PLACE YOUR AD HERE AT LOWEST PRICE
ಸ್ವ ಉದ್ಯೋಗವು ಹಲವರ ಜೀವನಕ್ಕೆ ಆಧಾರಸ್ತಂಭವಾಗಿದ್ದು, ಶ್ರಮ ವಹಿಸಿ ದುಡಿದರೆ ಸ್ವ ಉದ್ಯೋಗದಲ್ಲಿ ಅಭಿವೃದ್ದಿಯಾಗಲು ಉತ್ತಮ ಅವಕಾಶವಿದೆ ಎಂದು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವೆಂಕಟ ಕೃಷ್ಣಯ್ಯ ಹೇಳಿದರು.
ಕೋಲಾರ ನಗರದ ಡೂಂಲೈಟ್ ಸರ್ಕಲ್ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಉಚಿತ ಮೊಬೈಲ್ ಸರ್ವೀಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಮೊಬೈಲ್ ರಂಗವು ಬಹಳ ಬೃಹದಾಕಾರವಾಗಿ ಬೆಳೆದು, ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಒದಗಿಸಿಕೊಟ್ಟಿದೆ. ಅತಿ ಹೆಚ್ಚು ಆರ್ಥಿಕ ವಹಿವಾಟು ನಡೆಯುವ ಉದ್ಯಮವಾಗಿ ಬೆಳೆದು ನಿಂತಿದೆ ಎಂದರು.
ಉದ್ಯೋಗವಿಲ್ಲ ಎಂದು ಕೊರಗುತ್ತ ಕುಳಿತುಕೊಳ್ಳುವ ಬದಲು ಸ್ವ ಉದ್ಯೋಗ ಆರಂಭಿಸಿ, ಸ್ವಾವಲಂಭಿ ಜೀವನ ನಡೆಸುವುದು ಒಳಿತು. ಮೊಬೈಲ್ ಉದ್ಯಮ ಆರಂಭಿಸುವವರಿಗೆ ಕೆನರಾ ಬ್ಯಾಂಕ್ ಸಾಲ ಸೌಲಭ್ಯದ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಸೆಲ್ ಪೋನ್ ರಿಪೇರಿ ಶಿಬಿರಾರ್ಥಿಗಳು ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಉಚಿತ ಮೊಬೈಲ್ ಸರ್ವೀಸ್ ಮತ್ತು ರಿಯಾಯಿತಿ ದರದಲ್ಲಿ ಮೊಬೈಲ್ ಬಿಡಿಭಾಗಗಳನ್ನು ಮಾರಾಟ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕೆಲಸ ಎಂದರು.
ತರಬೇತಿ ಸಂಸ್ಥೆಯ ನಿರ್ದೇಶಕ ಬಾಲಾಜಿ ಎಂ.ಮಾತನಾಡಿ, ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಸಂಸ್ಥೆಯು ನಿರುದ್ಯೋಗಿಗಳಿಗೆ ಮೊಬೈಲ್ ವಿಷಯಕ್ಕೆ ಸಂಬಂಸಿದಂತೆ ಒಂದು ತಿಂಗಳ ಕೌಶಲ್ಯ ತರಬೇತಿ ನೀಡಿದೆ. ತರಬೇತಿ ಪಡೆದ ಶಿಬಿರಾರ್ಥಿಗಳು ಮತ್ತು ತರಬೇತಿ ಸಂಸ್ಥೆಯು ಜಂಟಿಯಾಗಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಒಂದು ದಿನದ ಮಟ್ಟಿಗೆ ಉಚಿತ ಮೊಬೈಲ್ ಸರ್ವೀಸ್ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಹಲವು ಸಾರ್ವಜನಿಕರು ದುರಸ್ಥಿಯಾಗಿದ್ದ ತಮ್ಮ ಮೊಬೈಲ್ -ನ್ ಗಳನ್ನು ಶಿಬಿರದ ಸಹಕಾರದೊಂದಿಗೆ ಸರ್ವೀಸ್ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ವಿಶಾಲಾಕ್ಷಿ, ಸಂಪನ್ಮೂಲ ವ್ಯಕ್ತಿಗಳಾದ ಗುರುರಾಜ್ ಸೇರಿಂದಂತೆ ಮತ್ತಿತರರು ಉಪಸ್ಥಿತರಿದ್ದರು.