ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬಂಗಾರಪೇಟೆ:ಚೆನ್ನೈ ಕಾರಿಡಾರ್ ಗುತ್ತಿಗೆದಾರರಿಂದ ಕೆರೆ ಹಾಗೂ ರೈತರ ಬೆಳೆಯನ್ನು ರಕ್ಷಣೆ ಮಾಡುವಲ್ಲಿ
ವಿಫಲವಾಗಿರುವ ಗಣಿ ಹಾಗೂ ತೋಟಗಾರಿಕೆ ಅಧಿಕಾರಿಗಳ ವಿರುದ್ಧ ಹಾಗೂ ಮರಗಿಡಗಳಿಗೆ ಪರಿಹಾರ ಕೊಡುವಂತೆ
ಜಿಲ್ಲಾಡಳಿತವನ್ನು ಒತ್ತಾಯಿಸಿ ಫೆ.9ರಂದು ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ಕಾರಿಡಾರ್ ರಸ್ತೆ ಕಾಮಗಾರಿ
ನಡೆಯುತ್ತಿರುವ ಸ್ಥಳದಲ್ಲಿ ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಂಗಾರಪೇಟೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,
ಕೇಂದ್ರ ಸರ್ಕಾರದ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ರಸ್ತೆ ಅಭಿವೃದ್ಧಿಗೆ ವಶಪಡಿಸಿಕೊಂಡಿರುವ ವಿಶೇಷ
ಭೂಸ್ವಾಧೀನಾಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರವನ್ನು ನೀಡದೆ ರೈತರನ್ನು ವಂಚನೆ ಮಾಡುತ್ತಿದ್ದಾರೆ.
ಕೃಷಿ ಭೂಮಿಗೆ ನೋಂದಣಿ ಇಲಾಖೆ ಆಧಾರದ ಮೇಲೆ ಪರಿಹಾರ ನೀಡಲಾಗಿದೆಯಾದರೂ ನೂರಾರು ವರ್ಷಗಳಿಂದ ಅದೇ ಜಮೀನಿನಲ್ಲಿ ಬೆಳೆದಿದ್ದ ಮಾವು ತೆಂಗು ಸೀಬೆ ಹುಣಸೆ ಮತ್ತಿತರ ಬೆಳೆಗಳಿಗೆ ಪರಿಹಾರ ನೀಡಿಲ್ಲ.
ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕೇಂದ್ರ ಸರ್ಕಾರದಿಂದ ಮರಗಿಡಗಳಿಗೆ ಪರಿಹಾರವೂ ಬಿಡುಗಡೆಯಾಗಿದೆ ಆದರೂ ಬಿಡುಗಡೆಯಾಗಿರುವ ಹಣವನ್ನು ರೈತರಿಗೆ ನೀಡಿಲ್ಲ.
ವಿಶೇಷ ಭೂಸ್ವಾಧೀನಾಧಿಕಾರಿಗಳು, ಜಿಲ್ಲಾಧಿಕಾರಿಗಳು ಪಿ ನಂಬರ್ ದುರಸ್ಥಿ ಮಾಡುವವರೆಗೂ ಪರಿಹಾರ ನೀಡಬಾರದೆಂಬ ಆದೇಶ ಮಾಡಿದ್ದಾರೆ ಎಂದು ರೈತರನ್ನು ವಂಚಿಸಿ ಪಿ ನಂಬರ್ ನೆಪದಲ್ಲಿ ರೈತರ ಪರಿಹಾರವನ್ನು ಅಧಿಕಾರಿಗಳೇ ನುಂಗಿ ನೀರು ಕುಡಿಯುತ್ತಿದ್ದಾರೆಂದು ಆರೋಪಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಜೀವನಾಡಿಯಾಗಿರುವ ಕೆರೆಗಳನ್ನು ಚೆನ್ನೈ ಕಾರಿಡಾರ್ ಗುತ್ತಿಗೆದಾರರು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಗಣಿ ಇಲಾಖೆ ವತಿಯಿಂದ ಕೆರೆಗಳಲ್ಲಿ ಹತ್ತು ಅಡಿ ಮಣ್ಣು ತೆಗೆಯಲು ಪರವಾನಗಿ ಪಡೆದಿರುವ ಗುತ್ತಿಗೆದಾರರು ಇಂದು ಸುಮಾರು 40 ರಿಂದ 50 ಅಡಿ ಮಣ್ಣನ್ನು ತೆಗೆಯುತ್ತಾದ್ದಾರೆ.
ನಿಯಮದ ಪ್ರಕಾರ ಮಣ್ಣು ತೆಗೆದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಯೋಚನೆಯಲ್ಲಿ ಕೆರೆಗಳ ಜೊತೆಗೆ ಗೋಮಾಳ ಜಮೀನನ್ನು ನಾಶ ಮಾಡುವ ಇವರ ವಿರುದ್ಧ ಕ್ರಮಕೈಗೊಳ್ಳಲು ಜನಪ್ರತಿನಿಧಿಗಳ ಭಯವೇ ಎಂದು ಪ್ರಶ್ನೆ ಮಾಡಿದರು.
ಸಣ್ಣ ರೈತ ತೋಟಕ್ಕೆ ಮಣ್ಣು ತೆಗೆಯಲು ಹೋದರೆ ನೂರೊಂದು ಕಾನೂನು ಹೇಳಿ ರೈತರ ಅರ್ಜಿಯನ್ನು ನಿರ್ಲಕ್ಷ್ಯ ಮಾಡುವ ಅಧಿಕಾರಿಗಳೇ ಕೆರೆಗಳ ಮಾರಣಹೋಮ ನಿಲ್ಲಿಸಿ. ಇಲ್ಲವೇ ಅಧಿಕಾರ ಬಿಟ್ಟು ಮನೆಗೆ ತೊಲಗಿ ಎಂದು ಕಿಡಿಕಾರಿದರು.
ಚೆನ್ನೈ ಕಾರಿಡಾರ್ ಹಾದು ಹೋಗುವ ಪಕ್ಕದಲ್ಲಿರುವ ರೈತರ ವಾಣಿಜ್ಯ ಬೆಳೆಗಳಿಗೆ ತೊಂದರೆಯಾಗದ ರೀತಿ ಗುತ್ತಿಗೆದಾರರು ಟಿಪ್ಪರ್ ಲಾರಿಗಳು ಹಾದು ಹೋಗುವ ರಸ್ತೆಗೆ ಪ್ರತಿನಿತ್ಯ ನೀರನ್ನು ಸಿಂಪಡಣೆ ಮಾಡುವ ಮುಖಾಂತರ ಧೂಳಿನಿಂದ ರೈತರ ಬೆಳೆಗಳನ್ನು ರಕ್ಷಣೆ ಮಾಡಬೇಕು.
ಆದರೆ, ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಮಾಡುವ ರಸ್ತೆಯಿಂದ 5 ಕಿಮೀ ವ್ಯಾಪ್ತಿಯ ಎಲ್ಲಾ ಬೆಳೆಗಳು ಧೂಳಿನಿಂದ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ರೈತರು ಪರದಾಡುತ್ತಿದ್ದರೂ ಸ್ಪಂದಿಸಬೇಕಾದ ಜನ
ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ರೈತರ ಪಿ ನಂಬರ್ ದುರಸ್ಥಿ ಮಾಡಿ ಪರಿಹಾರ ನೀಡುವ ಜೊತೆಗೆ ಕೆರೆಗಳ ಅವ್ಯವಸ್ಥೆ ಮತ್ತು ರೈತರ
ಬೆಳೆಗಳಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಫೆ.9ರ ಗುರುವಾರ ನಷ್ಟ ಬೆಳೆ ಸಮೇತ ರಾಜ್ಯ ಹೆದ್ದಾರಿ ಬಂದ್ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಉಪಾಧ್ಯಕ್ಷ ಬಾಬಾಜಾನ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಕದಿರಿನತ್ತ ಅಪ್ಪೋಜಿರಾವ್, ಸಂದೀಪ್ರೆಡ್ಡಿ,
ಸಂದೀಪ್ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತಿ ವೆಂಕಟೇಶ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ, ಚಾಂದ್ಪಾಷ, ಆದಿಲ್, ಮೊಹಮ್ಮದ್ ಶೋಯೀಬ್, ರಾಮಸಾಗರ ವೇಣು, ಸುರೇಶ್ಬಾಬು,
ಪಾರಂಡಹಳ್ಳಿ ಮಂಜುನಾಥ್, ನಾಗಭೂಷಣ್ ಮುಂತಾದವರಿದ್ದರು.