡಿಸಿಎಂ ಮತ್ತು ಜಲ ಸಂಪನ್ಮೂಲ ಖಾತೆ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ರಾಜ್ಯಕ್ಕೆ ಎದುರಾಗಿರುವ ಸಮಸ್ಯೆಯನ್ನ ಸಭೆಗೆ ವಿವರಿಸಿದ್ದಾರೆ. ಹಾಗೇ ಪಕ್ಷಭೇದ ಮರೆತು ರಾಜ್ಯದಲ್ಲಿ ಇರುವ ಸಂಸದರು ದೆಹಲಿಯಲ್ಲಿ ಒಗ್ಗಟ್ಟಿನ ಸಭೆ ನಡೆಸಿದ್ದಾರೆ. ಹಾಗೇ ಸರ್ವಪಕ್ಷ ನಿಯೋಗ ಕೊಂಡೊಯ್ದು ಪ್ರಧಾನಿ ಅವರ ಬಳಿ ಮನವಿ ಮಾಡಲು ಸಿದ್ಧತೆ ಸಾಗಿದೆ. ಹೀಗಾಗಿ ಎಲ್ಲಾ ಬೆಳವಣಿಗೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತಾ ಕಾದು ನೋಡಬೇಕಿದೆ.

ಒಟ್ನಲ್ಲಿ ಕಳೆದ ವರ್ಷ 2022ರ ಮಳೆಗಾಲದಲ್ಲಿ ತಮಿಳುನಾಡಿನ ಜಲಾಶಯಕ್ಕೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472 ಟಿಎಂಸಿ ಹೆಚ್ಚು ನೀರನ್ನ ಹೊರಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೊಂದು ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿಗೋಸ್ಕರ ತಮಿಳುನಾಡು ಕಿರಿಕ್ ಶುರುಮಾಡಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರ ಕೂಡ ಮೇಕೆದಾಟು ಅಸ್ತ್ರ ಪ್ರಯೋಗಿಸಿದೆ.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!