PLACE YOUR AD HERE AT LOWEST PRICE
ಚಾಕು ತೋರಿಸಿ ಸುಲಿಗೆ ಮಾಡಿದ ಆರೋಪಿಗಳ ಕುರಿತು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಎಡೆಮುರಿ ಕಟ್ಟುವಲ್ಲಿ ಗಲ್ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲಾರ ನಗರದ ಗಲ್ಪೇಟೆ ಬಡಾವಣೆಯ ಸಂಬಂಧಿಕರ ಮನೆಗೆ ಭಾನುವಾರ ಬಂದಿದ್ದ ಮಂಡ್ಯ ಮೂಲಕ ಭಾಸ್ಕರ್ ಎಂಬುವವರು ಅಂದು ರಾತ್ರಿ ಸುಮಾರು 10.30ರ ವೇಳೆಗೆ ಮೆಕ್ಕೆ ವೃತ್ತದ ಮಲ್ಲಿಕಾ ಬಾರ್ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತಿದ್ದಾಗ, ಬಾರ್ನಿಂದ ಹೊರ ಬಂದ ಇಬ್ಬರು ಯುವಕರು ಏಕಾಏಕಿ ಚಾಕು ತೋರಿಸಿ ಚಿನ್ನದ ಸರ ಹಾಗೂ ಮೊಬೈಲ್ ಕಸಿದು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಸೋಮವಾರ ಸಂಜೆ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ರವರು ದೂರು ನೀಡಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಗಲ್ಪೇಟೆ ಸಬ್ ಇನ್ಸ್ಪೆಕ್ಟರ್ ಅರುಣ್ ಪಾಟೀಲ್ ನೇತೃತ್ವದ ತಂಡ ರಾತ್ರಿ ೧೨ ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಸುರೇಶ್, ರಮೇಶ್ ಸಿಂಗ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಚಿನ್ನದ ಸರವನ್ನು ತುಂಡು ಮಾಡಿ ಅಡಮಾನವಿಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಪೊಲೀಸರು ಆರೋಪಿಗಳು ಅಡಮಾನವಿಟ್ಟಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಪಿಎಸ್ಐ ಅರುಣ್ ಪಾಟೀಲ್ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ಬೈರೇಗೌಡ, ಮೂರ್ತಿ, ರಫೀಕ್, ಅಡಪದ ಹಾಗೂ ಚಾಲಕ ಮಂಜುನಾಥ್ ಇದ್ದರು. ಘಟನೆ ಸಂಬಂಧ ತೀವ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿದಕ್ಕೆ ದೂರುದಾರರಾದ ಭಾಸ್ಕರ್ರವರು ಅಭಿನಂದನೆ ಸಲ್ಲಿಸಿದ್ದಾರೆ.