PLACE YOUR AD HERE AT LOWEST PRICE
ನರೇಂದ್ರ ಮೋದಿಯವರು ತಮ್ಮ ನೀತಿಯ ಮೂಲಕ ಪ್ರಧಾನಮಂತ್ರಿ ಮಟ್ಟಕ್ಕೆ ಬೆಳೆದಿದ್ದಾರೆ ಯಾವುದೇ ಜಾತಿ ಹೆಸರು ಹೇಳಿಲ್ಲ, ಅಹಿಂದ ಕಟ್ಟಿಲ್ಲ, ಆದರೆ, ಜಾತ್ಯತೀತ ನಾನು ಎನ್ನುವವರು ಅವರ ಜಾತಿ ಬಿಟ್ಟು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅಂಬೇಡ್ಕರ್ ಚಿಂತನ ವೇದಿಕೆ ಆಶ್ರಯದಲ್ಲಿ ಗುರುವಾರ ನಡೆದ ಅಂತ್ಯೋದಯದಿಂದ ಸರ್ವೋದಯ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾತಿವಾದಿಗಳು ಜಾತಿ ಮುಂದಿಟ್ಟುಕೊಂಡು ಮತ ಕೇಳುತ್ತಾರೆ, ನಾವು ಜಾತಿ ಆಧಾರದ ಮೇಲೆ ಮತ ನೀಡುವ ಮೂಲಕ ಡಾ.ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ನಡೆದುಕೊಳ್ಳುತ್ತಿದ್ದೇವೆ. ನೆನಪಿರಲಿ, ಅಂಬೇಡ್ಕರ್ ಸಂವಿಧಾನ ಸಮರ್ಪಣೆ ಮಾಡಿದಾಗ ಇನ್ನು ಮುಂದೆ ರಾಜರು ಬುಲೆಟ್ನಿಂದ ರಾಜನಾಗಲ್ಲ, ಬ್ಯಾಲೆಟ್ನಿಂದ ರಾಜರಾಗುತ್ತಾರೆ ಎಂದರು. ನಾವು ಜಾತಿ ನೋಡಿ ಮತ ಹಾಕುವುದಾದರೆ ಅದು ಅಂಬೇಡ್ಕರ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡುವ ದ್ರೋಹವಾಗುತ್ತದೆ ಎಂದರು.
ವಂಶಪಾರಂಪರಿಕ ಅಧಿಕಾರ ಹಾಗೂ ಜಾತಿ ರಾಜಕಾರಣ ದಿಂದ ಪ್ರಜಾಪ್ರಭುತ್ವದ ಬೇರುಗಳು ದುರ್ಬಲ ಗೊಳ್ಳುತ್ತದೆ. ಸಮಸಮಾಜ ನಿರ್ಮಾಣಕ್ಕಾಗಿ ವಂಶಪಾರಂಪರೆ ಅಧಿಕಾರ ಹಾಗೂ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಬೇಕು ಎಂದ ಅವರು,ಕಾಂಗ್ರೆಸ್ ಪಕ್ಷವು ವಂಶಪಾರಂಪರೆ ಬೀಜವನ್ನು ಪ್ರಜಾಪ್ರಭುತ್ವದಲ್ಲಿ ಬಿತ್ತುವ ಮೂಲಕ ಪ್ರಜಾಪ್ರಭುತ್ವ ಆಶಯ ದುರ್ಬಲಗೊಳಿಸಿದ್ದು, ಆ ಬೀಜದ ಬೇರುಗಳು ಬೇರೆ ಪಕ್ಷಗಳಲ್ಲಿಯೂ ಸಹ ಬೆಳೆಯುತ್ತಿದೆ. ಇದರಿಂದ ಸಂವಿಧಾನ ದುರ್ಬಲವಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಿರುವುದೇ ಜಾತಿ ಆಧಾರದ ಮೇಲೆ ತಾನು ಗೆಲ್ಲಬಹುದು ಎಂದು. ಅಹಿಂದ ಮತಗಳು ಹೆಚ್ಚಿವೆ ಎಂದು, ಜಾತಿ ರಾಜಕಾರಣ ಮಾಡುವವರು ಜಾತಿ ವ್ಯವಸ್ಥೆಯಲ್ಲಿ ನಮ್ಮನ್ನು ಬಂಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ನಾಯಕ ನಾಗಬೇಕಾದರೆ ನೀತಿ, ನೇತೃತ್ವ, ನಿಯತ್ತು ಅಳವಡಿಸಿಕೊಂಡು ಜನರ ಮಧ್ಯದಿಂದ ಲೀಡರ್ ಆಗಬೇಕು ಎಂದು ಹೇಳಿದರು.
ಬಿಜೆಪಿ ದಲಿತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಮಾತಿನಲ್ಲಿ ಹೇಳುವುದಕ್ಕಿಂತ ನಾವು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮಾತನಾಡುತ್ತವೆ ಎಂದರು. ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷವು ಅವರು ಮರಣ ಹೊಂದಿದಾಗ ಸಮಾಧಿ ಮಾಡಲು ಜಾಗವೂ ನೀಡಲಿಲ್ಲ, ಆದರೆ ಅವರ ನಾಯಕರನ್ನು ಎಕರೆಗಟ್ಟಲೆ ಜಾಗದಲ್ಲಿ ಮಣ್ಣು ಮಾಡಿದ್ದಾರೆ. ಇವರ ಈ ನೀತಿಯಿಂದಲೇ ನಾವು ತಿಳಿಯಬಹುದು ದಲಿತರ ಪರ ಕಾಂಗ್ರೆಸ್ ಇಲ್ಲವೆಂದು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಪಂಗಡಗಳಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಮುಂದೆಯೂ ಬಹಳಷ್ಟು ಅನುದಾನಗಳನ್ನು ತರುವ ಮೂಲಕ ದಲಿತರ ಏಳಿಗೆಗೆ ಸದಾ ಬಿಜೆಪಿ ಪಕ್ಷವು ಸಿದ್ಧವಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ದಲಿತ ಹಿರಿಯ ಮುಖಂಡ ಡಾ.ಚಂದ್ರಶೇಖರ್, ಆರ್ಪಿಐ ರಾಷ್ಟೀಯ ಕಾರ್ಯಾಧ್ಯಕ್ಷ ಡಾ. ವೆಂಕಟಸ್ವಾಮಿ, ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್, ಮಹೇಂದ್ರ ಕೌತಾಳ, ದಲಿತ ಮುಖಂಡರಾದ ಡಿ ಪಿ ಎಸ್ ಮುನಿರಾಜು, ಹನುಮಂತಪ್ಪ, ಶಂಕರಪ್ಪ ಹಾಗೂ ಮತ್ತಿತರರು ಭಾಗವಹಿಸಿದ್ದರು.