PLACE YOUR AD HERE AT LOWEST PRICE
ತನ್ನನ್ನು ಚಿಲ್ಲರೆ ಎಂದ ಸಿದ್ದರಾಮಯ್ಯ ತಮ್ಮ ಹೇಳಿಕೆ ವಾಪಸ್ ಪಡೆಯಲು ೨೪ ಗಂಟೆ ಗಡುವು ನೀಡಿದ – ಮಾಜಿ ಸಚಿವ ವರ್ತೂರ್ಪ್ರಕಾಶ್
ಸಿದ್ದರಾಮಯ್ಯನವರೇ ನೀವು ಈ ರಾಜ್ಯದ ಹಿರಿಯ ರಾಜಕಾರಣಿ ಇದ್ದೀರಿ, ಮಾತಿನ ಮೇಲೆ ಹಿಡಿತ ಇರಲಿ, ಚಾಮುಂಡೇಶ್ವರಿ ಮತ್ತು ವರುಣಾ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದ್ದು ಇದೇ ಚಿಲ್ಲರೆ ಎಂದು ಮರೆಯಬೇಡಿ ಎಂದು ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ತಿಳಿಸಿದರು.
ಅವರು ಭಾನುವಾರ ರಾತ್ರಿ ತಮ್ಮ ನಿವಾಸದಲ್ಲಿ ಕರೆದಿದ್ದ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ೨೦೦೬ರಲ್ಲಿ ಜೆಡಿಎಸ್ನಿಂದ ಬರಿಗೈನಲ್ಲಿ ಬಂದಾಗ ಚಾಮುಂಡೇಶ್ವರಿಯಲ್ಲಿ ರಾಜಕೀಯ ಪುನರ್ಜನ್ಮ ಪಡೆಯುವುದಕ್ಕೆ ಇದೇ ವರ್ತೂರ್ ಪ್ರಕಾಶ್ ಬೇಕಾಗಿತ್ತು. ಅಂದು ನಾನು ಇಲ್ಲದಿದ್ದರೆ ಇಂದು ನೀವು ಚಿಲ್ಲರೆ ಆಗಿರಬೇಕಿತ್ತು. ಸಿದ್ದರಾಮಯ್ಯನವರೇ ನನ್ನನ್ನು ಚಿಲ್ಲರೆ ಎನ್ನುವ ಮೂಲಕ ಇಡೀ ಕೋಲಾರದ ಜನರನ್ನು ಅವಹೇಳನ ಮಾಡಿದ್ದೀರಿ, ೨೪ ಗಂಟೆ ಒಳಗಾಗಿ ನೀವು ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
‘ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರವಾಗಿ ನಾನು ಕೆಲಸ ಮಾಡುತ್ತಿದ್ದ ವೇಗಕ್ಕೆ ಹತಾಶರಾದ ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಗುಂಪಿನೊoದಿಗೆ ನನ್ನ ಮೇಲೆ ದಾಳಿ ನಡೆಸಿದಾಗ ಮಹಡಿಯಿಂದ ಜಿಗಿದು, ಒಂದು ಹಳೇ ಕಾರ್ ಕೆಳಗೆ ಇಡೀ ರಾತ್ರಿ ಕಳೆಯುವ ಮೂಲಕ ಜೀವ ಉಳಿಸಿಕೊಂಡು ಸಿದ್ದರಾಮಯ್ಯ ಪರವಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇನೆ ‘ಎಂದು ನೆನಪಿಸಿದ ವರ್ತೂರ್ ಪ್ರಕಾಶ್, ಕೋಲಾರ ಕ್ಷೆತ್ರದ ಶೇ.೮೦ ಜನತೆ ನನಗೆ ಮತ ಹಾಕಲು ನಿರ್ಧರಿಸಿದ್ದು, ಇಂತಹ ಮತದಾರರನ್ನು ಚಿಲ್ಲರೆ ಎಂದು ಕರೆದಿರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ಪಾಠ ಕಲಿಸಲಿದ್ದಾರೆಂದು ವರ್ತೂರ್ ಪ್ರಕಾಶ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಸಿ.ಎನ್.ಅರುಣ್ ಪ್ರಸಾದ್, ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ ಇದ್ದರು.