ತಡರಾತ್ರಿ ಅನಗತ್ಯವಾಗಿ ಓಡಾಡುವವರಮೇಲೆ ನಿಗಾ ಇಟ್ಟು ಮನೆಗೆ ಕಳುಹಿಸಲು ರಾತ್ರಿ ಬೀಟ್ ಪೊಲೀಸರಿಗೆ ನೂತನ ಎಸ್ಪಿ ಎಂ.ನಾರಾಯಣ ಸೂಚನೆ ನೀಡಿದರು.
ಕೋಲಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲೆಯ ಸಮಸ್ತ ಪೊಲೀಸರಿಂದ ಕವಾಯತು ಗೌರವ ಸ್ಪೀಕರಿಸಿದ ನಂತರ ಪೊಲೀಸರ ಕರ್ತವ್ಯಜವಾಬ್ದಾರಿಗಳು ಮತ್ತು ಆದ್ಯತಾ ಕೆಲಸಗಳ ಕುರಿತಂತೆ ಅವರು ಸೂಚನೆಗಳನ್ನು ನೀಡಿದರು.
ತಡರಾತ್ರಿ ಕೆಲವು ಯುವಕರು ಡಾಬಾ ಹೋಟೆಲ್ ಮತ್ತಿತರೆಡೆ ಸುತ್ತಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ, ಇಂತ ಯುವಕರ ಹೆಸರು ಮತ್ತು ಮೊಬೈಲ್ಸಂಖ್ಯೆಗಳನ್ನು ಕಡ್ಡಾಯವಾಗಿ ಬೀಟ್ ಪೊಲೀಸರು ದಾಖಲಿಸಿಕೊಳ್ಳಬೇಕು, ಇದೇ ಯುವಕರು ಮತ್ತೇ ಮತ್ತೇ ಮಧ್ಯರಾತ್ರಿ ವೇಳೆ ರಸ್ತೆಯಲ್ಲಿಕಾಣಿಸಿಕೊಂಡರೆ ಪೊಲೀಸ್ ಠಾಣಾ ಅತಿಥಿಯಾಗಿ ಬುದ್ದಿ ಹೇಳಬೇಕು ಎಂದು ಅವರು ತಾಕೀತು ಮಾಡಿದರು.
ಯುವಕರು ರಾತ್ರಿ ವೇಳೆ ಅನಗತ್ಯವಾಗಿ ಸುತ್ತಾಡುವುದರಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ, ಇಂತವರನ್ನು ಅವರ ಮನೆಗಳಲ್ಲಿ ನೆಮ್ಮದಿಯಿಂದ ಕುಟುಂಬದೊಂದಿಗೆ ಸಮಯ ಕಳೆಯುವಂತೆ ಮಾಡಬೇಕಾಗಿದೆಯೆಂದು ಹೇಳಿದರು.
ಪೊಲೀಸ್ ಸಿಬ್ಬಂದಿ ಕಳಂಕ ರಹಿತವಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಗೌರವ ತರಬೇಕು ‘ನಿಮ್ಮ ಠಾಣೆ ನಿಮ್ಮ ಹೆಮ್ಮೆ’ ಎಂದು ಭಾವಿಸಿ ಸ್ವಚ್ಛವಾದ ಮನಸ್ಸಿನಲ್ಲಿ ಸಾರ್ವಜನಿಕ ಸೇವೆಯನ್ನು ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನೂತನ ಜಿಲ್ಲಾ ಎಸ್ ಪಿ ನಾರಾಯಣ ಕರೆ ನೀಡಿದ್ದಾರೆ .
ಸಾರ್ವಜನಿಕರು ಠಾಣೆಗೆ ಬಂದರೆ ಅವರನ್ನು ಗೌರವಯುತವಾಗಿ ಕಾಣಬೇಕು ಅವರಿಗೆ ಕಾನೂನು ನೆರವು ಒದಗಿಸಬೇಕು ಎಂದು ಕಿವಿ ಮಾತನಾಡಿದರು. ಜನ ಸಾಮಾನ್ಯರು ತಮ್ಮ ದೂರುಗಳನ್ನು ೧೧೨ ಸಂಖ್ಯೆ ಬಳಸಿಕೊಂಡು ದಾಖಲಿಸಬಹುದೆಂದು ಅವರು ಸಲಹೆ ನೀಡಿದರು.
ಕರ್ತವ್ಯಕ್ಕೆ ಹಾಜರಾಗದೆ ವಿನಾಕಾರಣ ಯಾವುದೇ ಪೊಲೀಸ್ ಸಿಬ್ಬಂದಿ ಕೇಂದ್ರ ಕಚೇರಿಗೆ ಅಥವಾ ಹೊರಗಡೆ ಓಡಾಡುವುದಕ್ಕೆ ಅನುಮತಿ ಇಲ್ಲ, ಏನೇ ದೂರುಗಳಿದ್ದರೂ ಸಂಬಂಧಪಟ್ಟ ಡಿವೈಎಸ್ಪಿ ಅವರ ಅನುಮತಿ ಪಡೆದು ಕೇಂದ್ರ ಕಚೇರಿಗೆ ಬರಬೇಕು.
ಸಣ್ಣ ಪುಟ್ಟ ಯಾವುದೇ ರೀತಿಯ ಕುಂದುಕೊರತೆಗಳು ಇದ್ದಲ್ಲಿ ಸಿಬ್ಬಂದಿ ಕಚೇರಿಗೆ ಬರುವುದಾಗಲಿ ಅಥವಾ ಫೋನ್ ಕರೆ ಮಾಡುವುದಾಗಲಿ ಮಾಡುವುದು ಬೇಡ ಬದಲಾಗಿ ಕುಂದು ಕೊರತೆಗಳಿಗೆಂದೇ ವಾಟ್ಸಪ್ ಗ್ರೂಪ್ ಇದ್ದು ಆ ಮೂಲಕ ತಮ್ಮ ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಅತಿ ಜರೂರು ಕೆಲಸಗಳಿದ್ದಲ್ಲಿ ಮಾತ್ರ ನೇರವಾಗಿ ಕೇಂದ್ರ ಕಚೇರಿಗೆ ಡಿವೈಎಸ್ಪಿ ಲಿಖಿತ ಅನುಮತಿಯೊಂದಿಗೆ ಮಾತ್ತ ಬರಬೇಕು ಎಂದು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಸಲಹೆ ನೀಡಿದರು.
ಇನ್ನೂ ಪೊಲೀಸರು ಕಾರ್ಯಕ್ಷೇತ್ರದಲ್ಲಿ ತಮ್ಮ ಕರ್ತವ್ಯವನ್ನು ಸುಭದ್ರವಾಗಿ ನಿರ್ವಹಿಸಲು ಎಎಸ್ಐ ಮೇಲ್ಪಟ್ಟ ಎಲ್ಲಾ ಅಧಿಕಾರಿಗಳು ತಮ್ಮಲ್ಲಿರುವ ರಕ್ಷಣಾ ಆಯುಧಗಳನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು ಸಾರ್ವಜನಿಕ ಕೆಲಸ ಮಾಡುವಾಗ ಪೊಲೀಸರು ಪೂರ್ವಗ್ರಹ ಪೀಡಿತರಾಗಿರದೆ, ನ್ಯೂಟ್ರಲ್ ಆಗಿ ಕೆಲಸ ಮಾಡಬೇಕು. ಕಾನೂನು ಚೌಕಟ್ಟು ಬಿಟ್ಟು ಯಾವುದೇ ರೀತಿಯ ನಿರ್ಧಾರಗಳನ್ನು ಮಾಡಬಾರದು, ಕಾನೂನು ನಿಯಮಗಳ ಅಡಿಯಲ್ಲಿ ಕೆಲಸ ಮಾಡುವ ಮೂಲಕ ಇಲಾಖೆಗೆ ಗೌರವ ತರಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರು ತಮ್ಮ ಯಾವುದೇ ರೀತಿಯ ಕುಂದು ಕೊರತೆಗಳ ಅಹವಾಲುಗಳು ಅಥವಾ ದೂರುಗಳು ಇದ್ದಲ್ಲಿ ಎಸ್ ಪಿ ಕಚೇರಿಯಲ್ಲಿ ಸಲ್ಲಿಸಬೇಕಾದರೆ ಮಧ್ಯಾಹ್ನ 3-30 ಗಂಟೆ ನಂತರ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ .
ಅದೇ ರೀತಿ ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗ ಸಭೆಗಳಾಗಲಿ ಪ್ರತಿಭಟನೆಗಳಾಗಲಿ ಮೆರವಣಿಗೆಗಳಾಗಲಿ ನಡೆಸಬೇಕೆಂದರೆ ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಲೇಬೇಕು ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಳಹಂತದ ಪೊಲೀಸ್ ಅಧಿಕಾರಿಗಳು ವಿಶ್ವಾಸದ ಮೇಲೆ ಶಿಫಾರಸ್ಸು ಮಾಡಿದರೆ ಮಾತ್ರ ಪ್ರತಿಭಟನೆಗೆ ಹಾಗೂ ಹೋರಾಟಗಳಿಗೆ ಅನುಮತಿಯನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕವಾಯತು ಪ್ರದರ್ಶನ ಮಾಡಿದ ಡಿಎಆರ್ ತಕಡಿಗೆ ಹಾಗೂ ಬ್ಯಾಂಡ್ ಸೆಟ್ ತಂಡಕ್ಕೆ 10 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಲಾಯಿತು.
ಇದೇ ವೇಳೆ ರಾತ್ರಿ ಗಸ್ತಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಾದ ಕೃಷ್ಣಪ್ಪ ಗುಣಶೇಖರ್ ಹಾಗೂ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.
ಪೊಲೀಸ್ ಸಿಬ್ಬಂದಿ ರಾತ್ರಿ ಬಿಟ್ಟು ವ್ಯಾಪ್ತಿಯನ್ನು ಶೇಕಡ 90 ಮಟ್ಟಕ್ಕೆ ವಿಸ್ತರಿಸಿಕೊಳ್ಳಬೇಕು ತನಿಖಾ ವಿಚಾರದಲ್ಲೂ ಪತ್ತೆಯಾಗದೆ ಉಳಿದಿರುವ ಎಲ್ಲಾ ಕೊನೆ ಪ್ರಕರಣಗಳ ತನಿಖೆಯನ್ನು ಶಕ್ತಿಮೀರಿ ಕೆಲಸ ಮಾಡಬೇಕಾಗಿದೆ, ಅತ್ಯಂತ ಚುರುಕಿನಿಂದ ಪೊಲೀಸ್ ಸಿಬ್ಬಂದಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೇದೆಯಿಂದ ಜಿಲ್ಲಾಮಟ್ಟದ ಅಧಿಕಾರಿ ಅವರಿಗೂ ಎಲ್ಲರಿಗೂ ಸಮಾನ ಜವಾಬ್ದಾರಿ ಇದೆ ಈ ನಿಟ್ಟಿನಲ್ಲಿ ಯಾವುದೇ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಅದನ್ನು ಕಾಪಾಡಲು ಧೈರ್ಯದಿಂದ ತೀರ್ಮಾನ ಮಾಡಲು ಅಲ್ಲಿ ಹಾಜರಿರುವ ಯಾವುದೇ ಹಂತದ ಪೊಲೀಸ್ ಸಿಬ್ಬಂದಿಗೆ ಮುಕ್ತ ಅಧಿಕಾರವನ್ನು ನೀಡಲಾಗಿದೆ ಎಂದು ಉತ್ಸಾಹ ತುಂಬಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.