PLACE YOUR AD HERE AT LOWEST PRICE
ಕೆಜಿಎಫ್:ಹಾಲು ಕರೆಯುವ ಹಸು ಆರೋಗ್ಯದಿಂದ ಇದ್ದರೆ ಮಾತ್ರ ಆರೋಗ್ಯಕರವಾದ ಹಾಲನ್ನು ಉತ್ಪಾದನೆ ಮಾಡಲು ಸಾಧ್ಯ ಎಂದು ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಎನ್ಎಸ್ಎಸ್ ಯೋಜನೆ ಅಧಿಕಾರಿ ಲಕ್ಷ್ಮೀಪತಿ ಹೇಳಿದರು.
ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉನ್ನತ್ ಭಾರತ್ ಅಭಿಯಾನದಡಿ ಶುದ್ದ ಹಾಲಿನ ಉತ್ಪಾದನೆ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೊಗ್ಯಕರ ಹಾಲನ್ನು ಉತ್ಪಾದನೆ ಮಾಡಲು ರೈತರು ಮೊದಲು ಅತ್ಯಾಧುನಿಕ ದನದ ಕೊಟ್ಟಿಗೆಯನ್ನು ಸಿದ್ದಪಡಿಸಿಕೊಳ್ಳಬೇಕು, ಪ್ರತಿದಿನ ಹಾಲು ಕರೆಯುವ ಹಸುಗಳ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಒಂದು ಮಿಶ್ರತಳಿಯ ಹಸು ದಿನವೊಂದಕ್ಕೆ 15 ರಿಂದ 20 ಲೀಟರ್ ಹಾಲು ಕರೆಯುತ್ತದೆ, ಹಸುವಿನಿಂದ ಗುಣಮಟ್ಟದ ಹಾಲು ಕರೆಯಬೇಕಾದರೆ ಮೊದಲು ಹಸುವಿನ ಕೆಚ್ಚಲನ್ನು ನೀರಿನಿಂದ ತೊಳೆದು ಶುದ್ದ ಮಾಡಿ ಹಾಲನ್ನು ಕರೆಯಬೇಕು.
ಇಲ್ಲದೆ ಹೋದರೆ ಯಂತ್ರಗಳ ಸಹಾಯದಿಂದಲೂ ಹಾಲನ್ನು ಕರೆಯಬಹುದು. ಹಸುವಿಗೆ ಹಸಿ ಹುಲ್ಲು ಹೆಚ್ಚಿನ ಪ್ರಮಾಣದಲ್ಲಿ ನೀಡಿದರೆ ಹಸುವು ಗಟ್ಟಿಯಾದ ಹಾಲನ್ನು ನೀಡುತ್ತದೆ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಬೂಸಾ, ಹಿಂಡಿ, ಭತ್ತದ ಹೊಟ್ಟನ್ನು ಮಿಶ್ರಣ ಮಾಡಿ ಪಶುಗಳ ಆಹಾರವನ್ನು ತಯಾರಿಸಿ ಹಸುಗಳಿಗೆ ನೀಡುತ್ತಾರೆ. ಇದರಿಂದ ಸ್ವಲ್ಪ ಮಟ್ಟಿಗೆ ಹಾಲು ತೆಳ್ಳಗೆ ಇರುತ್ತದೆ, ಕಾರಣ ಹಸುವಿಗೆ ನೀಡುವ ಆಹಾರ ಮಿಶ್ರಣ ಮಾಡಲು ನೀರಿನ್ನು ಹೆಚ್ಚಾಗಿ ಉಪಯೋಗಿಸುವುದೇ ಇದಕ್ಕೆ ಕಾರಣ ಎಂದರು.
ಡಾ.ಟಿ.ವೆಂಕಟವರ್ದನ್, ಪ್ರಾಂಶುಪಾಲ ಸೈಯದ್ ಆರಿಫ್, ಡಾ.ಎಚ್.ಜಿ ಶೆಣೈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ಬಾಬು ಮೊದಲಾದವರು ಇದ್ದರು.