PLACE YOUR AD HERE AT LOWEST PRICE
“ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ ಯಾರೂ ಕೂಡಾ ತಲೆಕೆಡಿಸಿಕೊಂಡಿಲ್ಲ” ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದರು.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕೋರಿಕೆಯ ಮೇರೆಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮುಂಬೈನ ‘ಮಾತೋಶ್ರೀ’ಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ನಾವು ಹಿಂದೂ ಧರ್ಮವನ್ನು ಅನುಸರಿಸುತ್ತೇವೆ. ನಾವು ಪುಣ್ಯ ಮತ್ತು ಪಾಪವನ್ನು ನಂಬುತ್ತೇವೆ. ವಿಶ್ವಾಸಘಾತ ದೊಡ್ಡ ಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಉದ್ಧವ್ ಠಾಕ್ರೆಯವರಿಗೂ ಅದುವೇ ಸಂಭವಿಸಿದೆ” ಎಂದು ತಿಳಿಸಿದ್ದಾರೆ.
“ನನಗೆ ಉದ್ಧವ್ ಠಾಕ್ರೆ ಕರೆ ಮಾಡಿದರು, ಹಾಗಾಗಿ ನಾನು ಇಲ್ಲಿಗೆ ಬಂದೆ. ನನ್ನನ್ನು ಸ್ವಾಗತಿಸಿದ ಠಾಕ್ರೆ ಅವರ ಬಳಿ ನಾನು ನಿಮಗಾದ ದ್ರೋಹದಿಂದಾಗಿ ನಮಗೆ ನೋವಾಗಿದೆ ಎಂದು ಹೇಳಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ನಮ್ಮ ನೋವು ಹೋಗುವುದಿಲ್ಲ” ಎಂದು ಹೇಳಿದರು.
“ಕೇದಾರನಾಥ ದೇವಾಲಯವನ್ನು ದೆಹಲಿಯಲ್ಲಿ ಮಾಡಲು ಸಾಧ್ಯವಿಲ್ಲ. ಹನ್ನೆರಡು ಜ್ಯೋತಿರ್ಲಿಂಗಗಳನ್ನು ವ್ಯಾಖ್ಯಾನಿಸಲಾಗಿದೆ. ಅದರ ಸ್ಥಳವನ್ನು ನಿಗದಿಪಡಿಸಲಾಗಿದೆ. ಇದು ತಪ್ಪು” ಎಂದು ಹೇಳಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, “ಕೇದಾರನಾಥದಲ್ಲಿ 228 ಕೆಜಿ ಚಿನ್ನದ ಹಗರಣ ನಡೆದಿದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ನಾವು ಪ್ರಧಾನಿ ಮೋದಿಯವರ ಹಿತೈಷಿಗಳು” ಎಂದರು.
“ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದಲ್ಲಿ ಯಾರೂ ಯಾಕೆ ಚಕಾರ ಎತ್ತುತ್ತಿಲ್ಲ? ಕೇದಾರನಾಥದಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ? ನಂತರ ಮತ್ತೊಂದು ಹಗರಣ ನಡೆಯಲಿದೆ. ಕೇದಾರನಾಥದಲ್ಲಿ ಚಿನ್ನ ನಾಪತ್ತೆಯಾದ ಬಗ್ಗೆ ತನಿಖೆಯಿಲ್ಲ. ಇದಕ್ಕೆ ಯಾರು ಹೊಣೆ” ಎಂದು ಪ್ರಶ್ನಿಸಿದರು.