PLACE YOUR AD HERE AT LOWEST PRICE
- ಅ.28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗೆ ಪರೀಕ್ಷೆ
- ಸಮಸ್ಯೆ ಸೃಷ್ಟಿಸುವವರಿಗೆ ಉತ್ತರ ಕೊಡಲು ಸಾಧ್ಯವಿಲ್ಲ: ಎಂ ಸಿ ಸುಧಾಕರ್
ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅನುಮತಿ ನೀಡಿದೆ.
ಹಿಜಾಬ್ಗೆ ಅನುಮತಿ ನೀಡಿರುವ ಕೆಎಇ ನಿರ್ಧಾರಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ತಣ್ಣಗಾಗಿದ್ದ ಹಿಜಾಬ್ ವಿಚಾರ ಈಗ ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿವೆ.
ಹಿಜಾಬ್ ವಿಚಾರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲೂ ಗಲಾಟೆಯಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲುಗಳನ್ನು ಹಾಕಿಕೊಳ್ಳುತ್ತೇವೆ ಎಂದು ಕೆಲ ಹಿಂದೂ ವಿದ್ಯಾರ್ಥಿಗಳು ಆಗ್ರಹಿಸಿದ್ದರು.
ಅಲ್ಲದೆ, ಕೇಸರಿ ಶಾಲುಗಳನ್ನು ಒಳಗೊಂಡ ಪ್ರತಿಭಟನೆಗಳು ಮತ್ತು ಪ್ರತಿ ಪ್ರದರ್ಶನಗಳು ಇಡೀ ಕರ್ನಾಟಕ ಮಾತ್ರವಲ್ಲ, ಬಳಿಕ ಇತರ ರಾಜ್ಯಗಳಿಗೂ ಹರಡಿದವು. ರಾಜ್ಯಾದ್ಯಂತ ನಡೆದ ಕೋಮುಗಲಭೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು.
ಈಗ ಹಿಜಾಬ್ ಅನುಮತಿ ಕೊಟ್ಟಿರುವುದು ಸರಿಯಲ್ಲ, ಸರ್ಕಾರ ಇದನ್ನ ಕೂಡಲೇ ಹಿಂಪಡೆಯುವಂತೆ ಹಿಂದೂ ಜನಜಾಗೃತಿ ಸಂಘಟನೆ ಆಗ್ರಹಿಸಿದೆ. ಇಲ್ಲವಾದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ತಣ್ಣಗಾಗಿದ್ದ ಹಿಜಾಬ್ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಹಿಜಾಬ್ ಗೊಂದಲದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ. ಸುಧಾಕರ್ ಅವರು ಮಾತನಾಡಿ, “ಹಿಜಾಬ್ ಧರಿಸಿ ಪರೀಕ್ಷೆ ಬರೆಯುವ ವಿಷಯದಲ್ಲಿ ಸಮಸ್ಯೆ ಸೃಷ್ಟಿ ಮಾಡಲೇಬೇಕು ಎಂಬವರಿಗೆ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸ್ವಾತಂತ್ರ್ಯ ದೃಷ್ಟಿಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಸಮಸ್ಯೆ ಸೃಷ್ಟಿ ಮಾಡಲು ಕೆಲವರು ಇರುತ್ತಾರೆ. ಅವರನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ” ಎಂದರು.
“ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಇರುವುದು ಕಾಲೇಜುಗಳಿಗೆ. ಈಗ ನಡೆಯುತ್ತಿರುವುದು ಬೋರ್ಡ್ ಪರೀಕ್ಷೆ. ನೀಟ್ ಪರೀಕ್ಷೆಯನ್ನು ಹಿಜಾಬ್ ಧರಿಸಿ ಬರೆಯಲು ಅವಕಾಶವಿದೆ. ನಮ್ಮ ಕೆಇಎ ನಡೆಸುತ್ತಿರುವ ಪರೀಕ್ಷೆಯಲ್ಲಿ ಒಂದು ಗಂಟೆ ಮುಂಚೆ ಬಂದು ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಿದ್ದೇವೆ.
ಇದರಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ. ಕೆಲವರು ಬೇರೆ ಕಾರಣಗಳನ್ನು ಮುಂದಿಟ್ಟು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿರಬಹುದು. ಎಲ್ಲರಿಗೂ ಅವರ ಇಚ್ಛೆಯಂತೆ ಬಟ್ಟೆ ಧರಿಸುವ ಅವಕಾಶವಿದೆ” ಎಂದು ಸಚಿವರು ತಿಳಿಸಿದ್ದಾರೆ.