PLACE YOUR AD HERE AT LOWEST PRICE
ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಪೈಕಿ 87 ಹಳ್ಳಿಗಳಲ್ಲಿ ನಡೆದ 8ನೇ ವಿದ್ಯುತ್ ಅದಾಲತ್ ನಲ್ಲಿ 2418 ಗ್ರಾಹಕರು ಭಾಗವಹಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು.
ಗ್ರಾಹಕರಿಂದ ಸ್ವೀಕರಿಸಿರುವ 947 ಮನವಿಗಳ ಪೈಕಿ 398 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 549 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ದೂರವಾಣಿ ಸಂಪರ್ಕ ಇಲ್ಲವೇ ಖುದ್ದು ಕಚೇರಿಗೆ ತೆರಳಿ ನೀಡಬೇಕಾಗುತ್ತದೆ. ಆದರೆ ವಿದ್ಯುತ್ ಅದಾಲತ್ ನಲ್ಲಿ ಗ್ರಾಹಕರು ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ನೇರವಾಗಿ ಅಧಿಕಾರಿಗಳ ಮುಂದಿಟ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ನಿಗದಿತ ಸ್ಥಳಗಳಲ್ಲಿ, ನಿಗದಿತ ಸಮಯಕ್ಕೆ ಬೆಸ್ಕಾಂ ಅಧಿಕಾರಿಗಳು, ಇಂಜಿನಿಯರ್, ಸಿಬ್ಬಂದಿಗಳು ಹಾಜರಿದ್ದು ಅಹವಾಲು ಸ್ವೀಕರಿಸುತ್ತಾರೆ. ಜೊತೆಗೆ, ತ್ವರಿತಗತಿಯಲ್ಲಿ ಸಮಸ್ಯೆಯನ್ನು ವಿಲೇವಾರಿ ಮಾಡುತ್ತಾರೆ. ಈ ಭಾರಿ ಮೇಲಾಧಿಕಾರಿಗಳಿಗೆ ರವಾನಿಸಿರುವ 549 ಅರ್ಜಿಗಳನ್ನು ಶೀಘ್ರದಲ್ಲೆ ವಿಲೇವಾರಿ ಮಾಡಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದರು.
ವಿದ್ಯುತ್ ಸಂಪರ್ಕ, ವಿದ್ಯುತ್ ಕಳ್ಳತನ, ಮೀಟರ್, ಹೆಚ್ಚುವರಿ ಟ್ರಾನ್ಸ್ ಫಾರ್ಮರ್, ಬಿಲ್ಲಿಂಗ್, ವಿದ್ಯುತ್ ವ್ಯತ್ಯಯ, ಹೊಸ ಸಂಪರ್ಕ, ಹೊಸ ಟ್ರಾನ್ಸ್ ಫಾರ್ಮರ್, ಎಲ್ಟಿ ಲೈನ್ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್ನಲ್ಲಿ ಅಧಿಕಾರಿಗಳ ಗಮನ ಸೆಳೆದರು.