PLACE YOUR AD HERE AT LOWEST PRICE
- ಪಠ್ಯ ಪುಸ್ತಕ ಓದುವುದರಿಂದ ಮಾತ್ರವೇ ಶೇ.೧೦೦ ಅಂಕ ಗಳಿಕೆ ಸಾಧ್ಯ
ಪಠ್ಯ ಪುಸ್ತಕ ಓದುವರಿಂದ ಮಾತ್ರವೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.೧೦೦ ಅಂಕ ಪಡೆಯಲು ಸಾಧ್ಯ ಎಂದು ಜಿಲ್ಲೆಯಿಂದ ನಿವೃತ್ತರಾಗಿರುವ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಹೇಳಿದರು.
ಕೋಲಾರ ತಾಲೂಕಿನ ಕೆಂಬೋಡಿ ಗ್ರಾಮದ ಜನತಾ ಪ್ರೌಢಶಾಲೆಯಲ್ಲಿ ಸೋವಾರ ಆಯೋಜಿಸಲಾಗಿದ್ದ ಹುತಾತ್ಮದಿನಾಚರಣೆ ಮತ್ತು ತಮ್ಮಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಸಮರ್ಥವಾಗಿ ಎದುರಿಸುವ ಟಿಪ್ಸ್ ನೀಡಿದರು.
ತಾವು ನಿವೃತ್ತರಾಗುವ ಮುನ್ನ ವಿದ್ಯಾರ್ಥಿಗಳಿಗೆ ನೀಡಿರುವ ನನ್ನನ್ನೊಮ್ಮೆ ಗಮನಿಸಿ, ವಿಷಯವಾರು ಅಭ್ಯಾಸ ಪ್ರತಿಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಯಾವುದೇ ವಿದ್ಯಾರ್ಥಿ ತೇರ್ಗಡೆಯಾಗುವುದು ಕಷ್ಟವಲ್ಲ, ಆದರೆ, ಪರಿಪೂರ್ಣ ಅಂಕ ಗಳಿಸಬೇಕೆಂಬ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಆಳವಾಗಿ ಅಭ್ಯಾಸ ಮಾಡಬೇಕೆಂದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಕೇವಲ ೫೯ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ನಿಯಮಿತವಾಗಿ ಅಭ್ಯಾಸ ಮಾಡಿದರೆ ಕೋಲಾರ ಜಿಲ್ಲೆಯು ಈ ಬಾರಿಯೂ ಟಾಪ್ ಐದರ ಸ್ಥಾನಕ್ಕೇರುವುದರಲ್ಲಿ ಸಂಶಯವೇ ಇಲ್ಲವೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಗತ್ತಿಗೆ ಅಹಿಂಸಾ ತತ್ವದ ಸತ್ಯಾಗ್ರಹ ಅಸ್ತ್ರವನ್ನು ನೀಡಿದ ಮಹಾತ್ಮ ಗಾಂಧಿಜಿಯ ಸ್ಮರಣೆ ಜೊತೆಗೆ ಗಾಂಧಿ ಹಾದಿಯಲ್ಲಿಯೇ ಸಾಗಿದ ಜಿಲ್ಲೆಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಕೆಂಬೋಡಿ ಶಾಲೆಯ ಸಂಸ್ಥಾಪಕ ಚಿಕ್ಕಮುನಿಯಪ್ಪರ ಸ್ಮರಣೆ, ಜೊತೆಗೆ ಪುನೀತ್ ನೆನಪು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದೆಯೆಂದರು.
ತಾವು ಯಾವುದೇ ಹುದ್ದೆಯನ್ನು ನಿಬಾಯಿಸಿದರೂ ಅತ್ಯುತ್ತಮ ಸೇವೆ ಸಲ್ಲಿಸಬೇಕೆಂಬ ನಾಗೇಂದ್ರ ಪ್ರಸಾದ್ರ ತುಡಿತ ಅವರ ಸೇವಾವಧಿಯಲ್ಲಿ ಕಾಣಿಸುತ್ತಿದೆ, ಮಿನಿ ಅಂಬೇಡ್ಕರ್ರಂತೆ ಸಕಲವಿದ್ಯೆ ಪಾರಂಗತರಾಗಿ, ಕೊನೆಯಸ್ಥಾನದಲ್ಲಿದ್ದ ಎಸ್ಎಸ್ಎಲ್ಸಿ ಫಲಿತಾಂಶವನ್ನು ಗಗನಕ್ಕೇರಿಸಿ ಕೀರ್ತಿ ಇವರದು ಎಂದರು.
ನಮ್ಮ ನಡುವಿನ ಆಧುನಿಕ ಗಾಂಧಿಯಂತೆ ಕೆಂಬೋಡಿ ಶಾಲೆಯನ್ನು ಮುನ್ನಡೆಸುತ್ತಿರುವ ವಕೀಲ ಬಿಸಪ್ಪಗೌಡರು ಯುವ ಪೀಳಿಗೆಗೆ ಗಾಂಧಿಯ ಮಾದರಿಯಂತಿದ್ದಾರೆಂದರು.
ಶಾಲಾ ಕಾರ್ಯದರ್ಶಿ ಬಿಸಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಅತ್ಯುತ್ತಮವಾಗಿ ವ್ಯಾಸಾಂಗ ಮಾಡುವ ಮೂಲಕ ಶಾಲೆ, ಜಿಲ್ಲೆಗೆ ಪೋಷಕರಿಗೆ ಕೀರ್ತಿ ತರಬೇಕೆಂದರು.
ವಿದ್ಯಾರ್ಥಿಗಳು ಮಹಾತ್ಮ ಗಾಂಧಿಜಿ ಮತ್ತು ಚಿಕ್ಕಮುನಿಯಪ್ಪ ಕುರಿತು ಭಾಷಣಮಾಡಿದರು.
ಇದೇ ಸಂದರ್ಭದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ಶೈಲಾ ಪ್ರಸಾದ್ ದಂಪತಿಗಳನ್ನುಮತ್ತು ಶಾಲೆಯಿಂದ ನಾಳೆ ನಿವೃತ್ತರಾಗುತ್ತಿರುವ ಮುಖ್ಯೋಪಾಧ್ಯಾಯ ಎಂ.ಎಸ್.ರವಿಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ಪ, ನಿರ್ದೇಶಕ ಮುನಿವೆಂಕಟಪ್ಪ, ಶಿಕ್ಷಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಶಿಕ್ಷಕ ರಾಜಣ್ಣ ನಿರೂಪಿಸಿ, ಆಶ್ರೀತ ತಂಡ ಪ್ರಾರ್ಥಿಸಿ, ಮುಖ್ಯೋಪಾಧ್ಯಾಯ ಎಂ.ಎಸ್.ರವಿ ಸ್ವಾಗತಿಸಿದರು.
ಹುತಾತ್ಮದಿನದ ಅಂಗವಾಗಿ ಮಹಾತ್ಮಗಾಂಽಜಿ, ಸ್ವಾತಂತ್ರ್ಯ ಹೋರಾಟಗಾರ ಚಿಕ್ಕಮುನಿಯಪ್ಪ ಹಾಗೂ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸುದ್ದಿ ಓದಿ ಹಂಚಿ: